ಹಿಂದಿ V/s ಕನ್ನಡ ಆಯ್ತು; ತಮಿಳುನಾಡಿನಲ್ಲಿ ಹುಟ್ಟಿಕೊಂಡ ಸಂಸ್ಕೃತ ವಿವಾದ!
ಚೆನ್ನೈ, ಮೇ 5: ಭಾರತದಲ್ಲಿ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಬೇಕು ಎನ್ನುವುದರ ಸುತ್ತ ತೀವ್ರ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆಯೇ ತಮಿಳುನಾಡಿನ ವೈದ್ಯಕೀಯ ಕಾಲೇಜು ವೈದ್ಯರು ತೆಗೆದುಕೊಂಡ ಪ್ರಮಾಣ ವಚನವು ಈಗ ವಿವಾದವನ್ನೇ ಹುಟ್ಟು ಹಾಕಿದೆ.
ಕಳೆದ ಮೇ 1 ರಂದು ತಮಿಳುನಾಡಿನ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಪ್ರವೇಶ ಸಮಾರಂಭದಲ್ಲಿ ಸಂಪ್ರದಾಯಿಕ ಪ್ರಮಾಣವಚನದ ಬದಲಿಗೆ 'ಮಹರ್ಷಿ ಚರಕ್ ಶಪಥ್' ಅನ್ನು ತೆಗೆದುಕೊಂಡಿದ್ದಾರೆ ಎಂಬುದು ರಾಜ್ಯದಲ್ಲಿ ಗದ್ದಲಕ್ಕೆ ಕಾರಣವಾಗಿದೆ.
ಹಿಂದಿ-ಕನ್ನಡ ರಣರಂಗಕ್ಕೆ ರಣಾವತ್; ಭಾರತದ ರಾಷ್ಟ್ರಭಾಷೆ ಆಗಬೇಕಂತೆ ಸಂಸ್ಕೃತ!?
ತಮಿಳುನಾಡು ಸರ್ಕಾರವು ಸರ್ಕಾರಿ ಮಧುರೈ ವೈದ್ಯಕೀಯ ಕಾಲೇಜಿನ ಡೀನ್ ಅನ್ನು ವೇಟಿಂಗ್ ಲಿಸ್ಟ್ ನಲ್ಲಿ ಇಟ್ಟಿದೆ. ಏಕೆಂದರೆ ಮಾರ್ಚ್ 11ರಂದು ಸಂಸ್ಕೃತದಲ್ಲಿ ಪ್ರಮಾಣ ವಚನ ಪಡೆದುಕೊಂಡ ವಿಡಿಯೋ ಇದೀಗ ರಾಜ್ಯದಲ್ಲಿ ಭಾಷಾ ವಿವಾದ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.
ಸಂಸ್ಕೃತದಲ್ಲಿ ಪ್ರಮಾಣವಚನ: ಮಧುರೈ ಮೆಡಿಕಲ್ ಕಾಲೇಜಿನಲ್ಲಿ ನಡೆದ ಫ್ರೆಶಸ್ ವೈಟ್ ಕೋಟ್ ಸಮಾರಂಭದಲ್ಲಿ ತಮಿಳುನಾಡಿನ ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗ ರಾಜನ್ ಮತ್ತು ಕಂದಾಯ ಸಚಿವ ಪಿ. ಮೂರ್ತಿ ಸಹ ಭಾಗವಹಿಸಿದ್ದರು. ಈ ವೇಳೆ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಕಂಡು ಶಾಕ್ ಆದರು.
"ನಾನು ಅವರ ಪ್ರಮಾಣವನ್ನು ಕೇಳಿದಾಗ ಸಾಕಷ್ಟು ಆಘಾತಕ್ಕೊಳಗಾಗಿದ್ದೆ. ವೈದ್ಯರು ಹಿಪೊಕ್ರೆಟಿಕ್ ಪ್ರಮಾಣವಚನ ಸ್ವೀಕರಿಸಿದರು ಎಂದು ನಾನು ಯಾವಾಗಲೂ ಭಾವಿಸಿದೆ. ವಾಸ್ತವವಾಗಿ, ನಾನು ಅದೇ ಪ್ರಮಾಣ ವಚನ ಸ್ವೀಕರಿಸಲು ರಾಜಕಾರಣಿಗಳಿಗೆ ಶಿಫಾರಸು ಮಾಡುತ್ತಿದ್ದೇನೆ" ಎಂದು ರಾಜನ್ ಕಾರ್ಯಕ್ರಮದಲ್ಲಿ ಹೇಳಿದರು.
