'ಚಿನ್ನಮ್ಮ'ನನ್ನು ಕಂಡರೆ ತಮಿಳುನಾಡು ಸರ್ಕಾರಕ್ಕೆ ಏಕಿಷ್ಟು ನಡುಕ?; ದಿನಕರನ್
ಚೆನ್ನೈ, ಫೆಬ್ರುವರಿ 12: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ನಾಲ್ಕು ವರ್ಷ ಜೈಲುವಾಸ ಅನುಭವಿಸಿ ಮರಳಿದ ಎಎಂಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್ಗೆ ತಮಿಳುನಾಡಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಶಶಿಕಲಾ ಪ್ರವೇಶದೊಂದಿಗೆ ತಮಿಳುನಾಡು ರಾಜಕೀಯದಲ್ಲಿ ಸಂಚಲನವೂ ಶುರುವಾದಂತಿದೆ. ಶೀಘ್ರವೇ ರಾಜಕೀಯ ಪ್ರವೇಶಿಸುತ್ತೇನೆಂದು ಶಶಿಕಲಾ ಹೇಳಿಕೆ ನೀಡಿದ್ದು, ಎಐಎಡಿಎಂಕೆ ಪಕ್ಷವನ್ನು ಪುನಃ ಪಡೆದುಕೊಳ್ಳಲು ಕಸರತ್ತು ಆರಂಭವಾಗಿರುವ ಸೂಚನೆ ಸಿಕ್ಕಿದೆ.
ಶಶಿಕಲಾ ತಮಿಳುನಾಡು ಪ್ರವೇಶಿಸುತ್ತಿದ್ದಂತೆ ಎಎಂಎಂಎಕೆ ಕಾರ್ಯದರ್ಶಿ ಟಿಟಿವಿ ದಿನಕರನ್ ದನಿ ಎತ್ತಿದ್ದು, "ಎಐಎಡಿಎಂಕೆ ಪಕ್ಷವನ್ನು ಮತ್ತೆ ಪಡೆದುಕೊಳ್ಳುವುದೇ ನಮ್ಮ ಮುಖ್ಯ ಗುರಿ. ಎಐಎಡಿಎಂಕೆ ಮರಳಿ ಪಡೆಯಲೆಂದೇ ಎಎಂಎಂಕೆ ಪಕ್ಷ ರಚಿಸಿದೆವು" ಎಂದು ಹೇಳಿದ್ದಾರೆ. ಈ ಎಲ್ಲಾ ಅಂಶಗಳು ತಮಿಳುನಾಡಿನ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿವೆ. ಮುಂದೆ ಓದಿ...
"ಕಾರ್ಯಕರ್ತರಿಗೆ ಚಿನ್ನಮ್ಮ ಅಮ್ಮನಿದ್ದಂತೆ"
ನಮ್ಮ ಕಾರ್ಯಕರ್ತರಿಗೆ ಚಿನ್ನಮ್ಮ ಅಮ್ಮನಿದ್ದಂತೆ. ಅವರೆಲ್ಲರೂ ಇವರ ಬರುವಿಕೆಯನ್ನೇ ಕಾಯುತ್ತಿದ್ದರು ಎಂದಿದ್ದಾರೆ ದಿನಕರನ್. ಶಶಿಕಲಾ ಅವರನ್ನು ಸ್ವಾಗತಿಸಲು ಜನರ ದಂಡು ಸೇರಿದ್ದು ಸ್ವಾಭಾವಿಕವೇ ಆಗಿತ್ತು. ನಾವು ಏನನ್ನೂ ಯೋಜಿಸಿರಲಿಲ್ಲ. ಪ್ರೀತಿಯಿಂದಲೇ ಜನಸಾಗರ ಸೇರಿತ್ತು. ಶಶಿಕಲಾ ಅವರು ನನಗೆ ಅಮ್ಮನಿದ್ದಂತೆ. ನನಗೆ ಮಾತ್ರವಲ್ಲ, ಎಲ್ಲಾ ಕಾರ್ಯಕರ್ತರಿಗೂ. ತಮಿಳುನಾಡು ಜನರೂ ಅವರನ್ನು ಚಿನ್ನಮ್ಮ ಎಂದು ಕರೆಯುತ್ತಾರೆ ಎಂದಿದ್ದಾರೆ.
ಶಶಿಕಲಾಗೆ ಕಾರು ಕೊಟ್ಟ ಸದಸ್ಯನೊಂದಿಗೆ ಏಳು ಜನರ ವಜಾ ಮಾಡಿದ ಎಐಎಡಿಎಂಕೆ
"ಜಯಲಲಿತಾ ಅವರಿಗೆ ಸೇರಿದಷ್ಟೇ ಜನ ಶಶಿಕಲಾ ಅವರಿಗೂ ಸೇರಿದ್ದರು"
ಚಿನ್ನಮ್ಮ ಅವರಿಗೂ ತಮ್ಮನ್ನು ಸ್ವಾಗತಿಸಲು ಬಂದ ಜನರನ್ನು ನೋಡಿ ತುಂಬಾ ಸಂತೋಷವಾಗಿದೆ. ತಮಗಿರುವ ಜನ ಬೆಂಬಲದಿಂದ ಅವರಿಗೆ ಸಂತಸವಾಗಿದೆ. ಎಐಎಡಿಎಂಕೆಗೆ ಬಂದ ನಂತರ ಜಯಲಲಿತಾ ಅವರು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿದ್ದಾಗ ಎಷ್ಟು ಜನ ಸೇರಿದ್ದರೋ ಅಷ್ಟೇ ಜನರು ಶಶಿಕಲಾ ಅವರು ಬಂದಾಗಲೂ ಸೇರಿದ್ದರು.
