ಟ್ರೈನ್ ಮೂಲಕ ಚೆನ್ನೈ ನಗರಕ್ಕೆ ನೀರು ಪೂರೈಕೆ : ಪಳನಿಸ್ವಾಮಿ
ವೆಲ್ಲೂರು, ಜೂನ್ 21: ಕುಡಿಯುವ ನೀರಿನ ದಾಹ ಇಂಗಿಸಲು ಅಕ್ಕ ಪಕ್ಕ ರಾಜ್ಯದ ನೆರವು ಪಡೆಯದಿರಲು ನಿರ್ಧರಿಸಿರುವ ತಮಿಳುನಾಡಿನ ಎಐಎಡಿಎಂಕೆ ಸರ್ಕಾರ ಈಗ ಟ್ರೈನ್ ಮೂಲಕ ಚೆನ್ನೈ ನಗರಕ್ಕೆ ಕುಡಿಯುವ ನೀರು ಪೂರೈಸಲು ಮಂದಾಗಿದೆ.
ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ತಮಿಳುನಾಡಿನ ಕುಡಿಯುವ ನೀರಿನ ದಾಹ ತೀರಿಸಲು ಸುಮಾರು 20 ಲಕ್ಷ ಲೀಟರ್ ಕುಡಿಯುವ ನೀರು ಒದಗಿಸಲು ಸಿದ್ಧ ಎಂದು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಆಫರ್ ನೀಡಿತ್ತು. ಆದರೆ, ತಮಿಳುನಾಡಿನ ಪಳನಿಸ್ವಾಮಿ ಸರ್ಕಾರವು ಆಫರ್ ತಿರಸ್ಕರಿಸಿದೆ.
ಚೆನ್ನೈನಲ್ಲಿ 'ನೀರಿಗಾಗಿ ಯುದ್ಧ' ಬಿಸಿಲಿನ ಬೇಗೆ, ಆತಂಕದಲ್ಲಿ ಜನತೆ
ತಿರುವನಂತಪುರಂನಿಂದ ಚೆನ್ನೈಗೆ ರೈಲಿನ ಮೂಲಕ 20 ಲಕ್ಷ ಲೀಟರ್ ನೀರು ಪೂರೈಸಲು ಕೇರಳ ಸರ್ಕಾರ ಮುಂದಾಗಿತ್ತು. ಚೆನ್ನೈಗೆ ಪ್ರತಿನಿತ್ಯ 830 ದಶಲಕ್ಷ ಲೀಟರ್ ನ ಅಗತ್ಯ ಹೊಂದಿದೆ. ತಮಿಳುನಡಿಗೆ ನಿತ್ಯ 2 ದಶಲಕ್ಷ ಲೀಟರ್ ಅಗತ್ಯವಿದೆ ಎಂದು ತಮಿಳುನಾಡಿನ ನಗರಾಭಿವೃದ್ಧಿ ಖಾತೆ ಸಚಿವ ಎಸ್ ಪಿ ವೇಲುಮಣಿ ಹೇಳಿದ್ದರು.
ಈಗ ಚೆನ್ನೈ ನಗರಕ್ಕೆ ವೆಲ್ಲೂರು ಜಿಲ್ಲೆಯ ಜೋಳಾರ್ ಪೇಟ್ ನಿಂದ 10 ಲಕ್ಷ ಲೀಟರ್ ನೀರನ್ನು ಮುಂದಿನ 6 ತಿಂಗಳ ಅವಧಿಗೆ ಪೂರೈಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ನೀರಿನ ಪೂರೈಕೆಗೆ 65 ಕೋಟಿ ರು ನೀಡಲಾಗಿದ್ದು, ಚೆನ್ನೈ ಮೆಟ್ರೋಪಾಲಿಟನ್ ಜಲ ಪೂರೈಕೆ ಮಂಡಳಿಗೆ ವಿತರಣೆ ಜಾರಿಗೊಳಿಸಲು 158.42 ಕೋಟಿ ರು ಅನುದಾನವನ್ನು ಒದಗಿಸಲಾಗಿದೆ. ರಾಜ್ಯದ ಉಳಿದ ಭಾಗಗಳಿಗೆ ನೀರು ಒದಗಿಸಲು 108.32 ಕೋಟಿ ರು ನೀಡಲಾಗಿದೆ.