ಈ ಘಟನೆ ನಡೆದು ಕೆಲವು ದಿನಗಳಲ್ಲೇ ತಮಿಳುನಾಡು ಸರ್ಕಾರ ಮಧುರೈ ಮೆಡಿಕಲ್ ಕಾಲೇಜಿನ ಡೀನ್ ಅವರನ್ನು ತೆಗೆದುಹಾಕಿದೆ. ಸಂಸ್ಥೆಯ ಡೀನ್ ಡಾ.ಎ.ರತಿನವೇಲ್ ಅನ್ನು ಆ ಸ್ಥಾನದಿಂದ ತೆಗೆದುಹಾಕಲಾಗಿದ್ದು, ಹುದ್ದೆಯನ್ನು ಸರ್ಕಾರ ಇನ್ನೂ ಖಾಲಿ ಇರಿಸಿದೆ.
ಡೀನ್ ಬೆಂಬಲಕ್ಕೆ ನಿಂತ ವಿದ್ಯಾರ್ಥಿಗಳು: ಇನ್ನೊಂದು ದಿಕ್ಕಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ತಮಿಳುನಾಡು ಸರ್ಕಾರಿ ವೈದ್ಯರ ಸಂಘ (ಟಿಎನ್ಜಿಡಿಎ) ಡೀನ್ ಬೆಂಬಲಕ್ಕೆ ನಿಂತಿತು. ಪ್ರಮಾಣ ವಚನ ಪಠಿಸುವುದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದರು.
"ನಾವು 2019 ರಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಸಾಮರ್ಥ್ಯ-ಆಧಾರಿತ ಪದವಿಪೂರ್ವ ಪಠ್ಯಕ್ರಮವನ್ನು ಅನುಸರಿಸುತ್ತಿದ್ದೇವೆ. ಮಾರ್ಚ್ 31 ರ ದಿನಾಂಕದ ನಂತರ ಎನ್ಎಂಸಿ ಇತ್ತೀಚಿನ ಮಾರ್ಗಸೂಚಿಗಳನ್ನು ನಾವು ನೋಡಿದ್ದೇವೆ. ಪ್ರಮಾಣವಚನವನ್ನು ಮಾತ್ರ ಶಿಫಾರಸು ಮಾಡಲಾಗಿದ್ದರೂ, ಹಿಪೊಕ್ರೆಟಿಕ್ ಪ್ರಮಾಣವಚನವನ್ನು ಮಾತ್ರ ಮುಂದುವರಿಸಲು ರಾಜ್ಯ ಆರೋಗ್ಯ ಇಲಾಖೆ ಅಥವಾ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಯಾವುದೇ ಸ್ಪಷ್ಟ ಆದೇಶವಿಲ್ಲ. ಈ ಕಾರಣಕ್ಕಾಗಿ ನಾವು ಅದನ್ನು ಅನುಸರಿಸಬಹುದು ಎಂದು ಭಾವಿಸಿದ್ದೇವೆ. ಇದರ ಹೊರತಾಗಿ ನಮ್ಮ ಉದ್ದೇಶ ಬೇರೆ ಆಗಿರಲಿಲ್ಲ," ಎಂದು ವಿದ್ಯಾರ್ಥಿ ಕೌನ್ಸಿಲ್ ಸದಸ್ಯರೊಬ್ಬರು ಹೇಳಿದ್ದಾರೆ.
ಎಂ. ಕೆ. ಸ್ಟಾಲಿನ್ ವಿಷಾದ: ಕಳೆದ ಮೇ 4ರಂದು ತಮಿಳುನಾಡು ಸರ್ಕಾರವು ಮಧುರೈ ವೈದ್ಯಕೀಯ ಕಾಲೇಜಿನ ಡೀನ್ ಅನ್ನು ಮರುನೇಮಿಸಲು ನಿರ್ಧರಿಸಿತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರ ಉತ್ತಮ ಕೆಲಸವನ್ನು ಗಮನದಲ್ಲಿಟ್ಟುಕೊಂಡು ಮರು ನೇಮಿಸಲು ತೀರ್ಮಾನಿಸಲಾಗಿದ್ದು, ವರ್ಗಾವಣೆ ಬಗ್ಗೆ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ವಿಷಾದ ವ್ಯಕ್ತಪಡಿಸಿದ್ದಾರೆ.