ರಜನಿಕಾಂತ್ಗೆ ಯಾರು ನೀವು ಎಂದು ಕೇಳಿದ ಯುವಕ: ಶಹಬ್ಬಾಸ್ ಎಂದರು ಟ್ವಿಟ್ಟಿಗರು!
ಚೆನ್ನೈ, ಜೂನ್ 1: ತೂತುಕುಡಿ ಪ್ರತಿಭಟನೆ ವೇಲೆ ನಡೆದ ಗೋಲಿಬಾರ್ ಹಾಗೂ ಘರ್ಷಣೆ ದುರಂತದಲ್ಲಿ ಗಾಯಗೊಂಡ ಸಂತ್ರಸ್ತರ ಭೇಟಿ ಮಾಡಲು ತೆರಳಿದ್ದ ಖ್ಯಾತ ನಟ ರಜನಿಕಾಂತ್ ತೀವ್ರ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.
ತನ್ನ ಯೋಗ ಕ್ಷೇಮ ವಿಚಾರಿಸಲು ಬಂದ 'ತಲೈವ' ರಜನಿಗೆ 21 ವರ್ಷದ ಯುವಕನೊಬ್ಬ 'ಯಾರು ನೀವು?' ಎಂದು ಪ್ರಶ್ನಿಸಿದ್ದಾನೆ. ಅರೆ ಕ್ಷಣ ಮುಜುಗರಕ್ಕೆ ಒಳಗಾದ ರಜನಿ, ಬಳಿಕ ಸಾವರಿಸಿಕೊಂಡು 'ನಾನು ರಜನಿಕಾಂತ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೂತುಕುಡಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಲಿಬಾರ್ ಸಂತ್ರಸ್ತರನ್ನು ರಜನಿಕಾಂತ್ ಭೇಟಿ ಮಾಡಿದ್ದರು.
Who are you??? Thoothukudi Youngster questions rajinikanth in the hospital🤔🤔🤔 #Thoothukudi #Thalaivar #RajiniMakkalMandram #Rajinikanth #RajiniInThoothukudi pic.twitter.com/4MyiDYkmvL
— kumaran (@kumaran9189) 30 May 2018
ಈ ಸಂದರ್ಭದಲ್ಲಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೂತುಕುಡಿ ಸಮೀಪದ ಹಳ್ಳಿಯೊಂದರ ಬಿಕಾಂ ಪದವೀಧರ ಸಂತೋಷ್ ರಾಜ್, ರಜನಿ ಅವರನ್ನು ಆಕ್ರೋಶ ಭರಿತ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ನಾನು ರಜನಿಕಾಂತ್ ಎಂದು ಉತ್ತರಿಸಿದ ರಜನಿ, ತಕ್ಷಣ ಅಲ್ಲಿಂದ ಮುಂದಕ್ಕೆ ಹೋಗಿದ್ದಾರೆ.
ಕೆಲಹೊತ್ತಿನಲ್ಲಿಯೇ #Naan-ThanPaRajinikanth (ನಾನು ರಜನಿಕಾಂತ್) ಮತ್ತು #AntiTamilRajinikanth (ತಮಿಳುದ್ರೋಹಿ ರಜನಿಕಾಂತ್) ಎಂಬ ಹ್ಯಾಷ್ಟ್ಯಾಗ್ಗಳು ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದ್ದವು.
ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ್ ಅವರನ್ನು ಬೆಂಬಲಿಸಿ ಮತ್ತು ರಜನಿಕಾಂತ್ ಅವರನ್ನು ಟೀಕಿಸಿ ಟ್ವೀಟ್ಗಳು ಹರಿದಾಡುತ್ತಿವೆ.
ಸ್ಟೆರ್ಲೈಟ್ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಸಂತೋಷ್ ರಾಜ್, ಕಾಲೇಜು ವಿದ್ಯಾರ್ಥಿಗಳ ಒಕ್ಕೂಟವನ್ನು ರಚಿಸಿಕೊಂಡು ಹೋರಾಟ ನಡೆಸಿದ್ದರು. ಮೇ 22ರಂದು ತೂತುಕುಡಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟಿನಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು.
ಇದಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಕದಂಬುರ್ ಸಿ. ರಾಜಾ ಅವರನ್ನು ಸಹ ಸಂತೋಷ್ ಪ್ರಶ್ನಿಸಿದ್ದರು. ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. ಈ ಕಹಿ ಅನುಭವದ ಬಳಿಕ ಉಪಮುಖ್ಯಮಂತ್ರಿ ಓ. ಪನ್ನೀರ್ಸೆಲ್ವಂ ಅವರು ಸಂತ್ರಸ್ತರ ಭೇಟಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಮಾಧ್ಯಮಗಳಿಗೆ ಒಳಗೆ ಪ್ರವೇಶ ನೀಡಿರಲಿಲ್ಲ. ಆಗಲೂ ಸಂತೋಷ್ ಅವರು ಪನ್ನೀರ್ಸೆಲ್ವಂ ಅವರನ್ನು ಪ್ರಶ್ನಿಸಿದ್ದರು ಎನ್ನಲಾಗಿದೆ.
ಪ್ರತಿಭಟನೆ ಆರಂಭವಾಗಿ ನೂರು ದಿನ ಕಳೆದರೂ ಈ ಬಗ್ಗೆ ರಜನಿಕಾಂತ್ ಒಂದೂ ಹೇಳಿಕೆ ನೀಡಿರಲಿಲ್ಲ. ಅಲ್ಲದೆ ರಜನಿ ಮಕ್ಕಳ್ ಮಂಡ್ರಮ್ ಪಕ್ಷದ ಸದಸ್ಯರು ಸಹ ಪ್ರತಿಭಟನಾಕಾರರನ್ನು ಸಂಪರ್ಕಿಸಿರಲಿಲ್ಲ. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.