ಶುಭಶ್ರೀ ಪರಿಚಯ: ಟೆಕ್ಕಿ,Zumba ಡ್ಯಾನ್ಸರ್, ಆಪ್ತರ ಸ್ಟಾರ್
Recommended Video
ಚೆನ್ನೈ, ಸೆ. 16: ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 23ವರ್ಷದ ಯುವತಿ ಶುಭಶ್ರೀಯನ್ನು ಕೊಂದದ್ದು ಯಾರು ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡ್ ಆಗಿದ್ದು ನೋಡಿರಬಹುದು. ಶುಭಶ್ರೀ ಸಾವಿಗೆ ನ್ಯಾಯ ಆಗ್ರಹಿಸಲಾಗುತ್ತಿದೆ. ಆದರೆ, ದುರಂತವೆಂದರೆ ನ್ಯಾಯ ಯಾರಲ್ಲಿ ಬೇಡುವುದು, ಶುಭಶ್ರೀ ಸಾವಿಗೆ ಕಾರಣವಾಗಿದ್ದೇ ಆಡಳಿತ ಪಕ್ಷದ ಅಕ್ರಮ ಹೋರ್ಡಿಂಗ್. ಹೀಗಾಗಿ, ಆಕೆ ಸಾವಿಗೆ ಎಐಎಡಿಎಂಕೆ ಸರ್ಕಾರವೇ ಹೊಣೆಯಾಗಬೇಕು ಎಂದು ಶುಭಶ್ರೀ ಆಪ್ತರು ಆಕ್ರೋಶಭರಿತವಾಗಿ ಹೇಳಿದ್ದಾರೆ. ದುರಂತ ಅಂತ್ಯ ಕಂಡ ಶುಭಶ್ರೀ ಹಿನ್ನಲೆ ಬಗ್ಗೆ ಇಲ್ಲಿದೆ
ಯುವ ಸಾಫ್ಟ್ ವೇರ್ ಸಾವಿನ ಕೊನೆ ಕ್ಷಣಗಳ ವಿಡಿಯೋ ನೋಡಿದ ಮೇಲೆ ನಾಗರಿಕರ ಕೆಂಗಣ್ಣಿಗೆ ಚೆನ್ನೈ ಕಾರ್ಪೋರೇಷನ್ ಗುರಿಯಾಗಿದೆ. ಕೊನೆಗೂ ಎಚ್ಚೆತ್ತುಕೊಂಡ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅಕ್ರಮ ಹೋರ್ಡಿಂಗ್, ಫ್ಲೆಕ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಒಂದೇ ದಿನದಂದು ಸುಮಾರು 3,400 ಅಕ್ರಮ ಹೋರ್ಡಿಂಗ್ ಗಳನ್ನು ನೆಲಕ್ಕುರುಳಿಸಿದೆ.
ಶುಭಶ್ರೀ ದುರಂತದ ಬಳಿಕ ಚೆನ್ನೈನಲ್ಲಿ ಒಂದೇ ದಿನದಲ್ಲಿ ಹೋರ್ಡಿಂಗ್ಸ್ ಮಾಯ!
ಶುಭಶ್ರೀ ಸಾವಿಗೆ ಕಾರಣವಾದ ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಹೋರ್ಡಿಂಗ್ ಪ್ರಿಂಟ್ ಮಾಡಿದ್ದ ಪ್ರೆಸ್ ಬಂದ್ ಮಾಡಲಾಗಿದೆ. ಪನ್ನೀರ್ ಸೆಲ್ವಂ, ಎಡಪ್ಪಾಡಿ ಪಳನಿಸ್ವಾಮಿ ಅವರಿದ್ದ ಅಕ್ರಮ ಫ್ಲೆಕ್ಸ್ ಎಐಎಡಿಎಂಕೆ ನಾಯಕ ಹಾಗೂ ಆತನ ಕುಟುಂಬಕ್ಕೆ ಶುಭ ಹಾರೈಸಲು ಹಾಕಲಾಗಿತ್ತು, ಆದರೆ, ಇದುವೇ ಶುಭ ಪ್ರಾಣಕ್ಕೆ ಮಾರಕವಾಯಿತು. ಎಐಎಡಿಎಂಕೆ ನಾಯಕ ಹಾಗೂ ಕುಟುಂಬ ಈಗ ನಾಪತ್ತೆಯಾಗಿದೆ.