ತಮಿಳುನಾಡಿನಲ್ಲಿ ಮುಂಗಾರು ಪೂರ್ವ ಮಳೆ ಕೂಡಾ ಕೈಕೊಟ್ಟಿದ್ದರಿಂದ ರಾಜ್ಯದ ಪ್ರಮುಖ ನೀರಿನ ಮೂಲಗಳಾದ ಪೂಂಡಿ, ರೆಡ್ ಹಿಲ್, ಶೋಲಾವರಂ ಮತ್ತು ಚೆಂಬರಂಬಕ್ಕಂನ ಕೆರೆಗಳು ಬತ್ತಿ ಹೋಗಿವೆ. ಕೆಲ ಕೆರೆಗಳಲ್ಲಿ ಮಾತ್ರ ಅಲ್ಪಪ್ರಮಾಣದ ನೀರಿದ್ದು, ನೀರಿನ ಪೂರೈಕೆ ಮಾಡಬೇಕಾಗಿದೆ.
ಲಕ್ಷಾಂತರ ಲೀಟರ್ ನೀರು ಆಫರ್ ತಿರಸ್ಕರಿಸಿದ ತಮಿಳುನಾಡು
ಪ್ರಸಕ್ತ ವರ್ಷದ ಕುಡಿಯುವ ನೀರಿನ ಪೂರೈಕೆಗಾಗಿ ಆಡಳಿತರೂಢ ಎಐಎಡಿಎಂಕೆ ಸರ್ಕಾರವು 500 ಕೋಟಿ ರು ವೆಚ್ಚದ ಯೋಜನೆ ರೂಪಿಸಿದೆ. 29 ಜಿಲ್ಲೆಗಳ ಅಂತರ್ಜಲ ಮಟ್ಟ ಕಾಯ್ದುಕೊಳ್ಳುವುದು, ಕೆರೆಗಳ ಪುನಶ್ಚೇತನ, ಪರ್ಯಾಯ ಮಾರ್ಗಗಳಿಗೆ ಬೆಂಬಲ ಮುಂತಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ, ಸಮಸ್ಯೆ ಉಲ್ಬಣವಾಗಿದೆ. ಸದ್ಯಕ್ಕೆ ಚೆನ್ನೈ ನಗರ ಪೂರೈಕೆಗೆ 525 ಎಂಎಲ್ ಡಿ ನೀರು ಪ್ರತಿದಿನ ಪೂರೈಕೆಯಾಗುತ್ತಿದೆ. 800 ಟ್ಯಾಂಕರ್ ಗಳು ದಿನಕ್ಕೆ 9,800 ಟ್ರಿಪ್ ಸುತ್ತುತ್ತಿವೆ.
ಕಡಲೂರು ಜಿಲ್ಲೆಯ ವೀರಣಂ ಕೆರೆಯಿಂದಲೂ ಚೆನ್ನೈಗೆ ನೀರು ತರಲಾಗುತ್ತಿದೆ. ತಮಿಳುನಾಡಿನಲ್ಲಿ ಸುಮಾರು 39,202 ಕೆರೆಗಳನ್ನು ಗುರುತಿಸಲಾಗಿದೆ. ಪಳನಿಸ್ವಾಮಿ ಸರ್ಕಾರವು ಕುಡಿಯುವ ನೀರು ಪೂರೈಕೆಗಾಗಿ ಹೆಚ್ಚುವರಿಯಾಗಿ 200 ಕೋಟಿ ರು ಒದಗಿಸುತ್ತಿದೆ.