ಚೆನ್ನೈನಲ್ಲಿ ಹನಿ ನೀರಿಗೂ ಪರದಾಟ: ಐಟಿ ಕ್ಷೇತ್ರ ಕಂಗಾಲು
ಚೆನ್ನೈ, ಜೂನ್ 17: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಅಭಾವ ಮತ್ತಷ್ಟು ತೀವ್ರವಾಗಿದೆ. ಸತತ ಮೂರನೇ ವರ್ಷ ನಗರ ನೀರಿನ ಕೊರತೆ ಎದುರಿಸುತ್ತಿದ್ದು, ನಾಗರಿಕರ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಲು ಸ್ಥಳೀಯ ಆಡಳಿತ ವಿಫಲವಾಗಿದೆ. ಇದರಿಂದ ಅಧಿಕಾರಿಗಳು ನೀರು ಪೂರೈಕೆಗೆ ನಗರದ ಹೊರಭಾಗದಲ್ಲಿರುವ ಸಣ್ಣ ಪುಟ್ಟ ಕೆರೆಗಳು, ಕಲ್ಲಿನ ಕ್ವಾರಿಗಳು ಮತ್ತು ಸಮುದ್ರದ ನೀರನ್ನು ನಗರಕ್ಕೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ.
ನಗರದ ಕೆಲವು ಭಾಗಗಳಲ್ಲಿ ಖಾಸಗಿ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆಯ ಕೊರತೆಯಿಂದ ರಾಜ್ಯದ ಜಲಾಶಯಗಳು ಬರಿದಾಗಿವೆ. ಚೆನ್ನೈನಲ್ಲಿ 2008 ಕ್ಕೆ ಹೋಲಿಸಿದರೆ 750 ಎಂಎಲ್ಡಿಯಿಂದ 2018ರ ವೇಳೆಗೆ 1,100 ಎಂಎಲ್ಡಿಯಷ್ಟು, ಅಂದರೆ ಶೇ 47ರಷ್ಟು ನೀರಿಗೆ ಬೇಡಿಕೆ ಹೆಚ್ಚಾಗಿದೆ.
ಡೆಡ್ ಸ್ಟೋರೇಜ್ ಉಳಿಸಿ ಡ್ಯಾಂ ರಕ್ಷಿಸಿ: ಜು.2 ರಂದು ಪ್ರತಿಭಟನೆ
ಇದೇ ಅವಧಿಯಲ್ಲಿ ಮೆಟ್ರೋ ನೀರು ಸರಬರಾಜು 650 ಎಂಎಲ್ಡಿಯಿಂದ 600 ಎಂಎಲ್ಡಿಗೆ, ಅಂದರೆ ಶೇ ಎಂಟರಷ್ಟು ಕುಸಿತಕಂಡಿದೆ. 11,257 ಎಂಸಿಎಫ್ಟಿ ಸಾಮರ್ಥ್ಯವುಳ್ಳ ನಾಲ್ಕು ಜಲಾಶಯಗಳು 35 ಎಂಸಿಎಫ್ಟಿಗೂ ಕಡಿಮೆ ಪ್ರಮಾಣದ ನೀರು ಸಂಗ್ರಹಣೆ ಹೊಂದಿವೆ.
ಸರ್ಕಾರ ಹಾಗೂ ಖಾಸಗಿಯವರಿಂದ ತರಿಸಿಕೊಳ್ಳುತ್ತಿರುವ ನೀರಿಗಾಗಿ ಜನರು ಮುಗಿಬೀಳುತ್ತಿದ್ದಾರೆ. ಕೆಲವೊಂದು ಕಡೆ ನೀರಿಗಾಗಿ ಜಗಳ ನಡೆದು ಹೊಡೆದಾಟಕ್ಕೆ ತಿರುಗಿದ ಘಟನೆಗಳೂ ನಡೆದಿವೆ.
ಮನೆಯಿಂದಲೇ ಕೆಲಸ ಮಾಡಿ
ಅಧಿಕ ಹಣ ಕೊಟ್ಟರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ ಪುಟ್ಟ ಹೋಟೆಲ್ಗಳು ಬಂದ್ ಆಗಿವೆ. ದೊಡ್ಡ ಹೋಟೆಲ್ಗಳಲ್ಲಿಯೂ ನೀರಿನ ಅಭಾವ ಎದುರಾಗಿದೆ.
