ಜಗತ್ತಿನಲ್ಲೇ ಅತಿ ದೊಡ್ಡ ಕ್ಯಾನ್ಸರ್ ಗಡ್ಡೆ ಆಪರೇಷನ್, ತೂಕ ಗೊತ್ತಾ?
ಚೆನ್ನೈ, ಅಕ್ಟೋಬರ್ 12: ಜಗತ್ತಿನಲ್ಲಿ ಅತಿ ದೊಡ್ಡದು ಎನ್ನಲಾದ ಕ್ಯಾನ್ಸರ್ ಗಡ್ಡೆಯೊಂದನ್ನು ಕೊಯಮತ್ತೂರು ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದಾರೆ. ತಮಿಳುನಾಡಿನ ಊಟಿಯಲ್ಲಿ ಕೃಷಿ ಕಾರ್ಮಿಕಳಾದ ವಸಂತಾಳ ಶಸ್ತ್ರಚಿಕಿತ್ಸೆ ಆಗಿ, ಸದ್ಯಕ್ಕೆ ನಿರಾಳವಾಗಿದ್ದಾರೆ.
ವಯಸ್ಸಾಗುತ್ತಾ ತಾನು ತೂಕ ಹೆಚ್ಚಾಗುತ್ತಿದ್ದೇನೆ ಅಂತಲೇ ವಸಂತಾ ಕೂಡ ಭಾವಿಸಿದ್ದಾಳೆ. ದಿನದಿನಕ್ಕೂ ತನ್ನ ಸೊಂಟದ ಗಾತ್ರ ಹೆಚ್ಚಾಗುತ್ತಿದ್ದರೂ ಆ ಬಗ್ಗೆ ಗಮನ ಕೊಟ್ಟಿರಲಿಲ್ಲ. ಆದರೆ ಯಾವಾಗ ತಡೆಯಲು ಆಗುವುದಿಲ್ಲ ಅಂತಾಯಿತೋ ಹತ್ತಿರದ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡಿದ್ದಾಳೆ.
ಹೊಟ್ಟೆಯಿಲ್ಲದೆ ಬದುಕಬೇಕಾದ ಅಬ್ಬಾಸ್ ಆಸೆಯಿಂದ ಕೇಳಿದ್ದು ಬಿರಿಯಾನಿ
ಆಗ ಆಕೆಗೆ ಹೊಟ್ಟೆ ಕೆಳಭಾಗದಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ. ಅದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವುದು ಬಹಳ ಅಪಾಯಕಾರಿ. ಆಕೆ ಬದುಕುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿದ ನಂತರ ಬಸ್ ನಿಲ್ದಾಣದಲ್ಲಿ ವಸಂತಾಳ ಪತಿ ಕಣ್ಣೀರು ಹಾಕುತ್ತಾ ನಿಂತಿದ್ದನ್ನು ಒಬ್ಬರು ಗಮನಿಸಿ, ಕೊಯಮತ್ತೂರು ಆಸ್ಪತ್ರೆಗೆ ತೆರಳುವಂತೆ ಸಲಹೆ ಮಾಡಿದ್ದಾರೆ.
ಜಗತ್ತಿನಲ್ಲೇ ಅತಿದೊಡ್ಡ ಅಂಡಾಶಯ ಕ್ಯಾನ್ಸರ್ ಗಡ್ಡೆ
ಅಲ್ಲಿಯ ಮುಖ್ಯ ಸರ್ಜನ್ ಸೆಂಥಿಲ್ ಕುಮಾರ್ ಅವರು ವಸಂತಾಳ ಆರೋಗ್ಯ ಸ್ಥಿತಿ ಪರೀಕ್ಷಿಸಿ, ಗಡ್ಡೆ ತೆಗೆಯಲು ತಂಡವೊಂದನ್ನು ಮಾಡಿಕೊಂಡಿದ್ದಾರೆ. ಈ ವರೆಗೆ ಗೊತ್ತಾಗಿರುವ ಮಾಹಿತಿ ಏನೆಂದರೆ, ವಸಂತಾಗೆ ಇದ್ದದ್ದು ಜಗತ್ತಿನಲ್ಲೇ ಅತಿದೊಡ್ಡ ಅಂಡಾಶಯ ಕ್ಯಾನ್ಸರ್ ಗಡ್ಡೆ. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ.
