ತಮಿಳುನಾಡಿನಲ್ಲಿ ಒಂದು ವಾರ ಲಾಕ್ಡೌನ್ ವಿಸ್ತರಣೆ ಹಿಂದಿನ ಕಾರಣ!?
ಚೆನ್ನೈ, ಮೇ 21: ತಮಿಳುನಾಡಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆ ನಡುವೆ 16 ಜಿಲ್ಲೆಗಳಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.20ಕ್ಕಿಂತಲೂ ಹೆಚ್ಚಾಗಿರುವುದು ಕಂಡು ಬಂದಿದೆ. ಈ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಕಡಿವಾಣಕ್ಕಾಗಿ ಲಾಕ್ಡೌನ್ ವಿಸ್ತರಣೆಗೆ ಸರ್ಕಾರ ನಿರ್ಧರಿಸಿದೆ.
ತಮಿಳುನಾಡಿನಲ್ಲಿ ಮೇ 24ರಿಂದ ಮುಂದಿನ ಒಂದು ವಾರದವರೆಗೂ ಲಾಕ್ಡೌನ್ ವಿಸ್ತರಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಕಂಟೇನ್ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. ಮಂಗಳವಾರ ದೇಶದಲ್ಲೇ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ.
ಕೊವಿಡ್-19 ಪಾಸಿಟಿವಿಟಿ: ಟಾಪ್-5 ಪಟ್ಟಿಯಲ್ಲಿ ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ!
ರಾಜ್ಯದ ಚೆಂಗಲ್ಪಟ್ಟು ಮತ್ತು ಥೇಣಿ ಜಿಲ್ಲೆಗಳಲ್ಲಿ ಶೇ.30ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಕಂಡು ಬಂದಿದೆ. ಕೊರೊನಾವೈರಸ್ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿರುವ ಸಚಿವರೊಬ್ಬರು ರೋಗ ಹರಡುವಿಕೆ ಕಡಿವಾಣಕ್ಕೆ ಲಾಕ್ಡೌನ್ ನಿಯಮವನ್ನು ಪಾಲಿಸಲಾಗುವುದು. ಆ ಮೂಲಕ ಕೊರೊನಾವೈರಸ್ ಹರಡುವಿಕೆ ಸರಪಳಿಯನ್ನು ಕತ್ತರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮೊದಲ ಮತ್ತು 2ನೇ ವಾರದಲ್ಲಿ ಕೊರೊನಾ ಏರಿಕೆ
ತಮಿಳುನಾಡಿನಲ್ಲಿ ಮೇ ತಿಂಗಳ ಮೊದಲ ವಾರ ಮತ್ತು ಎರಡನೇ ವಾರದಲ್ಲಿ ಕೊರೊನಾವೈರಸ್ ಪಾಸಿಟಿವಿಟಿ ದರದಲ್ಲಿ ಏರಿಕೆ ಕಂಡು ಬಂದಿದೆ. ಚೆನ್ನೈನಿಂದ ದಕ್ಷಿಣಕ್ಕೆ ಇರುವ ಹಾಗೂ ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚೆಂಗಲ್ಪಟ್ಟುನಲ್ಲಿ ಮೇ 12 ರಿಂದ ಮೇ 18ರವರೆಗೂ ಕಳೆದ 7 ದಿನಗಳಲ್ಲಿ ಶೇ.31.5ರಷ್ಟು ಕೊವಿಡ್-19 ಪಾಸಿಟಿವಿಟಿ ದರ ವರದಿಯಾಗಿದೆ. ಥೇಣಿಯಲ್ಲಿ ಶೇ.30.30ರಷ್ಟು, ಕೊಯಂಬತ್ತೂರು ಶೇ.29.30, ಕನ್ಯಾಕುಮಾರಿ ಶೇ.27.10, ತೂತುಕುಡಿ ಶೇ.26.70, ಚೆನ್ನೈ ಶೇ.22.40, ಮಧುರೈ ಶೇ.15.20, ತಿರುಚಿರಾಪಳ್ಳಿ ಶೇ.22.50 ಮತ್ತು ತಿರುಪ್ಪೂರು ಶೇ.21.20ರಷ್ಟು ಕೊರೊನಾವೈರಸ್ ಪಾಸಿಟಿವಿಟಿ ದರ ಪತ್ತೆಯಾಗಿದೆ.
ತಮಿಳುನಾಡಿನಾದ್ಯಂತ ಲಾಕ್ಡೌನ್ ಘೋಷಣೆ
ಚೆನ್ನೈನಲ್ಲಿ ಶೇಕಡಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಹಾಗೆಂದ ಮಾತ್ರಕ್ಕೆ ಇದು ಸಂಭ್ರಮಿಸುವ ಸಮಯವಂತೂ ಅಲ್ಲ ಎಂದು ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ತಿಳಿಸಿದ್ದಾರೆ. ಅಲ್ಲದೇ, ಚೆನ್ನೈನಲ್ಲಿ ಶೇ.95 ರಿಂದ 98ರಷ್ಟು ಐಸಿಯು ಹಾಸಿಗೆಗಳು ರೋಗಿಗಳಿಂದ ತುಂಬಿ ಹೋಗಿವೆ. ಈ ಹಿನ್ನೆಲೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಗಳಲ್ಲಿ ಕಂಟೇನ್ನೆಂಟ್ ವಲಯಗಳ ಯೋಜನೆ
ತಮಿಳುನಾಡಿನಲ್ಲಿ ಪ್ರತಿನಿತ್ಯ 1.5 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದೆ. ಚೆನ್ನೈನಲ್ಲಿ ಕೊವಿಡ್-19 ಸೋಂಕಿತರ ಏರಿಕೆ ಪ್ರಮಾಣ ತಗ್ಗಿದೆಯಾದರೂ ಕೊಯಂಬತ್ತೂರು ಸೇರಿದಂತೆ ಇತರೆ ಪ್ರಮುಖ ನಗರಗಳ ಮೇಲೆ ಲಕ್ಷ್ಯ ವಹಿಸಬೇಕಿದೆ. ರಾಜ್ಯದ ಅತಿಚಿಕ್ಕ ಜಿಲ್ಲೆ ಅರಿಯಲೂರ್ ಅನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಾಲಾಗುತ್ತದೆ. ಈ ಹಿನ್ನೆಲೆ ಜಿಲ್ಲಾಮಟ್ಟದಲ್ಲಿ ಕಂಟೇನ್ಮೆಂಟ್ ವಲಯಗಳ ರಚನೆಗೆ ಸಂಬಂಧಿಸಿದಂತೆ ಯೋಜನೆಯನ್ನು ರೂಪಿಸುತ್ತಿದ್ದೇವೆ. ಜಿಲ್ಲಾ ಹಂತದಲ್ಲೂ ಕೊವಿಡ್-19 ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಎರಡನೇ ಮತ್ತು ಮೂರನೇ ಹಂತದ ಆರೋಗ್ಯ ಕೇಂದ್ರಗಳಲ್ಲೂ ಕೂಡಾ ವೈದ್ಯಕೀಯ ಆಮ್ಲಜನಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಏರಿಳಿತ
ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ35,579 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 25,368 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದಲ್ಲಿ ಮಹಾಮಾರಿಗೆ 397 ಮಂದಿ ಬಲಿಯಾಗಿದ್ದಾರೆ. ಒಟ್ಟು 17,34,804 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 14,52,283 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 19,131 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 2,63,390 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.