ಇನ್ನು ಚೆನ್ನೈ ನಗರದಲ್ಲಿರುವ ಸಾಪ್ಟ್ವೇರ್ ಕಂಪೆನಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಹೆಚ್ಚಿನ ಕಂಪೆನಿಗಳು ನೀರಿನ ಕೊರತೆ ಇರುವುದರಿಂದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸುತ್ತಿವೆ. ಇನ್ನು ಕೆಲವು ಕಂಪೆನಿಗಳು ಊಟಕ್ಕೆ ಪೇಪರ್ ಪ್ಲೇಟ್ ತರುವಂತೆ ಹಾಗೂ ಕುಡಿಯಲು ಮನೆಯಿಂದಲೇ ನೀರು ತರುವಂತೆ ಸೂಚನೆ ನೀಡಿವೆ.
ಗ್ರಾಮಗಳ ಮುಖ್ಯಸ್ಥರಿಗೆ ವಿಶೇಷ ಪತ್ರ ಬರೆದ ಪ್ರಧಾನಿ ಮೋದಿ
ಐಟಿ ಕಂಪೆನಿಗಳಲ್ಲಿ ಅಭಾವ
ಕೆಲವು ದೊಡ್ಡ ಐಟಿ ಕಂಪೆನಿಗಳು ಸಂಗ್ರಹಿಸಿಟ್ಟ ನೀರು ಬಳಸುವ ವ್ಯವಸ್ಥೆ ಹೊಂದಿದ್ದು, ನೀರಿನ ಹಿತಮಿತ ಬಳಕೆ ಮಾಡುತ್ತಿವೆ. 12 ಐಟಿ ಕಂಪೆನಿಗಳ ಸುಮಾರು 5 ಸಾವಿರ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಕಾಗ್ನಿಜೆಂಟ್ ಟೆಕ್ನಾಲಜಿಯಂತಹ ಕಂಪೆನಿಗಳು ಸಂಸ್ಥೆಯ ಆವರಣದಲ್ಲಿಯೇ ಚಿಕ್ಕ ಕೊಳಗಳನ್ನು ಮಾಡಿಕೊಂಡು ನೀರು ಸಂಗ್ರಹಿಸಿದ್ದರಿಂದ ಅಂತರ್ಜಲದ ಲಭ್ಯತೆ ಇದೆ. ಆದರೆ, ಹಳೆ ಮಹಾಬಲಿಪುರಂ ಭಾಗದಲ್ಲಿ ಸುಮಾರು 4 ಲಕ್ಷ ಉದ್ಯೋಗಿಗಳಿರುವ ಅನೇಕ ಕಂಪೆನಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ.
ಅಂತರ್ಜಲ ಮಟ್ಟ ತೀವ್ರ ಕುಸಿತ
ಚೆನ್ನೈನ ಕೊಯಂಬೇಡು, ವಿರುಗಂಬಾಕ್ಕಂ, ಮಾಂಬಳಂ, ವಲಸರವಕ್ಕಂ, ಕೊಟ್ಟಿವಕ್ಕಂ ಮುಂತಾದೆಡೆ ಕುಡಿಯುವ ಹನಿ ನೀರಿಗೂ ಪರದಾಡುವಂತಾಗಿದೆ. ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ 6.22 ಮೀಟರ್ಗಳಿಂದ 7.6 ಮೀಟರ್ಗಳಿಗೆ ಕುಸಿದಿದೆ. ಇಷ್ಟು ಕೆಳಗಿನ ಪ್ರಮಾಣದಿಂದ ನೀರನ್ನು ಮೇಲೆ ತರಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಮುಂಗಾರು ಇನ್ನೂ ಆರಂಭವಾಗದೆ ಇರುವುದು ಮತ್ತು ಅಂತರ್ಜಲದ ಮಟ್ಟದ ಕುಸಿತ ನೀರಿನ ಕೊರತೆಗೆ ಕಾರಣವಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಬಿಟ್ಟು ಉಳಿದ ರಾಜ್ಯಗಳಲ್ಲಿದೆ ನೀರು!
ವಲಸೆ ಹೋಗುತ್ತಿರುವ ನಿವಾಸಿಗಳು
ನೀರಿನ ಕೊರತೆ ಉಂಟಾಗಿರುವುದರಿಂದ ಚೆನ್ನೈ ನಗರದಲ್ಲಿನ ನಿವಾಸಿಗಳು ಮನೆಗಳನ್ನು ಖಾಲಿ ಮಾಡಿಕೊಂಡು ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ರಾಜ್ಯದ ಅನೇಕ ಕಡೆ ನೀರಿನ ಅಭಾವ ಎದುರಿಸುತ್ತಿರುವುದರಿಂದ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ.