ತಮಿಳುನಾಡು ರಾಜಕೀಯದ ಮುಂದಿನ ಕಿಂಗ್ ಯಾರು?
Recommended Video
ಚೆನ್ನೈ, ಆಗಸ್ಟ್ 09 : ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಚಿರನಿದ್ರೆಗೆ ಜಾರಿದ್ದಾರೆ. ಜೆ.ಜಯಲಲಿತಾ, ಕರುಣಾನಿಧಿ ನಿಧನದ ಬಳಿಕ ತಮಿಳುನಾಡಿನ ಮುಂದಿನ ರಾಜಕೀಯ ನೇತಾರರು ಯಾರು? ಎಂಬ ಪ್ರಶ್ನೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನಾಲ್ಕು ದಶಕದಿಂದ ತಮಿಳುನಾಡನ್ನು ಆಳಿರುವುದು ಸಿನಿಮಾ ಹಿನ್ನಲೆಯನ್ನು ಹೊಂದಿರುವ ನಾಯಕರು. ಈಗ ರಜನಿಕಾಂತ್ ಮತ್ತು ಕಮಲ್ ಹಾಸನ್ ಇವರಲ್ಲಿ ಯಾರು ರಾಜ್ಯದ ರಾಜಕಾರಣದಲ್ಲಿ ಕಿಂಗ್ ಮೇಕರ್ ಆಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ಕಮಲ್ ಹಾಸನ್ ಮತ್ತು ನನ್ನ ಗುರಿ ಒಂದೇ: ರಜನಿಕಾಂತ್
ಕಮಲ್ ಹಾಸನ್ ಅವರು ಈಗಾಗಲೇ 'ಮಕ್ಕಳ್ ನೀದಿ ಮೈಯಂ' ಎಂಬ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ರಜನಿಕಾಂತ್ ಅವರು ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಪಕ್ಷದ ಹೆಸರನ್ನು ಅವರು ಘೋಷಣೆ ಮಾಡಿಲ್ಲ.
ರಾಜಕೀಯ ಯಾತ್ರೆಗೂ ಮುನ್ನ ರಜನಿ ಭೇಟಿಯಾದ ಕಮಲ್
ಕರುಣಾನಿಧಿ, ಜಯಲಲಿತಾ ನಿಧನದ ಬಳಿಕ ಬಿಜೆಪಿಗೆ ರಾಜ್ಯದಲ್ಲಿ ಪಕ್ಷವನ್ನು ಕಟ್ಟುವುದಕ್ಕೆ ಅವಕಾಶ ಸಿಕ್ಕಿದೆ ಎಂಬ ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ. ಬಿಜೆಪಿ ರಜನಿಕಾಂತ್ ಅವರನ್ನು ಬೆಂಬಲಿಸಬಹುದು ಎಂಬ ಸುದ್ದಿಯೂ ಹಬ್ಬಿದೆ. ಆದ್ದರಿಂದ, ತಮಿಳುನಾಡು ರಾಜಕಾರಣ ಹಲವು ಕುತೂಹಲಗಳಿಗೆ ಕಾರಣವಾಗಿದೆ....
ಎಐಎಡಿಎಂಕೆ ಸಾರಥ್ಯ ರಜನಿಕಾಂತ್ಗೆ?
ಕಳೆದ ಒಂದು ವಾರದಿಂದ ತಮಿಳುನಾಡಿನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಅದರ ಪ್ರಕಾರ ನಟ ರಜನಿಕಾಂತ್ ಎಐಎಡಿಎಂಕೆ ಪಕ್ಷದ ಸಾರಥ್ಯವನ್ನು ವಹಿಸಕೊಳ್ಳಲಿದ್ದಾರೆ. 2019ರ ಲೋಕಸಭೆ ಚುನಾವಣೆಯನ್ನು ಬಿಜೆಪಿ ಬೆಂಬಲದಿಂದ ಅವರು ಎದುರಿಸಲಿದ್ದಾರೆ.
ರಾಜಕೀಯಕ್ಕೆ ಬರುವುದಾಗಿ ಈಗಾಗಲೇ ರಜನಿಕಾಂತ್ ಘೋಷಣೆ ಮಾಡಿದ್ದಾರೆ. ಆದರೆ, ಯಾವುದೇ ಪಕ್ಷದ ಹೆಸರನ್ನು ಅವರು ಹೇಳಿಲ್ಲ. ಕರುಣಾನಿಧಿ ಅವರ ನಿಧನದ ಬಳಿಕ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಿದೆ. ಕೆಲವೇ ದಿನಗಳಲ್ಲಿ ರಜನಿಕಾಂತ್ ಪಕ್ಷವನ್ನು ಮುನ್ನೆಡೆಸುವ ಬಗ್ಗೆ ಘೋಷಣೆಯಾಗುವ ನಿರೀಕ್ಷೆ ಇದೆ.
