ಜಯಲಲಿತಾ, ಕರುಣಾನಿಧಿ ಪರಸ್ಪರ ಅಷ್ಟು ದ್ವೇಷಿಸುತ್ತಿದ್ದುದು ಏಕೆ?
Recommended Video
ಚೆನ್ನೈ, ಆಗಸ್ಟ್ 08: ತಮಿಳುನಾಡು ರಾಜಕೀಯ ಚರ್ಚೆಗೆ ಕುಳಿತ ಹತ್ತೆ ನಿಮಿಷದಲ್ಲಿ ಜಯಲಲಿತಾ-ಕರುಣಾನಿಧಿ ಹೆಸರು ಪ್ರಸ್ತಾಪವಾಗುತ್ತದೆ. ಒಬ್ಬ ನಟಿ, ಒಬ್ಬ ಸಾಹಿತಿ ಇಬ್ಬರದ್ದು ತಮಿಳುನಾಡು ರಾಜಕೀಯದ ಮೇಲೆ ಅಳಿಯದ ಛಾಪು.
ಇಬ್ಬರದ್ದೂ ದ್ರಾವಿಡ ಪಕ್ಷಗಳೇ ಆದರೂ ಪರಸ್ಪರರನ್ನು ನಖಶಿಖಾಂತ ದ್ವೇಷಿಸುತ್ತಿದ್ದರು. ಎಷ್ಟೆಂದರೆ ಒಬ್ಬರು ಅಧಿಕಾರಕ್ಕೆ ಮತ್ತೊಬ್ಬರಿಗೆ ಜೀವ ಭಯವೇ ಶುರುವಾಗುತ್ತಿದ್ದು. ಅಷ್ಟು ದ್ವೇಷ ಇವರಿಬ್ಬರಲ್ಲಿ. ಈ ದ್ವೇಷಕ್ಕೆ ಕಾರಣವೇನು?
ಮರೀನಾಬೀಚ್ ನ ಮಣ್ಣಲ್ಲಾದರೂ ಒಂದಾಗಲಿ ಜಯಲಲಿತಾ-ಕರುಣಾನಿಧಿ!
ಇಬ್ಬರ ನಡುವಿನ ದ್ವೇಷದ ಮೂಲ ಹುಡುಕಲು ತಮಿಳುನಾಡು ರಾಜಕೀಯದಲ್ಲಿ ಬಹಳ ಹಿಂದಕ್ಕೆ ಸಾಗಬೇಕು. ಅದು ಆಗ ತಾನೆ ಡಿಎಂಕೆ ಪಕ್ಷದ ಸಂಸ್ಥಾಪಕ ಅಣ್ಣಾದೊರೈ ಅಗಲಿದ್ದ ಸಮಯ. ಅವರ ಸ್ಥಾನವನ್ನು ಕರುಣಾನಿಧಿ ವಹಿಸಿಕೊಂಡಿದ್ದರು. ಇದು ಆಗ ತಾನೆ ಪಕ್ಷ ಸೇರಿದ್ದ ಎಂ.ಜಿ.ಆರ್ಗೆ ಸಹ್ಯವಾಗಿರಲಿಲ್ಲ.
ಎಂಜಿಆರ್ ಕರುಣಾನಿಧಿ ಮಧ್ಯೆ ಭಿನ್ನಾಭಿಪ್ರಾಯ
ಡಿಎಂಕೆ ಪಕ್ಷದಲ್ಲಿ ಎಂ.ಜಿ.ಆರ್ ಮತ್ತು ಕರುಣಾನಿಧಿ ಮಧ್ಯೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಲೇ ಹೋದವು. ಕೊನೆಗೆ ಕರುಣಾನಿಧಿ ಎಂ.ಜಿ.ಆರ್ ಅವರನ್ನು ಪಕ್ಷದಿಂದ ಹೊರ ಹಾಕಿದರು. ಆಗ ಅವರು ಎಡಿಎಂಕೆ ಪಕ್ಷ ಕಟ್ಟಿದರು. ಪಕ್ಷ ಕಟ್ಟಿ ಹತ್ತ ವರ್ಷಗಳ ನಂತರ ಜಯಲಲಿತಾ ಎಡಿಎಂಕೆ ಸೇರಿಕೊಂಡರು.
ಎಂಜಿಆರ್ರಂತೆ ಕರುಣಾನಿಧಿಯನ್ನು ದ್ವೇಷಿಸುತ್ತಿದ್ದ ಜಯಾ
ಎಂ.ಜಿ.ಆರ್ ಅವರಿಗೆ ಆಪ್ತರಾಗಿದ್ದ ಜಯಲಲಿತಾ ಅವರಂತೆ ಕರುಣಾನಿಧಿ ಅವರನ್ನು ದ್ವೇಷಿಸುತ್ತಿದ್ದರು. ಕಷ್ಟದಲ್ಲಿದ್ದ ಎಡಿಎಂಕೆ ಬೆಳೆಯಲು, ರಾಷ್ಟ್ರಮಟ್ಟದಲ್ಲಿ ಅದರಲ್ಲಿಯೂ ಕಾಂಗ್ರೆಸ್ನ ಸಖ್ಯಗಳಿಸಿಕೊಳ್ಳಲು ಜಯಲಲಿತಾ ಸಹಾಯ ಮಾಡಿದ್ದರು. ಇದು ಕರುಣಾನಿಧಿಗೆ ಜಯಲಲಿತಾ ಮೇಲೆ ಸಿಟ್ಟಿಗೆ ಕಾರಣವಾಯಿತು.
