ಪಳನಿ ಸರ್ಕಾರ ಉರುಳಿಸದೆ ಬಿಡೆವು: ಪನ್ನೀರ್ ಸೆಲ್ವಂ ಗುಡುಗು
ಜಯಲಲಿತಾ ಸ್ಮಾರಕಕ್ಕೆ ತೆರಳಿ ಸರ್ಕಾರ ಕಿತ್ತೊಗೆಯುವ ಮಾತನಾಡಿರುವುದು ಅವರ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿಸಿದೆ.
ಚೆನ್ನೈ, ಫೆಬ್ರವರಿ 16: ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ಶಿರಬಾಗಿ ರಚನೆಗೊಂಡಿರುವ ಪಳನಿ ಸ್ವಾಮಿ ಅವರ ನೂತನ ಸರ್ಕಾರವನ್ನು ಶೀಘ್ರವೇ ಉರುಳಿಸುವುದಾಗಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆಯ ಉಚ್ಛಾಟಿತ ನಾಯಕ ಪನ್ನೀರ್ ಸೆಲ್ವಂ ಗುಡುಗಿದ್ದಾರೆ.
ಅಕ್ರಮ ಆಸ್ತಿ ಹಿನ್ನೆಲೆಯಲ್ಲಿ ಶಶಿಕಲಾ ಜೈಲು ಸೇರಿ ತಮ್ಮ ಹಾದಿ ಸುಗಮವಾಯಿತೆನ್ನುವಷ್ಟರಲ್ಲಿ ಶಶಿಕಲಾ ಅವರಿಂದ ಪಕ್ಷದಿಂದ ಉಚ್ಛಾಟನೆಗೊಂಡಿರುವ ಪನ್ನೀರ್ ಸೆಲ್ವಂ ಗಾಯಗೊಂಡ ಹುಲಿಯಾದಂತಾಗಿದ್ದಾರೆ.
ತಮ್ಮ ಮುಖ್ಯಮಂತ್ರಿ ಪದವಿಯನ್ನು ತನ್ನ ಚಾಣಾಕ್ಷ ನಡೆಯಿಂದ ತಪ್ಪಿಸಿದ ಶಶಿಕಲಾ ವಿರುದ್ಧ ಸಡ್ಡು ಹೊಡಿದಿರುವ ಅವರು, ಶಶಿಕಲಾ ಅವರ ವಿಧೇಯ ಪಳನಿಸ್ವಾಮಿಯವರ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಸಂಕಲ್ಪ ತೊಟ್ಟಿದ್ದಾರೆ.[ಪಳನಿಸ್ವಾಮಿ ಬಹುಮತ ಸಾಬೀತುಪಡಿಸಲು ಮುಹೂರ್ತ ನಿಗದಿ!]
ಇತ್ತ, ರಾಜಭವನದಲ್ಲಿ ಪಳನಿಸ್ವಾಮಿ ಸರ್ಕಾರವು ಗುರುವಾರ ಸಂಜೆ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಅತ್ತ, ತನ್ನ ಬೆಂಬಲಿತ ಎಐಎಡಿಎಂಕೆ ಶಾಸಕರು ಹಾಗೂ ಸಂಸದರೊಂದಿಗೆ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸ್ಮಾರಕ್ಕೆ ಸಾಗಿದ ಪನ್ನೀರ್ ಸೆಲ್ವಂ, ಪುಷ್ಪ ನಮನ ಸಲ್ಲಿಸಿದರು.[ತಮಿಳುನಾಡಿನ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ವ್ಯಕ್ತಿಚಿತ್ರ]
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಶಿಕಲಾ ವಿರುದ್ಧ ಹರಿಹಾಯ್ದರು. ಭ್ರಷ್ಟಾಚಾರದ ಆರೋಪಗಳ ಸರಮಾಲೆಯನ್ನೇ ಹೊತ್ತಿರುವ ಶಶಿಕಲಾ ಹಾಗೂ ಅವರ ಕುಟುಂಬ ತಮಿಳುನಾಡಿನಲ್ಲಿ ನಕಲಿ ಸರ್ಕಾರವೊಂದನ್ನು ಅಧಿಕಾರಕ್ಕೆ ತಂದಿದ್ದಾರೆಂದು ಕಿಡಿಕಾರಿದರು.
''ಹೊಸ ಸರ್ಕಾರ, ಶಶಿಕಲಾ ಅವರಿಗೆ ವಿಧೇಯವಾಗಿರುವ ಸರ್ಕಾರವಾಗಿದ್ದು, ಇದನ್ನು ಆದಷ್ಟು ಬೇಗನೇ ಕಿತ್ತೊಗೆಯುತ್ತೇವೆ'' ಎಂದು ಅವರು ಗುಡುಗಿದರು.[ತಮಿಳುನಾಡು ಮುಖ್ಯಮಂತ್ರಿಯಾಗಿ ಕೆ ಪಳನಿಸ್ವಾಮಿ]