ಅಸಲಿಗೆ, ಮತ ಹಾಕಲು ನಟ ವಿಜಯ್ ಸೈಕಲ್ನಲ್ಲಿ ಬಂದಿದ್ದೇಕೆ? ಇಲ್ಲಿದೆ ನಿಜ ಕಾರಣ
ಚೆನ್ನೈ, ಏಪ್ರಿಲ್ 6: ಇಂದು ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆ ಸಾಗುತ್ತಿದೆ. ಹಲವು ಸೆಲೆಬ್ರಿಟಿಗಳು ಮತದಾನ ಮಾಡಿದ್ದು, ಅದರಲ್ಲಿ ನಟ ವಿಜಯ್ ಸೈಕಲ್ ನಲ್ಲಿ ಬಂದು ಮತದಾನ ಮಾಡಿದ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ವಿಜಯ್ ಅವರು ಮತ ನೀಡಲು ಸೈಕಲ್ನಲ್ಲಿ ಬಂದ ಹಲವು ಫೋಟೊಗಳು ವೈರಲ್ ಆಗುತ್ತಿದ್ದಂತೆ ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ನಟ ಸೈಕಲ್ ಏರಿ ಬರುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ ಎಂಬ ಸಂಗತಿ ಎಲ್ಲೆಲ್ಲೂ ಹರಿದಾಡುತ್ತಿದೆ. ಆದರೆ ಇದೆಲ್ಲಾ ಏನೂ ಇಲ್ಲ. ವಿಷಯ ಬೇರೆಯದೇ ಇದೆ ಎಂದು ನಟ ವಿಜಯ್ ತಂಡದ ಪ್ರಚಾರಕ ಸ್ಪಷ್ಟನೆ ನೀಡಿದ್ದಾರೆ. ಏನದು? ಮುಂದೆ ಓದಿ...
ಮತಗಟ್ಟೆಗೆ ಸೈಕಲ್ನಲ್ಲಿ ಬಂದ ನಟ ವಿಜಯ್
ಚೆನ್ನೈನಲ್ಲಿನ ನೀಲಂಕರೈನಲ್ಲಿರುವ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ನಟ ವಿಜಯ್ ಸೈಕಲ್ನಲ್ಲಿ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಅವರಿಗೆ ಮುತ್ತಿಕೊಂಡಿದ್ದು, ಟ್ರಾಫಿಕ್ ಜಾಮ್ ಉಂಟಾದ ಸಂಗತಿ ನಡೆದಿದೆ. ವಿಜಯ್ ಎಷ್ಟೇ ವೇಗವಾಗಿ ಸೈಕಲ್ ಓಡಿಸಲು ಪ್ರಯತ್ನಪಟ್ಟರೂ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಗುಂಪುಗೂಡಿದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಚ್ ನಡೆಸಿದ ಸಂಗತಿಯೂ ನಡೆಯಿತು.
Assembly Elections 2021 Live: ಮತ ಚಲಾಯಿಸಲು ಸೈಕಲ್ನಲ್ಲಿ ಬಂದ ನಟ ವಿಜಯ್
ಕೇಂದ್ರ ಸರ್ಕಾರದ ವಿರುದ್ಧ ನಟನ ಅಸಮಾಧಾನ ಎಂದು ಟ್ವೀಟ್
ವಿಜಯ್ ಮತಗಟ್ಟೆ ಸಮೀಪ ಬರುತ್ತಿದ್ದಂತೆ ಅಲ್ಲಿಯೂ ಅಭಿಮಾನಿಗಳು ಕಿಕ್ಕಿರಿದಿದ್ದರು. ನಂತರ ಎಲ್ಲರನ್ನೂ ಚದುರಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಆದರೆ ಮತದಾನ ನಡೆದ ನಂತರ ವಿಜಯ್ ಸೈಕಲ್ ಏರಿ ಬಂದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ವಿಜಯ್ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂಬ ಟ್ವೀಟ್ಗಳೂ ವೈರಲ್ ಆಗಿವೆ.
"ಇದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ"
ಆದರೆ ವಿಜಯ್ ಸೈಕಲ್ ಓಡಿಸಿಕೊಂಡು ಬಂದಿದ್ದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ಕಿರಿದಾದ ಜಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಉಂಟಾಗಬಹುದಾದ ಸಾಧ್ಯತೆಯನ್ನು ತಪ್ಪಿಸಲು ಸೈಕಲ್ನಲ್ಲಿ ಬಂದರಷ್ಟೆ ಎಂದು ಅವರ ತಂಡದ ಪ್ರಚಾರಕ ಹೇಳಿದ್ದಾರೆ. ವಿಜಯ್ ಅವರ ನಿವಾಸದ ಸಮೀಪವೇ ಮತದಾನ ಕೇಂದ್ರವಿದ್ದು, ಕಾರು ತೆಗೆದುಕೊಂಡು ಹೋದರೆ ಇಕ್ಕಟ್ಟಾಗುತ್ತದೆ ಎಂದು ಸೈಕಲ್ನಲ್ಲಿ ಬಂದರು. ಸೈಕಲ್ನಲ್ಲಿ ಬಂದಿದ್ದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ರಿಯಾಜ್ ಕೆ ಅಹ್ಮದ್ ಟ್ವೀಟ್ ಮಾಡಿದ್ದಾರೆ.
ವಿಜಯ್ ಸೈಕಲ್ನಲ್ಲಿ ಬಂದಿದ್ದಕ್ಕೆ ಡಿಎಂಕೆ ಪ್ರತಿಕ್ರಿಯೆ
ನಟ ವಿಜಯ್ ಸೈಕಲ್ನಲ್ಲಿ ಬಂದದ್ದು ಸುದ್ದಿಯಾಗುತ್ತಿದ್ದಂತೆ ಡಿಎಂಕೆಯ ಕೆಲವು ನಾಯಕರು, ನಟ ವಿಜಯ್, ಬಿಜೆಪಿಯೊಂದಿಗೆ ಮೈತ್ರಿಯಲ್ಲಿರುವ ತಮಿಳುನಾಡಿನ ಆಡಳಿತ ಪಕ್ಷಕ್ಕೆ ತಾವು ಸೈಕಲ್ ಏರಿ ಬರುವ ಮೂಲಕ ಸಂದೇಶವೊಂದನ್ನು ನೀಡುತ್ತಿದ್ದಾರೆ. ತೈಲ ಬೆಲೆ ಏರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.