ಕ್ರಿಶ್ಚಿಯನ್ನರು ಇಲ್ಲದಿದ್ದರೆ ತಮಿಳುನಾಡು ಬಿಹಾರವಾಗುತ್ತಿತ್ತು: ಸ್ಪೀಕರ್ ವಿವಾದ
ಚೆನ್ನೈ,ಜುಲೈ. 26: ತಮಿಳುನಾಡು ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ಅವರು ರಾಜ್ಯದ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಇಲ್ಲದಿದ್ದರೆ ತಮಿಳುನಾಡು ಬಿಹಾರವಾಗುತ್ತಿತ್ತು ಎಂದು ತಿಂಗಳ ಹಿಂದೆ ನೀಡಿದ್ದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಕಳೆದ ತಿಂಗಳು ಜೂನ್ 28 ರಂದು ತಮಿಳುನಾಡು ವಿಧಾನಸಭಾಧ್ಯಕ್ಷ ಎಂ. ಅಪ್ಪಾವು ಮತ್ತು ಡಿಎಂಕೆ ಎಲ್ಎಂಎ ಇನಿಗೊ ಇರುದಯರಾಜ್ ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಎಂ. ಅಪ್ಪಾವು, ಕ್ರಿಶ್ಚಿಯನ್ ಫಾದರ್ ಮತ್ತು ಸಿಸ್ಟರ್ಸ್ ಇಲ್ಲದಿದ್ದರೆ ತಮಿಳುನಾಡು ಬಿಹಾರದಂತಾಗುತ್ತಿತ್ತು. ಕ್ಯಾಥೋಲಿಕ್ ಫಾದರ್ ಮತ್ತು ಸಿಸ್ಟರ್ ಅವರ ಸಹಾಯದಿಂದ ನಾನು ಇಂದು ಈ ಸ್ಥಾನಕ್ಕೆ ಬೆಳೆಯಲು ಸಹಾಯವಾಯಿತು. ತಮಿಳುನಾಡು ಸರ್ಕಾರ ನಿಮ್ಮ ಸರ್ಕಾರ. ನಿಮ್ಮ ಪ್ರಾರ್ಥನೆ ಮತ್ತು ಉಪವಾಸವು ಈ ಸರ್ಕಾರವನ್ನು ರಚಿಸಿತು. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಮತ್ತು ಕ್ರಿಶ್ಚಿಯನ್ ಫಾದರ್ಗಳು ಸಾಮಾಜಿಕ ನ್ಯಾಯ ಮತ್ತು ದ್ರಾವಿಡ ಮಾದರಿ ಸರ್ಕಾರಕ್ಕೆ ಮುಖ್ಯ ಕಾರಣ ಎಂದು ಹೇಳಿದ್ದರು.
ನೀವು (ಕ್ಯಾಥೋಲಿಕ್ ಕ್ರಿಶ್ಚಿಯನ್ನರು) ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿ ನೇರವಾಗಿ ಮುಖ್ಯಮಂತ್ರಿಗೆ ನೀಡಿ, ಅವರು ಏನನ್ನೂ ನಿರಾಕರಿಸುವುದಿಲ್ಲ ಮತ್ತು ಎಲ್ಲವನ್ನೂ ಪರಿಹರಿಸುತ್ತಾರೆ. ಏಕೆಂದರೆ ಈ ಸರ್ಕಾರಕ್ಕೆ ನೀವೇ ಕಾರಣ ಎಂದು ಮುಖ್ಯಮಂತ್ರಿಗೆ ತಿಳಿದಿದೆ. ಇದು ನಿಮ್ಮ ಸರ್ಕಾರ. ಇವರು ನಿಮ್ಮ ಮುಖ್ಯಮಂತ್ರಿ. ಇದರಲ್ಲಿ ನಾನು ನಿಮ್ಮೊಂದಿಗಿದ್ದೇನೆ. ತಮಿಳುನಾಡಿನಿಂದ ಕ್ರಿಶ್ಚಿಯನ್ನರನ್ನು ತೊಲಗಿಸಿದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ತಮಿಳುನಾಡಿನ ಅಭಿವೃದ್ಧಿಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಮುಖ್ಯ ಕಾರಣ. ಇಂದಿನ ತಮಿಳುನಾಡು ನಿಮ್ಮ ಮೇಲೆ ನಿರ್ಮಾಣವಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು.