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ
ಎಂಜಿಆರ್ ನಂತರ ಎಡಿಎಂಕೆ ನಾಯಕಿಯಾದ ಜಯಾ
ಎಂಜಿಆರ್ ಮರಣಾನಂತರ ಎಡಿಎಂಕೆ ಪಕ್ಷ ಒಡೆದು ಎರಡು ಹೋಳಾಯಿತು. ಒಂದನ್ನು ಎಂಜಿಆರ್ ಪತ್ನಿ ಜಾನಕಿ ನಡೆಸಿದರೆ ಮತ್ತೊಂದನ್ನು ಜಯಲಲಿತಾ ಮುನ್ನಡೆಸಿದರು. ಜಾನಕಿ ಅವರಿಗೆ ಕರುಣಾನಿಧಿ ಬೆಂಬಲವಿತ್ತು. ಆದರೆ ಜಯಲಲಿತಾ ತಮ್ಮ ಚತುರತೆಯಿಂದ ಎರಡೂ ಬಣವನ್ನು ಒಂದು ಗೂಡಿಸಿ ಕರುಣಾನಿಧಿ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾದರು.
ಸದನದಲ್ಲಿ ಜಯಲಲಿತಾ ಸೀರೆ ಎಳೆದಿದ್ದ ಡಿಎಂಕೆ
ಮುಖ್ಯವಾದ ಘಟನೆ ನಡೆದದ್ದು ಆಗಲೇ. 1989ರಲ್ಲಿ ಜಯಲಲಿತಾ ವಿರೋಧ ಪಕ್ಷದ ನಾಯಕಿಯಾಗಿ, ಮುಖ್ಯಮಂತ್ರಿ ಕರುಣಾನಿಧಿ ಮೇಲೆ ಗುರುತರ ಆರೋಪ ಮಾಡಿದರು. ಅವರು ತಮ್ಮ ಕರೆಗಳನ್ನು ಕದ್ದು ಕೇಳುತ್ತಿದ್ದಾರೆ. ಅವರು ಅಪರಾಧಿ ಎಂಬ ಅರ್ಥದ ಶಬ್ದ ಬಳಿಸಿದರು. ಇದರಿಂದ ಕೆರಳಿದ ಕರುಣಾನಿಧಿ ಮೈಕ್ ಅನ್ನು ಕೈಯಿಂದ ಮುಚ್ಚಿಕೊಂಡು ಜಯಲಲಿತಾ ವಿರುದ್ಧ ಏಕವಚನದಲ್ಲಿ ನೀಚವಾಗಿ ಬೈದುಬಿಟ್ಟರು. ಇದು ಎರಡೂ ಪಕ್ಷಗಳ ಮಧ್ಯೆ ಜಗಳವನ್ನು ಉಂಟುಮಾಡಿತು. ಜಯಲಲಿತಾ ಎಡೆಗೆ ಕಟ್ಟು ಮಾಡಿ ಇಡಲಾಗಿದ್ದ ಬಜೆಟ್ ಪ್ರತಿಗಳನ್ನು ಎಸೆದರು. ಹಲ್ಲೆ ಸಹ ಮಾಡಲಾಯಿತು. ಜಯಲಲಿತಾ ಸದನದಿದ ಹೊರ ಹೋಗುವ ಸಂದರ್ಭದಲ್ಲಿ ಡಿಎಂಕೆಯ ಮಂತ್ರಿ ದೊರೈ ಮುರುಗನ್ ಜಯಲಲಿತಾ ಸೀರೆಗೆ ಕೈಹಾಕಿ ಎಳೆದುಬಿಟ್ಟ!
ಜಯಲಲಿತಾಗೆ ಸಿಂಪತಿ, ಕರುಣಾನಿಧಿಗೆ ಆಘಾತ
ಜಯಲಲಿತಾ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದರು. ತಾವು ಇನ್ನು ಮುಂದೆ ಸದನಕ್ಕೆ ಬರುವುದಿಲ್ಲ, ಬರುವುದಾದರೆ ಮುಖ್ಯಮಂತ್ರಿಯಾಗಿಯೇ ಎಂದು ಶಪತ ಮಾಡಿದರು. ಆ ನಂತರ ಕರುಣಾನಿಧಿ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾ ಮಾಡಿತು. ಆ ನಂತರ ನಡೆದ ಚುನಾವಣೆಯಲ್ಲಿ ಎಡಿಎಂಕೆ ಪಕ್ಷಕ್ಕೆ ಜಯಲಲಿತಾರೊಂದಿಗೆ ಡಿಎಂಕೆ ಪಕ್ಷ ನಡೆದುಕೊಂಡ ವಿಷಯವೇ ಚುನಾವಣಾ ವಿಷಯವಾಯಿತು. ರಾಜೀವ್ ಗಾಂಧಿ ಹತ್ಯೆ ಸಹ ಅದೇ ಸಮಯದಲ್ಲಿ ಆಗಿದ್ದ ಕಾರಣ ಡಿಎಂಕೆ ಪಕ್ಷ ಭಾರಿ ಕುಸಿತ ಕಂಡು 234 ಸೀಟುಗಳ ಪೈಕೆ ಕೇವಲ 2 ಸೀಟುಗಳನ್ನಷ್ಟೆ ಗೆದ್ದಿತು.
