'ಕಲೈನಾರ್' ಕರುಣಾನಿಧಿ ಎಂದು ಕರೆಯುವುದೇಕೆ? ಕಲೈನಾರ್ ಎಂದರೇನು?
Recommended Video
ಚೆನ್ನೈ, ಆಗಸ್ಟ್ 08: ಡಿಎಂಕೆ ಪಕ್ಷ ಮಾತ್ರವಲ್ಲ ಇಡೀಯ ತಮಿಳುನಾಡು ಕರುಣಾನಿಧಿ ಅವರನ್ನು ಕರೆಯುವುದು 'ಕಲೈನಾರ್' ಕರುಣಾನಿಧಿ ಎಂದು. ಹಾಗಿದ್ದರೆ ಈ ಪದದ ಅರ್ಥವೇನು?
ಕಲೈನಾರ್ ಎಂದರೆ 'ಕಲೆಗಳ ವಿದ್ವಾಂಸ' ಅಥವಾ ಕಲೆಗಳನ್ನು ಕರಗತ ಮಾಡಿಕೊಂಡವನು ಎಂಬ ಅರ್ಥ ಇದೆ. ಇಂಗ್ಲೀಷಿನಲ್ಲಿ Kalaignar ಎಂದು ಬರೆಯಬೇಕಾದರೂ ತಮಿಳಿನಲ್ಲಿ ಉಚ್ಛಾರಣೆ 'ಕಲೈನಾರ್' ಎಂದೇ ಆಗುತ್ತದೆ.
ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ
ಕರುಣಾನಿಧಿ ರಾಜಕಾರಣಿಯ ಜೊತೆ-ಜೊತೆಗೆ ಚಿತ್ರಕರ್ಮಿಯಾಗಿಯೂ ಗುರುತಿಸಿಕೊಂಡವರು. ಅವರು ತಮ್ಮ 20ನೇಯ ವಯಸ್ಸಿನಲ್ಲಿಯೇ ಸಿನಿಮಾಕ್ಕೆ ಚಿತ್ರಕತೆ ಸಂಭಾಷಣೆ ಬರೆದು ಪ್ರವರ್ಧಮಾನಕ್ಕೆ ಬಂದವರು. ಅವರ ಬರೆದ ಮೊದಲ ಚಿತ್ರಕತೆ ರಾಜಕುಮಾರಿ ಹೆಸರಿನಲ್ಲಿ ಸಿನಿಮಾವಾಗಿದ್ದು 1947ರಲ್ಲಿ.
ತಮ್ಮ ಅತ್ಯುತ್ತಮ ಚಿತ್ರಕತೆಗಳು, ಸಂಭಾಷಣೆಗಳಿಂದ ತಮಿಳು ಸಿನಿಮಾವನ್ನು ಅಪ್ರತಿಮ ಎತ್ತರಕ್ಕೆ ಬೆಳೆಸಿದ ಶ್ರೇಯ ಕರುಣಾನಿಧಿ ಅವರಿಗೂ ಸಲ್ಲಬೇಕು. ಅವರಿಗಿದ್ದ ಕಲೆಯ ಬಗ್ಗೆ ಪ್ರೀತಿಯೇ ಅವರನ್ನು ಅಭಿಮಾನಿಗಳು 'ಕಲೈನಾರ್' ಎಂದು ಕರೆಯುವಂತೆ ಪ್ರೇರೇಪಿಸಿತು.
ತಮಿಳು ಸಿನಿಮಾಕ್ಕೆ ಹೊಸ ದಿಕ್ಕು ನೀಡಿದವರಲ್ಲಿ ಕರುಣಾನಿಧಿ ಅತ್ಯಂತ ಪ್ರಮುಖರು, ಪೌರಾಣಿಕ ಕತೆಗಳೇ ಸಿನಿಮಾ ಆಗುತ್ತಿದ್ದ ಕಾಲದಲ್ಲಿ ಸಿನಿಮಾಕ್ಕೆ ರಾಜಕೀಯ, ಸಾಮಾಜಿಕ ಅಂಶಗಳನ್ನು ತಂದ ಶ್ರೇಯ ಕರುಣಾನಿಧಿ ಅವರಿಗೆ ಸಲ್ಲಬೇಕು. ಸಿನಿಮಾ ಮೂಲಕ ಜನರ ಅಭಿಪ್ರಾಯ ರೂಪಿಸಿದ, ರಾಜಕೀಯ ಚಿಂತನೆ, ಸಾಮಾಜಿಕ ಚಿಂತನೆಗೆ ಹಚ್ಚಿದವರು ಕರುಣಾನಿಧಿ.
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ
ತಮ್ಮ ಜೀವತಾವಧಿಯಲ್ಲಿ ಚಿತ್ರರಂಗದವರೊಂದಿಗೆ ಅತ್ಯುತ್ತಮ ಸಂಬಂಧವನ್ನು ಕರುಣಾನಿಧಿ ಹೊಂದಿದ್ದರು. ಕಲೆಯಲ್ಲಿ ಅವರಿಗೆ ಅಪಾರ ಆಸಕ್ತಿಯಿತ್ತು, ಅಲ್ಲದೆ ಚಿತ್ರಕತೆ, ಸಾಹಿತ್ಯ, ಸಂಭಾಷಣೆಗಳನ್ನು ಬರೆಯುವುದರಲ್ಲಿ ಅವರದ್ದು ಪಳಗಿದ ಕೈ ಹಾಗಾಗಿ ಅವರು ತಮಿಳುನಾಡಿದ 'ಕಲೈನಾರ್'.