2014 ಲೋಕಸಭಾ ಚುನಾವಣೆ: ಕುಮಾರಸ್ವಾಮಿ ಸ್ಪರ್ಧೆಯ ಹಿಂದಿನ ರಹಸ್ಯವೇ ಬೇರೆ ಇತ್ತು
Recommended Video
'ತನ್ನ ಮಕ್ಕಳನ್ನು ರಾಜಕೀಯದಲ್ಲಿ ಮೇಲೆ ತರುವ ಸಲುವಾಗಿ, ಜೆ ಎಚ್ ಪಟೇಲ್, ಸಿಂಧ್ಯಾ, ಇಬ್ರಾಹಿಂ, ಸಿದ್ದರಾಮಯ್ಯ, ವೈ ಕೆ ರಾಮಯ್ಯ ಹೀಗೆ ಹತ್ತು ಹಲವಾರು ಮುಖಂಡರನ್ನು ಸಂಚಿನ ಮೂಲಕ, ಪಕ್ಷದಿಂದ ಹೊರಹಾಕಿದ ದೇವೇಗೌಡ, ಕೊನೆಗೂ ನನಗೂ ಅದನ್ನೇ ಮಾಡಿದ' ಇದು ಬಿಜೆಪಿ ಮುಖಂಡ ಬಿ ಎನ್ ಬಚ್ಚೇಗೌಡ, ಎಚ್ ಡಿ ದೇವೇಗೌಡ್ರ ವಿರುದ್ದ ಕಳೆದ ಲೋಕಸಭಾ ಚುನಾವಣೆಯಲ್ಲಿ ಹರಿಹಾಯ್ದಿದ್ದ ಪರಿ.
ಈ ಹಿಂದೆ ದೇವೇಗೌಡರ ಕ್ಯಾಂಪ್ ನಲ್ಲಿದ್ದ ಬಚ್ಚೇಗೌಡ ಮಾರ್ಚ್ 13, 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಚ್ಚೇಗೌಡ, ಕಾಂಗ್ರೆಸ್ಸಿನ ಎಂಟಿಬಿ ನಾಗರಾಜು ಅವರನ್ನು 3,878 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿ, ಯಡಿಯೂರಪ್ಪನವರ ಸರಕಾರದಲ್ಲಿ ಕಾರ್ಮಿಕ ಸಚಿವರೂ ಆಗಿದ್ದರು.
2014 ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆದ್ದ ಹೈಪ್ರೊಫೈಲ್ ಕ್ಷೇತ್ರಗಳು
2014ರ ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿ ವೀರಪ್ಪ ಮೊಯ್ಲಿ ಅವರಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಎಂದೇ ಹೇಳಲಾಗುತ್ತಿದ್ದ ಈ ಕ್ಷೇತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿಯಾಗಿ ಕೊನೇ ಕ್ಷಣದಲ್ಲಿ ಕಣಕ್ಕಿಳಿದರು.
ಕರ್ನಾಟಕ: 2014ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದ ಐವರು ಮುಖಂಡರು
ಬಿಜೆಪಿಗೆ ನೆಲೆಯೇ ಇಲ್ಲದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿತ್ತು. ಕುಮಾರಸ್ವಾಮಿ ಕಣಕ್ಕಿಳಿದ ನಂತರ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇರಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಅಸಲಿಗೆ, ಎಚ್ಡಿಕೆ ಕೊನೇ ಕ್ಷಣದಲ್ಲಿ ಕಣಕ್ಕಿಳಿದ ಕಾರಣವೇ ಬೇರೆ, ಮುಂದೆ ಓದಿ..
ದೊಡ್ಡ ಗೌಡರ ವಿರುದ್ದ ಕಿಡಿಕಾರುತ್ತಿದ್ದ ಬಚ್ಚೇಗೌಡ
ಜೆಡಿಎಸ್ ಪಕ್ಷವನ್ನು ಬಚ್ಚೇಗೌಡ ತೊರೆದ ನಂತರ, ರಾಜ್ಯದಲ್ಲೆಲ್ಲಾ ದೇವೇಗೌಡರು ತಮ್ಮ ರಾಜಕೀಯದಲ್ಲಿ ನಡೆಸಿದ ಷಡ್ಯಂತ್ರದ ಬಗ್ಗೆ ಹೇಳಿಕೆ ನೀಡುತ್ತಾ ಬರುತ್ತಿದ್ದರು. ಆಧುನಿಕ ಭಸ್ಮಾಸುರ, ಅವರು ಯಾರ ತಲೆಯ ಮೇಲೆ ಕೈಯಿಟ್ಟರೆ, ಅವರ ರಾಜಕೀಯ ಜೀವನ ಇತಿಶ್ರೀ. ಆದಿಚುಂಚನಗಿರಿ ಮಠದ ಹಿಂದಿನ ಶ್ರೀಗಳಾದ ಬಾಲಗಂಗಾಧರನಾಥ ಸ್ವಾಮೀಜಿ, ಇವರ ಕಾಟ ತಡೆಯಲಾರದೇ ತಮಿಳುನಾಡಿಗೆ ಹೋಗಲು ನಿರ್ಧರಿಸಿದ್ದರು ಎಂದೆಲ್ಲಾ ಬಚ್ಚೇಗೌಡರು, ದೊಡ್ಡ ಗೌಡರ ವಿರುದ್ದ ಕಿಡಿಕಾರುತ್ತಿದ್ದರು.