ಇದೀಗ ಎಂ. ಅಪ್ಪಾವು ಅವರ ತಿಂಗಳ ಹಿಂದಿನ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ ವಿಧಾನಸಭಾ ಸ್ಪೀಕರ್ ಎಂ. ಅವರನ್ನು ಟೀಕಿಸಿದೆ. ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ವಕ್ತಾರ ನಾರಾಯಣನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಎಂ. ಅಪ್ಪಾವು ಅವರ ಭಾಷಣವನ್ನು ಖಂಡಿಸಿದ್ದಾರೆ.
ಜಾತ್ಯತೀತ ಪಕ್ಷದ ಹಕ್ಕನ್ನು ಕಳೆದುಕೊಂಡಿದ್ದಾರೆ
ಇದು ಡಿಎಂಕೆಯ ಸೆಕ್ಯುಲರಿಸಂ? ಅವರು ತಮ್ಮನ್ನು ಜಾತ್ಯತೀತ ಪಕ್ಷ ಎಂದು ಕರೆದುಕೊಳ್ಳುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂಬುದು ಈಗ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಎಂ. ಅಪ್ಪಾವು ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿದ ಅಂಶಗಳು
ಬಿಜೆಪಿ ನನ್ನ ಭಾಷಣವನ್ನು ಪ್ರಚಾರ ಮಾಡುತ್ತಿದ್ದರೆ ಅದು ಒಳ್ಳೆಯದು. ನಾನು ಹಾಗೆ ಅದನ್ನು ಹೇಳಲಿಲ್ಲ ಎಂದು ನಾನು ಹೇಳುವುದಿಲ್ಲ. ಹೌದು, ನಾನು ಹೇಳಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿದ ಕೆಲವು ಅಂಶಗಳು ಮಾತ್ರ ಹರಡುತ್ತಿವೆ, ನಾನು ಏನು ಮಾತನಾಡಿದರೂ ಅದು ಕೇವಲ ಇತಿಹಾಸ. ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ವಿಧಾನಸಭಾಧ್ಯಕ್ಷ ಎಂ. ಅಪ್ಪಾವು ತಿಳಿಸಿದ್ದಾರೆ.
ಎಂ. ಅಪ್ಪಾವು ಕ್ಷಮೆಗೆ ಬಿಜೆಪಿ ಆಗ್ರಹ
ರಾಜ್ಯದ ಅಭಿವೃದ್ಧಿಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಜವಾಬ್ದಾರರು ಮತ್ತು ಅವರಿಲ್ಲದಿದ್ದರೆ ರಾಜ್ಯವು ಬಿಹಾರವಾಗುತ್ತಿತ್ತು ಎಂದು ಹೇಳಿದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ತಮಿಳುನಾಡು ವಿಧಾನಸಭಾ ಸ್ಪೀಕರ್ ಎಂ. ಅಪ್ಪಾವು ಅವರ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು ಎಂದು ಸೋಮವಾರ ಒತ್ತಾಯಿಸಿದೆ.
ಸಂಪೂರ್ಣ ಒಲೈಕೆ ಮಾಡುವುದಕ್ಕಾಗಿ ಹೇಳಿಕೆ
ತಮಿಳುನಾಡು ಸ್ಪೀಕರ್ ಅವರು ಕ್ಷಮೆಯಾಚಿಸಬೇಕು. ಏಕೆಂದರೆ ಅವರು ಬಳಸಿದ ಪದಗಳು ತುಂಬಾ ಕೋಮುವಾದದಿಂದ ಕೂಡಿವೆ. ಕ್ಯಾಥೋಲಿಕ್ ಕ್ರಿಶ್ಚಿಯನ್ನರಿಲ್ಲದಿದ್ದರೆ ತಮಿಳುನಾಡು ಬಿಹಾರವಾಗಲಿದೆ ಎಂದು ಅವರು ಹೇಳಿದ್ದಾರೆ. ಇದು ಸಂಪೂರ್ಣ ಒಲೈಕೆ ಮಾಡುವುದಕ್ಕಾಗಿ ಹೇಳಿಕೆ ನೀಡಲಾಗಿದೆ ಎಂದು ಬಿಜೆಪಿ ವಕ್ತಾರ ಮೋಹನ್ ಕೃಷ್ಣ ತಿಳಿಸಿದ್ದಾರೆ.
Recommended Video