ರಜನಿ ರಾಜಕೀಯ
ನಟ ರಜನಿಕಾಂತ್ ರಾಜಕೀಯಕ್ಕೆ ಬರಬೇಕು ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಕಾದಿದ್ದಾರೆ. 2017ರ ಅಂತ್ಯದಲ್ಲಿ ರಜನಿ ರಾಜಕೀಯಕ್ಕೆ ಬರುವೆ ಎಂದು ಘೋಷಣೆ ಮಾಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿಯೂ ಅವರು ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದರು.
ರಜನಿಕಾಂತ್ ರಾಜಕಾರಣಕ್ಕೆ ಬಂದರೆ ಬಿಜೆಪಿ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ರಜನಿ ಎದುರಾಗಿ ರಾಜಕೀಯ ನಡೆಸಲು ಕಮಲ್ ಹಾಸನ್ ಸಿದ್ಧವಾಗಿದ್ದಾರೆ. ಈಗಾಗಲೇ ಅವರು 'ಮಕ್ಕಳ್ ನೀದಿ ಮೈಯಂ' ಎಂಬ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ.
ಕಮಲ್/ರಜನಿಕಾಂತ್
ರಜನಿಕಾಂತ್ ಮತ್ತು ಕಮಲ್ ಹಾಸನ್ ನಡುವೆ ಹೋಲಿಕೆ ಮಾಡಿದರೆ ರಜನಿಕಾಂತ್ಗೆ ಹೆಚ್ಚು ಜನ ಬೆಂಬಲ ಸಿಗುವ ಸಾಧ್ಯತೆ ಇದೆ. ಕ್ಲೀನ್ ಇಮೇಜ್ಅನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬೆಂಬಲವೂ ಸಿಕ್ಕಿದರೆ ರಜನಿ ಹಾದಿ ಸುಲಭವಾಗಲಿದೆ.
ಕಮಲ್ ಹಾಸನ್ ತಮ್ಮ ಹೇಳಿಕೆಗಳಿಂದ ಹಲವಾರು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಆದರೆ, ಅವರು ಸಹ ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
39 ಲೋಕಸಭಾ ಸ್ಥಾನಗಳು
ತಮಿಳುನಾಡು ರಾಜ್ಯದಲ್ಲಿ 39 ಲೋಕಸಭಾ ಸ್ಥಾನಗಳಿವೆ. ಎಂ.ಕರುಣಾನಿಧಿ ಅವರು ಯುಪಿಎ, ಎನ್ಡಿಎ ಎರಡೂ ಮೈತ್ರಿಕೂಟಕ್ಕೆ ಬೆಂಬಲ ನೀಡಿ ಕೇಂದ್ರ ಸಚಿವ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. 2019ರ ಲೋಕಸಭೆ ಚುನಾವಣೆ ಎಂ.ಕರುಣಾನಿಧಿ, ಜೆ.ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ನಡೆಯಲಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 37 ಸ್ಥಾನಗಳನ್ನು ಎಐಎಡಿಎಂಕೆ ಪಕ್ಷ ಗೆದ್ದುಕೊಂಡಿತ್ತು. ಆಗ ಜಯಲಲಿತಾ ಇದ್ದರು. ಬಿಜೆಪಿ ಕೇವಲ 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಈ ಬಾರಿ ಡಿಎಂಕೆಯ ಸ್ಟಾಲಿನ್ ಕರುಣಾನಿಧಿ ಅವರ ಸಾವಿನ ವಿಚಾರವನ್ನು ಮುಂದಿಟ್ಟುಕೊಂಡು ಮತ ಕೇಳಬಹುದು. ಯಾರಿಗೆ ಎಷ್ಟು ಸೀಟು ಸಿಗಲಿದೆ? ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ತಮಿಳುನಾಡು ಮೇಲೆ ಬಿಜೆಪಿ ಕಣ್ಣು
ಬಿಜೆಪಿ ದಕ್ಷಿಣದ ರಾಜ್ಯಗಳ ಮೇಲೆ ಅದರಲ್ಲೂ ತಮಿಳುನಾಡಿನ ಮೇಲೆ ಕಣ್ಣಿಟ್ಟಿದೆ. ಜೂನ್ 2018ರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ 'ತಮಿಳುನಾಡು ಮಿಷನ್ 2019' ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ತಮಿಳುನಾಡಿನಿಂದ ಪುದುಚೇರಿ ತನಕ 10 ಸಾವಿರ ಬೂತ್ ಲೆವಲ್ ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ತಮಿಳುನಾಡು ರಾಜಕೀಯ ಮುಂದೇನಾಗಲಿದೆ? ಎಂಬುದು ಸದ್ಯದ ಕುತೂಹಲ.