75 ಕೇಜಿ ತೂಕದ ರೋಗಿಗೆ 33.5 ಕೇಜಿ ಕ್ಯಾನ್ಸರ್ ಗಡ್ಡೆ
"ವಸಂತಾ ಅವರು ನಮ್ಮ ಆಸ್ಪತ್ರೆಗೆ ಬಂದಾಗ 75 ಕೇಜಿ ತೂಕ ಇದ್ದರು. ನಾವು ಈಗ ತೆಗೆದಿರುವ ಗಡ್ಡೆಯ ತೂಕ 33.5 ಕೇಜಿ. ಸದ್ಯಕ್ಕೆ ಆಕೆ ಆರೋಗ್ಯವಾಗಿದ್ದು, 42 ಕೇಜಿ ತೂಕ ಇದ್ದಾರೆ" ಎಂದು ವೈದ್ಯರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಈ ವರೆಗೆ ಭಾರತದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದಿರುವ ಅತಿ ದೊಡ್ಡ ಕ್ಯಾನ್ಸರ್ ಗಡ್ಡೆ ತೂಕ ಇಪ್ಪತ್ತು ಕೇಜಿ. ಅದು ದೆಹಲಿಯ ಏಮ್ಸ್ ನಲ್ಲಿ ಹಾಗೂ ಪುದುಚೆರಿಯಲ್ಲಿ ಎಂದು ತಿಳಿಸಿದ್ದಾರೆ.
ದೆಹಲಿ ಜನರ ಬಾಯಾರಿಕೆ ತಣಿಸುತ್ತಿರುವ ಬೆಂಗಳೂರು ಮೂಲದ 'ಭಗೀರಥ'
ದಾಖಲೆ ಖಾತ್ರಿ ಪಡಿಸಿದ ಎರಡು ಸಂಸ್ಥೆಗಳು
ಇದಕ್ಕೂ ಮುನ್ನ ಗಾತ್ರದಲ್ಲಿ ದೊಡ್ಡದಾದ ಕ್ಯಾನ್ಸರ್ ಕಾರಕ ಅಲ್ಲದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಆದರೆ ನಾವು ಅಂಡಾಶಯ ಕ್ಯಾನ್ಸರ್ ನ ಜಗತ್ತಿನ ಅತಿ ದೊಡ್ಡ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದೇವೆ. ಅದರ ತೂಕ 33.5 ಕೇಜಿ ಎಂದು ಅವರು ಹೇಳಿದ್ದಾರೆ. ಈ ದಾಖಲೆಯನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಖಾತ್ರಿ ಪಡಿಸಿವೆ. ಇದನ್ನು ಗಿನಿಸ್ ವಿಶ್ವ ದಾಖಲೆ ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿಸಲು ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್ ಗುಣಪಡಿಸಲು ಫಾರ್ಮ್ಯುಲಾ ಕಂಡುಹಿಡಿದ ಸಂಶೋಧಕಿ?
ಶಸ್ತ್ರಚಿಕಿತ್ಸೆ ವೇಳೆ ಎದುರಾದ ಸವಾಲುಗಳು ಯಾವುವು?
ನಮಗೆ ಮುಖ್ಯ ಸವಾಲು ಎನಿಸಿದ್ದು ರೋಗಿಗೆ ಅರಿವಳಿಕೆ ನೀಡುವ ವಿಚಾರವಾಗಿ. ಶಸ್ತ್ರಚಿಕಿತ್ಸೆ ವೇಳೆ ಹೆಚ್ಚಿನ ರಕ್ತಸ್ರಾವ ಆಗದಂತೆ ಎಚ್ಚರಿಕೆ ವಹಿಸಬೇಕಿತ್ತು. ಅನುಭವಿ-ತಜ್ಞ ತಂಡ, ಅತ್ಯಾಧುನಿಕ ಯಂತ್ರಗಳು ಹಾಗೂ ಸಲಕರಣೆಗಳನ್ನು ಶಸ್ತ್ರಚಿಕಿತ್ಸೆಗಾಗಿ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ವಸಂತಾಗೆ ಇದ್ದಿದ್ದು ಕ್ಯಾನ್ಸರ್ ನ ಆರಂಭಿಕ ಹಂತ. ದೇಹದ ಇತರ ಭಾಗಗಳಿಗೆ ಹಬ್ಬಿರಲಿಲ್ಲ. ಅವರು ಇನ್ನುಮುಂದೆ ಸಹಜವಾಗಿಯೇ ಎಲ್ಲರಂತೆ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದ್ದಾರೆ.
ಕ್ಯಾನ್ಸರ್ ಪೀಡಿತ ಸೋನಾಲಿ ಬೇಂದ್ರೆಯವರ ಭಾವುಕ ಸಾಲು ಮತ್ತು ಹೊಸ ವಿಡಿಯೋ