ಕೊರೊನಾ ವಿರುದ್ಧ ಹೋರಾಟ: ಬೆಂಗಳೂರಿನಿಂದ ಚೆನ್ನೈ ಕಲಿಯಬೇಕಾದ 6 ಸಂಗತಿ
ಬೆಂಗಳೂರು, ಜೂನ್ 13: ತಮಿಳುನಾಡಿನಲ್ಲಿ 40 ಸಾವಿರಕ್ಕೂ ಹೆಚ್ಚು ಕೇಸ್ ವರದಿಯಾಗಿದೆ. ಮಹಾರಾಷ್ಟ್ರ ಬಿಟ್ಟರೆ ದೇಶದಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವುದು ತಮಿಳುನಾಡು. ಅದರಲ್ಲೂ ಚೆನ್ನೈ ಮಹಾನಗರದಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದೆ.
Recommended Video
ಕೊವಿಡ್ ನಿಯಂತ್ರಿಸಲು ವಿಫಲರಾದ ಕಾರಣ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಬೀಲಾ ರಾಜೇಶ್ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ರಾಧಕೃಷ್ಣನ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಪಂಕಜ್ ಕುಮಾರ್ ಬನ್ಸಾಲಿ ಅವರನ್ನು ಚೆನ್ನೈ ಮಹಾನಗರ ಆಯುಕ್ತರಾಗಿ ನೇಮಿಸುವ ಲೆಕ್ಕಚಾರದಲ್ಲಿದೆ.
ಈ ಇಬ್ಬರು ಚೆನ್ನೈ ನಗರವನ್ನು ಕೊರೊನಾದಿಂದ ರಕ್ಷಿಸುವ ಕೆಲಸ ಮಾಡಬೇಕಾದ ಒತ್ತಡದಲ್ಲಿದ್ದಾರೆ. ಅಂದ್ಹಾಗೆ, ಚೆನ್ನೈ ನಗರಕ್ಕೆ ಬೆಂಗಳೂರು ಮಾದರಿಯಾಗಬೇಕಿದೆ. ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ಕೊವಿಡ್ ಸೋಂಕು ನಿಯಂತ್ರಿಸುವಲ್ಲಿ ಮಾದರಿಯಾಗಿದೆ. ಹಾಗಾಗಿ, ಬೆಂಗಳೂರಿನಿಂದ ಚೆನ್ನೈ ಕಲಿಯಬೇಕಾದ ಆರು ಸಂಗತಿಗಳು ಇಲ್ಲಿದೆ. ಮುಂದೆ ಓದಿ....
ಕೊರೊನಾ ಪರೀಕ್ಷೆ
ಜನಸಂಖ್ಯೆಯಲ್ಲಿ, ಭೂವಿಸ್ತೀರ್ಣದಲ್ಲಿ ಚೆನ್ನೈಗಿಂತ ಬೆಂಗಳೂರು ದೊಡ್ಡದು. ಚೆನ್ನೈನಲ್ಲಿ 77 ಲಕ್ಷ ಜನಸಂಖ್ಯೆ ಇದ್ದರೆ, ಬೆಂಗಳೂರಿನಲ್ಲಿ 1.2 ಕೋಟಿ ಜನಸಂಖ್ಯೆ ಹೊಂದಿದೆ. ಚೆನ್ನೈನಲ್ಲಿ 28,924 ಕೇಸ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿ 617 ಜನರಿಗೆ ಸೋಂಕು ತಗುಲಿದೆ. ಚೆನ್ನೈನಲ್ಲಿ ಸಾವಿನ ಸಂಖ್ಯೆ 430. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 23. ಚೆನ್ನೈನಲ್ಲಿ ಈವರೆಗೂ 1,21,950 ಪರೀಕ್ಷೆ ಮಾಡಲಾಗಿದೆ. ಬೆಂಗಳೂರಿನಲ್ಲಿ 50,700 ಪರೀಕ್ಷೆ ಆಗಿದೆ. ಕೊರೊನಾ ತಡೆಯಲು ಹೆಚ್ಚು ಪರೀಕ್ಷೆಗಳು ಮಾಡುವುದು ಅಗತ್ಯ. ಅದರಲ್ಲಿ ಚೆನ್ನೈ ಮುಂಚೂಣಿಯಲ್ಲಿದೆ.
ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದು
ಕೊರೊನಾ ಸೋಂಕಿತನ ಸಂಪರ್ಕ ಪತ್ತೆ ಹೆಚ್ಚುವುದು ಬಹುಮುಖ್ಯ ಕೆಲಸ. ಆದರೆ, ಚೆನ್ನೈನಲ್ಲಿ ಈ ಕೆಲಸ ನಿರೀಕ್ಷೆ ಮಟ್ಟದಲ್ಲಿ ಆಗಲಿಲ್ಲ ಎಂಬ ಮಾತಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಸುಮಾರು ಐದಾರು ಜನ ಇರ್ತಾರೆ. ಆ ಐದಾರು ಜನರಿಂದ ಸುಮಾರು 15-20 ಜನರು ದ್ವಿತೀಯ ಸಂಪರ್ಕ ಹೊಂದುತ್ತಾರೆ. ಪ್ರಾಥಮಿಕ ಹಂತದಲ್ಲೇ ಅವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿದರೆ, ಸೋಂಕು ಹರಡುವುದನ್ನು ತಡೆಯಬಹುದು. ಒಂದು ವೇಳೆ ದ್ವಿತೀಯ ಹಂತಕ್ಕೆ ಹೋದರೆ ಮತ್ತೆ ಅಲ್ಲಿಂದ ಮತ್ತಷ್ಟು ಸೋಂಕು ಹೆಚ್ಚಾಗುತ್ತೆ. ಈ ವಿಚಾರದಲ್ಲಿ ಬೆಂಗಳೂರು ವೇಗವಾಗಿ ಮತ್ತು ಪ್ಲಾನ್ ಮಾಡಿ ತಡೆಯುವಲ್ಲಿ ಯಶಸ್ವಿಯಾಗಿದೆ.
ಕಂಟೈನ್ಮೆಂಟ್ ಜೋನ್
ಚೆನ್ನೈನಲ್ಲಿ ಸುಮಾರು 200 ಕಂಟೈನ್ ಜೋನ್ ಗುರುತಿಸಲಾಗಿದೆ. ಬೆಂಗಳೂರಿನಲ್ಲಿ 40 ಕಂಟೈನ್ ಮೆಂಟ್ ಜೋನ್ ಮಾತ್ರ ಇದೆ. ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಲ್ಲಿ ಚೆನ್ನೈ ಪುರಸಭೆ ವಿಫಲವಾಗಿದೆ. ಕಂಟೈನ್ ಮೆಂಟ್ ಪ್ರದೇಶದ ಪ್ರವೇಶದಲ್ಲಿ 5 ಜನ ಪೊಲೀಸರನ್ನು ನೇಮಿಸಿರುವುದು ಬಿಟ್ಟರೆ ಕಠಿಣವಾದ ನಿಯಮಗಳೇನು ಇಲ್ಲ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಲ್ಲೂ ಶಿಸ್ತು ಕಾಪಾಡಿಲ್ಲ. ಆದರೆ, ಬಿಬಿಎಂಪಿ ಈ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿ ನಿರ್ವಹಿಸಿದೆ.
ಐಸೋಲೇಶನ್ ವ್ಯವಸ್ಥೆ
ಕೊರೊನಾ ಸೋಂಕಿತರನ್ನು ಐಸೋಲೇಟ್ ಮಾಡುವುದು ಪ್ರಮುಖ ಸವಾಲು. ಚೆನ್ನೈನಲ್ಲಿ ಪ್ರಾಥಮಿಕ ಸೋಂಕಿತರನ್ನು ಐಸೋಲೇಟ್ ಮಾಡುವುದು ಬಿಟ್ಟರೆ, ದ್ವಿತೀಯ ಸಂಪರ್ಕಿತರನ್ನು ಹೋಮ್ ಐಸೋಲೇಟ್ ಮಾಡಿದರು. ಇದು ಸೋಂಕು ಹರಡಲು ಕಾರಣವಾಗಿತ್ತು. ಆದರೆ, ಬೆಂಗಳೂರಿನಲ್ಲಿ ದ್ವಿತೀಯ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಐಸೋಲೇಟ್ ಮಾಡುವ ಮೂಲಕ ನಿಯಂತ್ರಿಸಿದರು. ಚೆನ್ನೈನಲ್ಲಿ ಸ್ಲಂ ಪ್ರದೇಶಗಳು ಹೆಚ್ಚಿರುವುದರಿಂದ ಹೋಮ್ ಐಸೋಲೇಟ್ನಲ್ಲೂ ಕಠಿಣ ಕ್ರಮ ತೆಗೆದುಕೊಂಡಿಲ್ಲ.