"ಎಐಎಡಿಎಂಕೆ ಮೇಲೆ ಶಶಿಕಲಾ ಅವರಿಗೆ ಹಕ್ಕಿದೆ"
ಎಐಎಡಿಎಂಕೆಯನ್ನು ಮುನ್ನಡೆಸಬಲ್ಲವರು ಚಿನ್ನಮ್ಮ. ಸದ್ಯಕ್ಕೆ ಪಕ್ಷ ಪನ್ನೀರ್ ಸೆಲ್ವಂ ಹಾಗೂ ಪಳನಿಸ್ವಾಮಿ ಅವರ ಕೈಯಲ್ಲಿದೆ. ಆಗ ನನ್ನ ಚಿಕ್ಕಮ್ಮ ಶಶಿಕಲಾ ಅವರನ್ನು ಹೊರಹಾಕಲು ಅವರು ಕರೆದ ಸಾಮಾನ್ಯ ಮಂಡಳಿ ಸಭೆಗೆ ನಾವು ಸವಾಲು ಹಾಕಿದೆವು. ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇವೆ ಎಂದು ಸವಾಲು ಹಾಕಿದ್ದಾರೆ. ಹೀಗಾಗಿ ಶೀಘ್ರವೇ ಅವರು ಪಕ್ಷದ ಕಚೇರಿಗೆ ಭೇಟಿ ನೀಡಲಿದ್ದಾರೆ. ಅವರಿಗೆ ಎಲ್ಲಾ ಹಕ್ಕೂ ಇದೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ನಾಟಕೀಯ ತಿರುವುಗಳು ಸಂಘಟಿಸುತ್ತಿದ್ದು, ಅದಕ್ಕೆ ಪೂರಕವಾಗಿ ಶಶಿಕಲಾ ಎಐಎಡಿಎಂಕೆಯಲ್ಲಿ ಸ್ಥಾನಕ್ಕೆ ಆಗ್ರಹಿಸಬಹುದು ಎಂದು ಮದ್ರಾಸ್ ಹೈ ಕೋರ್ಟ್ ಕೂಡ ಆದೇಶ ನೀಡಿದೆ.
ಎಐಎಡಿಎಂಕೆಯಲ್ಲಿ ಸಣ್ಣ ಬಿರುಕನ್ನೂ ಮೂಡಿಸಲು ಸಾಧ್ಯವಿಲ್ಲ; ಪಳನಿಸ್ವಾಮಿ
"ಸರ್ಕಾರಕ್ಕೆ ನಮ್ಮನ್ನು ಕಂಡರೆ ಏಕಿಷ್ಟು ಭಯ?"
ಜಯಲಲಿತಾ ಅಮ್ಮನ ಸ್ಮಾರಕವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿ ರಿಪೇರಿ ಕೆಲಸ ಎಂದು ಹೇಳಿ ಮುಚ್ಚಿದರು. ಇದರ ಹಿಂದಿನ ಕಾರಣಗಳೂ ತಿಳಿದಿವೆ. ಆದರೆ ಫೆಬ್ರುವರಿ 24ರಂದು ಜಯಲಲಿತಾ ಅವರ ಜನ್ಮದಿನವಿದೆ. ಆ ದಿನದಂದಾದರೂ ಸ್ಮಾರಕವನ್ನು ತೆರೆಯಲೇಬೇಕಲ್ಲವೇ? ನಮ್ಮ ಸಮಯ ಬಂದೇ ಬರುತ್ತದೆ. ಜೊತೆಗೆ ಶಶಿಕಲಾ ಅವರು ಎಐಎಡಿಎಎಂಕೆ ಧ್ವಜ ಬಳಕೆಯನ್ನು ಮುಂದುವರೆಸುತ್ತಾರೆ ಕೂಡ. ತಮಿಳುನಾಡು ಸರ್ಕಾರಕ್ಕೆ ನಮ್ಮನ್ನು ಕಂಡರೆ ಯಾಕಿಷ್ಟು ಭಯ ಎಂದು ಪ್ರಶ್ನಿಸಿದ್ದಾರೆ.
"ಶೀಘ್ರವೇ ಚಿನ್ನಮ್ಮ ರಾಜಕೀಯಕ್ಕೆ"
ಪಕ್ಷದಲ್ಲಿ ಹತ್ತು ವರ್ಷಗಳಿಂದ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಬಂದು ಎಐಎಡಿಎಂಕೆ ಸದಸ್ಯ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಪಳನಿಸ್ವಾಮಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದಿನಕರನ್, "ಅವರು ಹಿಂದೆ ಏನು ಹೇಳಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಜಯಲಲಿತಾ ಅವರು ಸತ್ತಾಗ ನನ್ನನ್ನು ಹೊಗಳಿದ್ದರು ಕೂಡ. ನನ್ನ ಚಿಕ್ಕಮ್ಮ ಜೈಲಿಗೆ ಹೋದಾಗ ನನ್ನನ್ನು ಪಕ್ಷದ ಕಾರ್ಯದರ್ಶಿ ಆಗಬೇಕೆಂದು ಒತ್ತಾಯಿಸಿದ್ದರು. ಅವರು ಈಗ ಏನು ಬೇಕಾದರೂ ಹೇಳಲಿ. ನನ್ನ ಚಿಕ್ಕಮ್ಮ ಅವರನ್ನು ಸಿಎಂ ಆಗುವಂತೆ ಮಾಡಿದರು ಎಂಬುದನ್ನು ಮರೆಯಬಾರದು. ಶೀಘ್ರವೇ ಚಿನ್ನಮ್ಮ ರಾಜಕಾರಣಿಯಾಗಿ ಹೊರಹೊಮ್ಮಲಿದ್ದಾರೆ. ಪಕ್ಷದ ಎಲ್ಲ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.