ಜಯಲಲಿತಾರನ್ನು ಬಂಧಿಸಿದ್ದ ಕರುಣಾನಿಧಿ ಸರ್ಕಾರ
ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಿದ ಎಡಿಎಂಕೆ ಜಯಲಲಿತಾ ಅವರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿಕೊಂಡಿತು. ಕಾಂಗ್ರೆಸ್ ಜತೆ ಐದು ವರ್ಷ ಪೂರ್ಣವಾಗಿ ಸರ್ಕಾರ ನಡೆಸಿದರು. ಆ ನಂತರ ಅಧಿಕಾರಕ್ಕೆ ಬಂದ ಕರುಣಾನಿಧಿ, ಜಯಲಲಿತಾ ಅವರ ಮೇಲೆ ಹಲವು ಭ್ರಷ್ಟಾಚಾರದ ಆರೋಪಗಳನ್ನು ಹಾಕಿದರು. 1996ರ ಡಿಸೆಂಬರ್ನಲ್ಲಿ ಜಯಲಲಿತಾ ಅವರನ್ನು ಬಂಧಿಸಲಾಯಿತು. ಇದೂ ಸಹ ಈ ಇಬ್ಬರ ನಡುವೆ ದ್ವೇಷ ಹೆಚ್ಚಾಗಲು ಕಾರಣವಾಯಿತು.
ಕರುಣಾನಿಧಿಯನ್ನು ಬಂಧಿಸಿದ್ದ ಜಯಲಲಿತಾ
ತನಗೆ ಆದ ಅವಮಾನವನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದ ಜಯಲಲಿತಾ 2001ರಲ್ಲಿ ಮುಖ್ಯಮಂತ್ರಿ ಆಗಿದ್ದೆ ತಡ ಮಧ್ಯ ರಾತ್ರಿ ಕರುಣಾನಿಧಿ ಮನೆಗೆ ಪೊಲೀಸರನ್ನು ನುಗ್ಗಿಸಿದರು. ಜಯಲಲಿತಾ ಸೂಚನೆ ಮೇರೆಗೆ ಒಳನುಗ್ಗಿದ್ದ ಪೊಲೀಸರು ಮಾಜಿ ಸಿಎಂ ಕರುಣಾನಿಧಿಯನ್ನು ಧರ-ಧರನೆ ನೆಲದ ಮೇಲೆ ಎಳೆದುಕೊಂಡು ಬಂದು ಜೈಲಿಗೆ ತಳ್ಳಿದ್ದರು. ಕರುಣಾನಿಧಿ ಮೇಲೆ ಫ್ಲೈ ಓವರ್ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿತ್ತು.
ಈಗ ಇಬ್ಬರೂ ಮರೀನಾ ಬೀಚ್ನ ಮಣ್ಣಿನಲ್ಲಿ
ಹೀಗೆ ಹಲವು ಪ್ರಮುಖ ಘಟನೆಗಳು ಇವರಿಬ್ಬರ ನಡುವೆ ಸತತವಾಗಿ ದ್ವೇಷ ಹೆಚ್ಚಿಸುತ್ತಲೇ ಬಂದಿತು. ಆದರೆ ಈಗ ಇಬ್ಬರೂ ಅದೇ ಮರೀನಾ ಬೀಚ್ನ ಮಣ್ಣಿನಲ್ಲಿ ಮಣ್ಣಾಗಲಿದ್ದಾರೆ. ಜಯಲಲಿತಾ ಮಣ್ಣಾಗಿರುವ ಮರೀನಾ ಬೀಚ್ನಲ್ಲೇ ಕರುಣಾನಿಧಿಯನ್ನೂ ಮಣ್ಣು ಮಾಡಲಾಗುತ್ತಿದೆ. ಸತ್ತಮೇಲಾದರೂ ಇಬ್ಬರೂ ದ್ವೇಷ ಮರೆತು ಇರಬಲ್ಲೆರೇ.
ಮರೀನಾ ಬೀಚ್ನಲ್ಲಿಯೇ ಕರುಣಾನಿಧಿ ಸಂಸ್ಕಾರಕ್ಕೆ ಡಿಎಂಕೆ ಪಟ್ಟುಹಿಡಿದಿರುವುದೇಕೆ?