ಆವಲಗುರ್ಕಿ: ಆದಿಯೋಗಿ ಪ್ರತಿಮೆ ನೋಡಲು ಬರುವ ಭಕ್ತರಿಂದ ಸುಂಕ ವಸೂಲಿ ಆರೋಪ, ಭುಗಿಲೆದ್ದ ಆಕ್ರೋಶ
ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಬಳಿ ನಿರ್ಮಾಣವಾಗಿರುವ ಆದಿಯೋಗಿ ಮೂರ್ತಿಯನ್ನು ನೋಡಲು ಬರುವ ಭಕ್ತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಹಾಗಾದರೆ ಭಕ್ತರ ವಾಹನಗಳಿಗೆ ವಿಧಿಸುವ ಸುಂಕದ ವಿವರಗಳನ್ನು ಇಲ್ಲಿ ತಿಳಿಯಿರಿ.
ಚಿಕ್ಕಬಳ್ಳಾಪುರ, ಜನವರಿ, 30: ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ವ್ಯಾಪ್ತಿಯ ಕೌರನಹಳ್ಳಿ ಬಳಿ ನಿರ್ಮಾಣವಾಗಿರುವ 112 ಎತ್ತರದ ಆದಿಯೋಗಿ ಮೂರ್ತಿಯನ್ನು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು. ಆದಿಯೋಗಿ ಮೂರ್ತಿ ಲೋಕಾರ್ಪಣೆ ಆದಾಗಿನಿಂದಲೂ ಇಲ್ಲಿಗೆ ಭಕ್ತಸಾಗರವೇ ಹರಿದುಬರುತ್ತಿದೆ. ಅಲ್ಲದೇ ಶಿವನ ವಿಗ್ರಹ ನೋಡಲು ಬರುವ ಭಕ್ತರಿಂದ ಅವಲಗುರ್ಕಿ ಗ್ರಾಮ ಪಂಚಾಯಿತಿಯ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿಗೆ ಇಳಿದಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬರುತ್ತಿವೆ.
ಗ್ರಾಮ ಪಂಚಾಯತ್ ವಿರುದ್ಧ ಭಕ್ತರ ಆಕ್ರೋಶ
ಆದಿಯೋಗಿ ಶಿವನ ಮೂರ್ತಿಯನ್ನು ನೋಡಲು ಪ್ರತಿನಿತ್ಯ ಭಕ್ತಸಾಗರವೇ ಹರಿದುಬರುತ್ತಿದೆ. ದ್ವಿಚಕ್ರ ವಾಹನ, ಕಾರು ಅಲ್ಲದೇ ಮತ್ತಿತರ ವಾಹನಗಳನ್ನು ಮಾಡಿಕೊಂಡು ಭಕ್ತರು ಆಗಮಿಸುತ್ತಲೇ ಇದ್ದಾರೆ. ಅದರಲ್ಲೂ ಶಿವರಾತ್ರಿ ಸಮೀಪಿಸುತ್ತಿರವ ಕಾರಣ ಶಿವನ ದರ್ಶನಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲದೇ ಇತರ ಜಿಲ್ಲೆಗಳಿಂದಲೂ ಭಕ್ತಗಣ ಹರಿದುಬರುತ್ತಲೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಸ್ಥಳೀಯ ಗ್ರಾಮ ಪಂಚಾಯಿತಿ ತನಗೆ ಸಂಬಂಧವಿಲ್ಲದಿದ್ದರೂ, ರಸ್ತೆಯಲ್ಲಿ ನಿಂತು ಭಕ್ತರ ಬಳಿ ಹಣ ವಸೂಲಿಗೆ ಇಳಿದಿದೆ ಎನ್ನುವ ಕೂಗುಗಳು ಎದ್ದಿವೆ. ಇದಕ್ಕೆ ಜನರಿಂದ ಆಕ್ಷೇಪಗಳು ಕೂಡ ವ್ಯಕ್ತವಾಗುತ್ತಲೇ ಇವೆ. ವಡ್ರೇಪಾಳ್ಯದ ಕ್ರಾಸ್ ಬಳಿ ವಾಹನಗಳನ್ನು ತಡೆದು, ದ್ವಿಚಕ್ರ ವಾಹನಗಳಿಗೆ 10 ರೂಪಾಯಿ ಹಾಗೂ ಕಾರುಗಳಿಗೆ 30 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಲೇ ಇದೆ.
ಚಿಕ್ಕಬಳ್ಳಾಪುರ: 112 ಅಡಿ ಎತ್ತರದ ಆದಿಯೋಗಿ ಮೂರ್ತಿ ಅನಾವರಣಗೊಳಿಸಿದ ಬಸವರಾಜ ಬೊಮ್ಮಾಯಿ
ಭಕ್ತರ ಬಳಿ ಸುಂಕ ವಸೂಲಿ ಆರೋಪ
ಅದರಲ್ಲೂ ಆದಿಯೋಗಿ ಮೂರ್ತಿ ಇರುವ ಸ್ಥಳಕ್ಕೆ ತಲುಪಲು ಸರಿಯಾದ ರಸ್ತೆಯೂ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಭಕ್ತರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಮುಖ್ಯವಾಗಿ ರಸ್ತೆಯನ್ನೇ ಮಾಡದೇ ಇದೀಗ ಏಕಾಏಕಿ ಹಣ ವಸೂಲಿಗಿಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಿದೆ. ಇಶಾ ಫೌಂಡೇಷನ್ಗೆ ಸೇರಿದ ಖಾಸಗಿ ಜಾಗದಲ್ಲಿ ಆದಿಯೋಗಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ರಸ್ತೆಗಳನ್ನು ಸಹ ಇಶಾ ಫೌಂಡೇಷನ್ ಅಭಿವೃದ್ಧಿ ಪಡಿಸುತ್ತಿದೆ. ಆದರೆ ಆವಲಗುರ್ಕಿ ಗ್ರಾಮ ಪಂಚಾಯತಿ ವತಿಯಿಂದ ಹಣ ವಸೂಲಿ ಮಾಡುತ್ತಿರುವುದು ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ. ಹೀಗೆ ರಸ್ತೆ ಮಾಡುವ ಮುನ್ನವೇ ಭಕ್ತರ ಬಳಿ ಹಣ ವಸೂಲಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವ ಪ್ರಶ್ನೆಗಳು ಕೂಡ ಸಾರ್ವಜನಿಕ ವಲಯದಲ್ಲಿ ಎದ್ದಿವೆ.
ಆದಿಯೋಗಿ ಮೂರ್ತಿ ಉದ್ಘಾಟಿಸಿದ್ದ ಸಿಎಂ
ಇನ್ನು ಜನವರಿ 16ರಂದು ಆದಿಯೋಗಿ ಮೂರ್ತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆದಿಯೋಗಿ ಅವರನ್ನು ಪ್ರತ್ಯೇಕ್ಷ ದರ್ಶನ ಮಾಡುವಂತಹದ್ದು ಒಂದು ಸಾಧನೆಯಾಗಿದೆ. ಅದನ್ನು ಚಿಕ್ಕಬಳ್ಳಾಪುರದಲ್ಲಿ ಸ್ಥಾಪನೆ ಮಾಡಿರುವುದು ನಮ್ಮ ಪುಣ್ಯ. ಶಿವನನ್ನು ಅರ್ಥ ಮಾಡಿಕೊಂಡವರು, ಸೃಷ್ಟಿಯನ್ನು ಕೂಡ ಅರ್ಥೈಸಿಕೊಳ್ಳುತ್ತಾರೆ. ಹಾಗಯೇ ಹುಟ್ಟು ಸಾವು ನಡುವಿನ ಬದುಕು ಕ್ಷಣಿಕವಾಗಿದೆ. ದೇಹ ಮನಸ್ಸು ಒಂದಾದಾಗ ಅಮೃತ ಗಳಿಗೆಯ ದರ್ಶನವಾದಂತೆ. ಅದು ಯೋಗ ಮತ್ತು ಸಾಧನೆಯಿಂದ ಬರುತ್ತದೆ. ಅಂತಹ ಸಂದರ್ಭದಲ್ಲಿ ಆದಿಯೋಗಿ ದರ್ಶನ ಮನುಷ್ಯನಿಗೆ ದಾರಿ ದೀಪವಾಗುತ್ತದೆ. ಅನುಭವದಲ್ಲಿ ಅಮೃತವಿದ್ದು, ಅಮೃತಕ್ಕೋಸ್ಕರ ಇಡೀ ಜೀವನವನ್ನು ತ್ಯಜಿಸಿರುವ ಗಣ್ಯರ ಇದ್ದಾರೆ ಎಂದು ಮನದಟ್ಟು ಮಾಡಿಸಿದ್ದರು.