ಮೋದಿ ಬಂದು ಮಾಡಿದ ಭಾಷಣದ ನಂತರ, ಕ್ಷೇತ್ರದ ಚಿತ್ರಣವೇ ಬದಲು
ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ, ನಾಲ್ಕು ಕಾಂಗ್ರೆಸ್, ಎರಡು ಜೆಡಿಎಸ್ ಮತ್ತು ತಲಾ ಒಬ್ಬರು ಬಿಜೆಪಿ ಮತ್ತು ಪಕ್ಷೇತರರು 2013ರ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿದ್ದರು. ಬಿಜೆಪಿಗೆ ನೆಲೆಯಿಲ್ಲದಿದ್ದರೂ, ನರೇಂದ್ರ ಮೋದಿ ಹವಾ, ಕ್ಷೇತ್ರದಲ್ಲಿ ಮೋದಿ ಬಂದು ಮಾಡಿದ ಭಾಷಣದ ನಂತರ, ಕ್ಷೇತ್ರದ ಚಿತ್ರಣವೇ ಬದಲಾಗಿತ್ತು. ಬಿಜೆಪಿಗೆ ಊಹಿಸಲೂ ಅಸಾಧ್ಯವಾದ ಜನಬೆಂಬಲ ಸಿಗಲಾರಂಭಿಸಿತು.
ಬರದ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಾರಮ್ಯ ಮುರಿಯಲು ಸಾಧ್ಯವೆ?
ತನ್ನ ಮಗನನ್ನು ನಿಲ್ಲಿಸಲು ದೇವೇಗೌಡರು ನಿರ್ಧರಿಸಿದ್ದು
ತನ್ನನ್ನು ಮತ್ತು ತನ್ನ ಕುಟುಂಬವನ್ನು ಹೋದಲ್ಲಿ ಬಂದಲೆಲ್ಲಾ, ಸಾರ್ವಜನಿಕವಾಗಿ ಅವಮಾನಿಸುತ್ತಿರುವ ಬಚ್ಚೇಗೌಡರಿಗೆ, ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಲು, ತನ್ನ ಮಗನನ್ನು ನಿಲ್ಲಿಸಲು ದೇವೇಗೌಡರು ನಿರ್ಧರಿಸಿದ್ದು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಕುಮಾರಸ್ವಾಮಿ ಸೋತರೂ ಪರವಾಗಿಲ್ಲ, ಅವನು (ಬಚ್ಚೇಗೌಡ) ಗೆಲ್ಲಬಾರದು ಎನ್ನುವ ಕಾರಣಕ್ಕಾಗಿಯೇ ಕುಮಾರಸ್ವಾಮಿ, ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದ್ದು. ಅಲ್ಲಿ ಒಕ್ಕಲಿಗ ಮತಬ್ಯಾಂಕ್ ದೇವೇಗೌಡರಿಗೆ ಡಿವೈಡ್ ಆಗಬೇಕಾಗಿತ್ತು
9,520 ಮತಗಳ ಅಂತರದಿಂದ ಮೊಯ್ಲಿ, ಬಚ್ಚೇಗೌಡರ ವಿರುದ್ದ ಜಯ
ಹಾಗಾಗಿ, ತ್ರಿಕೋಣ ಸ್ಪರ್ಧೆ ಏರ್ಪಟ್ಟು ಅದರ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿತು. ದೇಶದ 2014ರ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ತುರುಸಿನ ಸ್ಪರ್ಧೆಯ ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರದ ಫಲಿತಾಂಶ, ಕೊನೆಯ ಹಂತದದವರೆಗೂ ಚಂಚಲೆಯಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿಯಲ್ಲಿ ಕೇವಲ 9,520 ಮತಗಳ ಅಂತರದಿಂದ ವೀರಪ್ಪ ಮೊಯ್ಲಿ, ಬಚ್ಚೇಗೌಡರ ವಿರುದ್ದ ಜಯಸಾಧಿಸಿದರು. ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಚಿಕ್ಕಬಳ್ಳಾಪುರಕ್ಕೆ ಅಚ್ಚರಿಯ ಅಭ್ಯರ್ಥಿ ಶಿಫಾರಸು ಮಾಡಿದ ಜೆಡಿಎಸ್!
ದೇವೇಗೌಡರು ಏನು ಬಯಸಿದ್ದರೋ ಅದನ್ನು ಸಾಧಿಸಿದಂತಾಯಿತು
ಅಲ್ಲಿಗೆ, ದೇವೇಗೌಡರು ಏನು ಬಯಸಿದ್ದರೋ ಅದನ್ನು ಸಾಧಿಸಿದಂತಾಯಿತು ಎನ್ನುವ ಮಾತು ಆ ವೇಳೆ ಕೇಳಿಬರುತ್ತಿತ್ತು. ವೀರಪ್ಪ ಮೊಯ್ಲಿಗೆ 4,24,800, ಬಚ್ಚೇಗೌಡರಿಗೆ 4,15,280 ಮತ್ತು ಕುಮಾರಸ್ವಾಮಿ 3,46,339 ಮತಗಳನ್ನು ಪಡೆದಿದ್ದರು. ಈ ಬಾರಿಯ (2019) ಚುನಾವಣೆಯಲ್ಲಿ ಬಚ್ಚೇಗೌಡ, ಬಹುತೇಕ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇರುವುದರಿಂದ ತ್ರಿಕೋಣ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಮ್ಮಿ.