ಮರೀನಾ ಬೀಚ್ನಲ್ಲಿಯೇ ಕರುಣಾನಿಧಿ ಸಂಸ್ಕಾರಕ್ಕೆ ಡಿಎಂಕೆ ಪಟ್ಟುಹಿಡಿದಿರುವುದೇಕೆ?
ಚೆನ್ನೈ, ಆಗಸ್ಟ್ 08: ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್ನಲ್ಲಿಯೇ ಮಾಡಬೇಕೆಂದು ಡಿಎಂಕೆ ಪಟ್ಟು ಹಿಡಿದಿದೆ. ಈ ಕುರಿತು ನಿನ್ನೆ ರಾತ್ರಿಯಿಂದಲೂ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.
ಕರುಣಾನಿಧಿ ನಿಧನಕ್ಕೆ ಸಂತಾಪ ಸೂಚಿಸಿರುವ ತಮಿಳುನಾಡು ಸರ್ಕಾರ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಆದರೆ ಮರೀನಾ ಬೀಚ್ನಲ್ಲಿ ಆರು ಅಡಿ ಜಾಗ ನೀಡಲು ನಿರಾಕರಿಸಿ ಹೈಕೋರ್ಟ್ ಮೊರೆ ಹೋಗಿದೆ.
LIVE: ತಮಿಳರ ಕಣ್ಮಣಿ ಕರುಣಾನಿಧಿ ಅಂತಿಮ ವಿದಾಯಕ್ಕೆ ಸಿದ್ಧತೆ
ಡಿಎಂಕೆ ಪಕ್ಷ ಸಹ ಕರುಣಾನಿಧಿ ಅವರ ಕಳೆಬರವನ್ನು ಮರೀನಾ ಬೀಚ್ನಲ್ಲಿಯೇ ಸಂಸ್ಕಾರ ಮಾಡಲು ಪಟ್ಟು ಹಿಡಿದಿದ್ದು ಹೈಕೋರ್ಟ್ನಲ್ಲಿ ಹೋರಾಟ ಮುಂದುವರೆಸಿದೆ. ಆದರೆ ಈ ಎರಡೂ ಪಕ್ಷಗಳು ಮರೀನಾ ಬೀಚ್ಗಾಗಿ ಏಕೆ ಇಷ್ಟು ಪಟ್ಟು ಹಿಡಿದಿವೆ ಎನ್ನುವುದು ಕುತೂಹಲಕರ.
ಮುಖ್ಯ ರಾಜಕಾರಣಿಗಳು ಮರೀನಾ ಬೀಚ್ನಲ್ಲಿ
ತಮಿಳುನಾಡಿನಲ್ಲಿ ಛಾಪು ಮೂಡಿಸಿದ ರಾಜಕಾರಣಿಗಳ್ನೆಲ್ಲಾ ಮರೀನಾ ಬೀಚ್ನಲ್ಲಿಯೇ ಸಂಸ್ಕಾರ ಮಾಡಲಾಗಿದೆ. ಅಣ್ಣಾದೊರೈ, ಎಂಜಿಆರ್, ಜಯಲಲಿತಾ ಸಮಾಧಿಗಳು ಮರೀನಾ ಬೀಚ್ನಲ್ಲಿಯೇ ಇವೆ. ಮರೀನಾ ಬೀಚ್ನಲ್ಲಿ ಸಂಸ್ಕಾರ ಮಾಡುವುದು ಪ್ರತಿಷ್ಠೆಯ ವಿಚಾರವಾಗಿದೆ ಹಾಗಾಗಿ ಡಿಎಂಕೆ ಪಕ್ಷವು ಕರುಣಾನಿಧಿ ಅವರನ್ನು ಇಲ್ಲಿಯೇ ಸಂಸ್ಕಾರ ಮಾಡಲು ಪಟ್ಟು ಹಿಡಿದಿದೆ.
ಜಯಲಲಿತಾ ಸಮಾಧಿಯ ಬಳಿ ನಿಧಿ ಸಮಾಧಿಗೆ ವಿರೋಧ?
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಆಡಳಿತದಲ್ಲಿರುವ ಎಡಿಎಂಕೆ ಪಕ್ಷ. ಕರುಣಾನಿಧಿ ಅವರನ್ನು ಜೀವಿತಾವಧಿಯಲ್ಲಿ ವಿರೋಧಿಸಿಕೊಂಡು ಬಂದಿದ್ದ ಜಯಲಲಿತಾ ಅವರ ಸಮಾಧಿ ಇರುವ ಸ್ಥಳದಲ್ಲಿ ಕರುಣಾನಿಧಿ ಸಮಾಧಿ ಇರಬಾರದೆಂದು ಹಠಕ್ಕೆ ಬಿದ್ದಂತಿದೆ. ಅಲ್ಲದೆ ಮರೀನಾ ಬೀಚ್ನಲ್ಲಿ ಮಣ್ಣಾಗುವ 'ಪ್ರತಿಷ್ಠೆ' ಕರುಣಾನಿಧಿಗೆ ದೊರಕಬಾರದು ಎಂಬ ಕುಯುಕ್ತಿಯೂ ಇಲ್ಲಿ ಕಾಣುತ್ತಿದೆ.
ಅಣ್ಣಾದೊರೈ ಸಮಾಧಿ ಪಕ್ಕ ಸ್ಥಾನ ಕೇಳಿರುವ ಡಿಎಂಕೆ
ಆದರೆ ಡಿಎಂಕೆ ಪಕ್ಷವು ಪಕ್ಷದ ಸ್ಥಾಪಕ ಅಣ್ಣಾದೊರೈ ಅವರ ಆತ್ಮವೂ, ಜೀವವೂ ಕರುಣಾನಿಧಿ ಆಗಿದ್ದರು ಹಾಗಾಗಿ ಅವರ ಸಮಾಧಿಯ ಪಕ್ಕದಲ್ಲಿಯೇ ಕರುಣಾನಿಧಿ ಅವರಿಗೆ ಸ್ಥಳ ನೀಡಬೇಕು ಎಂದು ಪಟ್ಟು ಹಿಡಿದಿದೆ. ಡಿಎಂಕೆ ಕಾರ್ಯಕರ್ತರು ಈಗಾಗಲೇ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದಾರೆ.
ಸತ್ತ ನಂತರವೂ ರಾಜಕೀಯ
ಬದುಕಿದ್ದಾಗ ಕಂಠಪೂರ್ತಿಯಾಗಿ ದ್ವೇಷದ ರಾಜಕೀಯ ಮಾಡಿದ್ದ ಈ ಎರಡೂ ಪಕ್ಷಗಳು ಸತ್ತ ನಂತರವೂ ರಾಜಕೀಯ ಮಾಡುತ್ತಿರುವುದು ರೇಜಿಗೆ ಹುಟ್ಟಿಸುತ್ತಿದೆ.