ಬಿ. ಟೆಕ್ ಪದವೀಧರೆ ಕೊನೆ ಕ್ಷಣಗಳು
ಪೆರಂಗುಡಿಯಲ್ಲಿರುವ ಐಟಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶುಭಶ್ರೀ ಕಳೆದ ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಪಳ್ಳಿಯಕಾರಣಿ ಬಳಿ ಥರೈಪಕ್ಕಾಂ-ಪಲ್ಲಾವರಂ ರಸ್ತೆಯ ತಿರುವಿನಲ್ಲಿ ದ್ವಿಚಕ್ರವಾಹನ ಚಲಿಸುವಾಗ ಅಕ್ರಮವಾಗಿ ಹಾಕಿದ್ದ ಹೋರ್ಡಿಂಗ್ ಆಕೆ ಮೇಲೆ ಬೀಳುತ್ತದೆ. ಇದರಿಂದ ಬ್ಯಾಲೆನ್ಸ್ ತಪ್ಪಿ ರಸ್ತೆ ಮೇಲೆ ಬಿದ್ದ ಶುಭಶ್ರೀ ಮೇಲೆ ಟ್ಯಾಂಕರ್ ವಾಹನ ಹರಿದಿದೆ. ತಕ್ಷಣವೇ ಕ್ರೋಮೆಪೇಟ್ ಸರ್ಕಾರಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ನ್ಯಾಯಾಲಯವನ್ನೂ ಭಾವುಕವಾಗಿಸಿದ ಟೆಕ್ಕಿ ಶುಭಶ್ರೀ ದಾರುಣ ಸಾವು
ಆಪ್ತರ ಪಾಲಿನ ಸಿನಿಮಾ ಸ್ಟಾರ್ ಶುಭಶ್ರೀ
ರವಿ ಹಾಗೂ ಗೀತಾ ದಂಪತಿಯ ಪುತ್ರಿ ಶುಭಶ್ರೀಯನ್ನು ಆಪ್ತರು, ಬಂಧು ಮಿತ್ರರು, ನೆರೆ ಮನೆಯವರೆಲ್ಲರೂ ಸಿನಿಮಾ ಸ್ಟಾರ್ ನಂತೆ ಕಾಣುತ್ತಿದ್ದರು. "ಶುಭಶ್ರೀ ಲವಲವಿಕೆಯ ಗಣಿಯಾಗಿದ್ದಳು, ಆಕೆ ಡಲ್ ಆಗಿದ್ದನ್ನು ನಾನು ನೋಡೇ ಇಲ್ಲ, ನಮ್ಮ ಏರಿಯಾದ ಸೆಲೆಬ್ರಿಟಿ ಸ್ಟಾರ್ ಎಂದು ನೆರೆಮನೆಯಾಕೆ 36 ವರ್ಷ ವಯಸ್ಸಿನ ಶಶಿಕಲಾ ಪ್ರತಿಕ್ರಿಯಿಸಿದ್ದಾರೆ. ರವಿ ಅವರು ಮಾಂಬಲಂ ಪಶ್ಚಿಮ ಪ್ರದೇಶದಿಂದ ಈ ಏರಿಯಾಕ್ಕೆ ಬಂದು 21 ವರ್ಷವಾಗಿದ್ದು, ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಮಿಶ್ರಲೋಹ(ಫ್ರೌಂಡ್ರಿಸ್) ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಜಿಎಸ್ಟಿ ರಸ್ತೆಯಲ್ಲಿ ಪುಸ್ತಕ ಅಂಗಡಿ ಕೂಡಾ ನಡೆಸುತ್ತಿದ್ದು, ಜನಪ್ರಿಯವಾಗಿದೆ.
'ನನಗಿದ್ದಿದ್ದು ಒಬ್ಬಳೇ ಮಗಳು...' ಬಿಕ್ಕಿ ಬಿಕ್ಕಿ ಅತ್ತ ಶುಭಶ್ರೀ ತಂದೆ
ದೀಪಾವಳಿ ಹಬ್ಬದ ಇನ್ನೆಲ್ಲಿ?
ಶಶಿಕಲಾ ಅವರಿಗೆ ಘಟನೆ ನಡೆದ ದಿನವೇ ಸಂಜೆ ವೇಳೆಗೆ ತಿಳಿದು ಆಘಾತವಾಗಿದೆ. ಇನ್ನು ಕೆಲವರಿಗೆ ಮರುದಿನ ಬೆಳಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದು ಬಂದಿದೆ. ಪ್ರತಿ ಬಾರಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಶುಭಶ್ರೀ ನಗುಮೊಗ ಕಣ್ಮುಂದೆ ಬಂದು ನೆರೆಮನೆಯಾಕೆ ಧನಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ. 15 ವರ್ಷಗಳಿಂದ ರವಿ- ಗೀತಾರನ್ನು ಬಲ್ಲೆ, ಶುಭಶ್ರೀ ಚಿಕ್ಕಂದಿನಿಂದಲೂ ತುಂಬಾ ಚ್ಯೂಟಿಯಾಗಿದ್ದಳು, ಹಬ್ಬದ ಸಂಭ್ರಮದಲ್ಲಿ ನಮ್ಮ ಮನೆಯವರು ಅವರು ಎಲ್ಲರೂ ಒಟ್ಟಿಗೆ ಪಟಾಕಿ ಹಚ್ಚಿ, ದೀಪ ಬೆಳಗುತ್ತಿದ್ದೆವು. ಈ ಬಾರಿ ಅವರ ಮನೆ ದೀಪವೇ ನಂದಿ ಹೋಗಿದೆ ಎಂದು ಕಣ್ಣು ಒರೆಸಿಕೊಂಡರು.
ಕೆನಡಾ ಹೋಗುವ ಕನಸು ಕಂಡಿದ್ದ ಶುಭ
"ಕೆನಡಾಕ್ಕೆ ಹೋಗುವುದು ಆಕೆಯ ದೊಡ್ಡ ಕನಸಾಗಿತ್ತು. ಈ ಬಗ್ಗೆ ನನ್ನಲ್ಲಿ ಸಾಕಷ್ಟು ಬಾರಿ ಕೇಳಿ ತಿಳಿದುಕೊಂಡಿದ್ದಳು. ರವಿ ಹಾಗೂ ನಾನು 25 ವರ್ಷದಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತೇವೆ, ಶುಭಶ್ರೀ ಹುಟ್ಟಿದಾಗಿನಿಂದ ನಾನು ಎತ್ತಿ ಆಡಿಸಿದ್ದೇನೆ, ಮಗಳನ್ನು ಕಳೆದುಕೊಂಡ ರವಿ ದುಃಖ ಹೇಳತೀರದು. ಕೆನಡಾಕ್ಕೆ ಹೋಗುವಾಗ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಅಂಕಲ್ ಎಂದವಳು ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾಳೆ" ಎಂದು ರವಿ-ಗೀತಾ ಕುಟುಂಬದ ಆಪ್ತರಾದ ಸುಬ್ರಮಣಿಯನ್ ನೋವು ತೋಡಿಕೊಂಡಿದ್ದಾರೆ.
ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ
ಝುಂಬಾ ಡ್ಯಾನ್ಸರ್ ಆಗಿದ್ದ ಶುಭಶ್ರೀ
ಶುಭಶ್ರೀ ಟೆಕ್ಕಿಯಷ್ಟೇ ಅಲ್ಲ ಪ್ರಮಾಣೀಕೃತ ಝುಂಬಾ ಡ್ಯಾನ್ಸರ್ ಆಗಿದ್ದಳು, ಚೆನ್ನೈನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಳು. ರಸಾಯನಿಕ ಬಳಸದೆ ಸೋಪು ತಯಾರಿಸುವುದು, ಸುಗಂಧ ದ್ರವ್ಯ ತಯಾರಿಸಿ ಇತ್ತೀಚೆಗೆ ಮಾರಾಟ ಮಾಡಿ ಯಶಸ್ವಿಯಾಗಿದ್ದಳು, ಕಾಲೇಜು ದಿನಗಳಿಂದಲೇ ತುಂಬಾ ಆಕ್ಟೀವ್ ಆಗಿದ್ದಳು ನಾವು ಇಬ್ಬರೂ ಒಂದೇ ಕಂಪನಿಗೆ ಸೇರಿಕೊಂಡೆವು, ಎಲ್ಲರೊಟ್ಟಿಗೆ ನಗು ನಗುತ್ತಾ ಬೆರೆಯುತ್ತಿದ್ದ ಶುಭ ಇನ್ನಿಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ ಎಂದು ಆಕೆ ಗೆಳೆಯ ರಾಮಗೋಪಾಲನ್ ಎಸ್ ದುಃಖ ತೋಡಿಕೊಂಡಿದ್ದಾರೆ.