ಪಾರದರ್ಶಕತೆ ಇರಬೇಕು
ಕೊರೊನಾ ವೈರಸ್ ಕೇಸ್ಗಳು ವರದಿ ಮತ್ತು ಸಾವಿನ ಸಂಖ್ಯೆಯಲ್ಲಿ ಹಾಗೂ ಪರೀಕ್ಷೆಗಳ ವರದಿಯಲ್ಲಿ ಪಾರದರ್ಶಕತೆ ಕಾಪಾಡುವಲ್ಲಿ ಚೆನ್ನೈ ನಗರ ವಿಫಲವಾಗಿದೆ. ಇಲಾಖೆಗಳು ಹಾಗೂ ಆಸ್ಪತ್ರೆಗಳು ಸರಿಯಾದ ಮಾಹಿತಿ ನೀಡಿಲ್ಲ. ಇದು ಕೊರೊನಾ ತಡೆಯಲು ಆರಂಭಿಕ ಹಂತದಲ್ಲಿ ಕಷ್ಟವಾಯಿತು. ಇದರಿಂದ ಸೋಂಕು ಹರಡುವಿಕೆ ಹೆಚ್ಚಾಯಿತು. ಆದರೆ, ಬೆಂಗಳೂರಿನಲ್ಲಿ ಆಸ್ಪತ್ರೆಗಳು, ಇಲಾಖೆ ಮೇಲೆ ಆಡಳಿತ ಮಂಡಳಿ ಹಿಡಿತ ಹೊಂದಿತ್ತು. ಈ ಎಲ್ಲಾ ಕಾರಣಗಳಿಂದ ಚೆನ್ನೈ ನಗರ, ಬೆಂಗಳೂರನ್ನು ಮಾದರಿಯಾಗಿರಿಸಿಕೊಳ್ಳಬೇಕು.
ಆಡಳಿತ ನಿರ್ವಹಣೆ
ಕೊರೊನಾ ವೈರಸ್ ತಡೆಯಲು ಅಥವಾ ನಿಯಂತ್ರಿಸಲು ಕೇವಲ ಆರೋಗ್ಯ ಇಲಾಖೆ ಮಾತ್ರ ಶಿಸ್ತಾಗಿ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯವಿಲ್ಲ. ಆರೋಗ್ಯ ಇಲಾಖೆಯ ಪ್ರತಿ ಇಲಾಖೆ, ಗೃಹ ಇಲಾಖೆಯ ಸಿಬ್ಬಂದಿ, ಅಧಿಕಾರಿ, ಆಸ್ಪತ್ರೆಗಳು, ವೈದ್ಯರು ಎಲ್ಲರು ಒಬ್ಬರಿಗೊಬ್ಬರು ಉತ್ತಮ ಆಡಳಿತ ನಿರ್ವಹಣೆ ಮಾಡಬೇಕು. ಈ ವಿಚಾರದಲ್ಲಿ ಚೆನ್ನೈಗೆ ಎಲ್ಲ ಇಲಾಖೆಗಳಿಂದ ಉತ್ತಮ ಬೆಂಬಲ ಸಿಕ್ಕಿಲ್ಲ. ಆದರೆ, ಬೆಂಗಳೂರಿನಲ್ಲಿ ಬಿಬಿಎಂಪಿ, ರಾಜ್ಯಸರ್ಕಾರ, ಆರೋಗ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ ಎಲ್ಲರೂ ಸಮಯೋಚಿತವಾಗಿ ಕಾರ್ಯನಿರ್ವಹಿಸಿದ್ದಾರೆ.