ಹಿಂದಿ ಹೇರಿಕೆ ವಿರುದ್ಧ ಹೋರಾಟಕ್ಕೆ ಹೊಸ ಟೀ-ಶರ್ಟ್!
ಚೆನ್ನೈ, ಸಪ್ಟೆಂಬರ್.08: ದೇಶಾದ್ಯಂತ ಹಿಂದಿ ಹೇರಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ತಮಿಳುನಾಡಿನಲ್ಲಿ ಹೊಸ ಅಭಿಯಾನ ಶುರುವಾಗಿದೆ. ಹಿಂದಿ ಹೇರಿಕೆ ವಿರುದ್ಧ ಘೋಷಣೆಗಳಿರುವ ಟೀ-ಶರ್ಟ್ ಗಳು ಸಖತ್ ಸದ್ದು ಮಾಡುತ್ತಿವೆ.
ತಮಿಳಿನ ಯುವ ಸಂಗೀತಕಾರ ಯುವನ್ ಶಂಕರ್ ರಾಜನ್ ಮತ್ತು ನಟ ಶಿರಿಶ್ ಸರವಣನ್ ಅವರು "ನಾನು ತಮಿಳು ಮಾತನಾಡುವ ಭಾರತೀಯ, ನನಗೆ ಹಿಂದಿ ಗೊತ್ತಿಲ್ಲ ಹೋಗಪ್ಪ" ಎಂದು ಬರೆದ ಟೀ-ಶರ್ಟ್ ಧರಿಸಿರುವ ಫೋಟೋವನ್ನು ತಮ್ಮ ಖಾತೆಯಲ್ಲಿ ಮೊದಲಿಗೆ ಶೇರ್ ಮಾಡಿದ್ದರು.
ಹಿಂದಿ ಹೇರಿಕೆ: ಸಿಡಿದೆದ್ದ ದಕ್ಷಿಣ ಭಾರತದ ನಾಯಕರು
ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಮತ್ತು ತಮಿಳು ಭಾಷೆಯ ಪರವಾದ ಟೀ-ಶರ್ಟ್ ಗಳನ್ನು ಧರಿಸಿದ ರಾಜಕಾರಣಿಗಳು, ಯುವಕರು, ಕಾಲೇಜು ವಿದ್ಯಾರ್ಥಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹಿಂದಿ ಹೇರಿಕೆ ವಿರುದ್ಧ ಹಲವರ ಪೋಸ್ಟ್:
ಭಾರತದಲ್ಲಿ ಹಿಂದಿ ಹೇರಿಕೆ ವಿರುದ್ಧ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಗೀತಗಾರ ಯುವನ್ ಶಂಕರ್ ರಾಜನ್ ಟ್ವೀಟ್ ಮಾಡಿದ್ದ ಫೋಟೋವನ್ನು ಡಿಎಂಕೆ ಸಂಸದೆ ಕನಿಮೋಳಿ ರೀ-ಟ್ವೀಟ್ ಮಾಡುವ ಮೂಲಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮನೋಭಾವವನ್ನು ಹುಟ್ಟು ಹಾಕುವುದಕ್ಕೆ ಒಂದೇ ಒಂದು ಕಿಡಿ ಸಾಕು. ಹಿಂದಿ ಹೇರಿಕೆಯ ಯುಗದಲ್ಲಿ ನಾವು ಟಿಶರ್ಟ್ ಗಳನ್ನು ಮುದ್ರಿಸಿದಾಗ ತಾರತಮ್ಯ ನೀತಿ ವಿರುದ್ಧ ಹೋರಾಡಲು ಯುವಕರು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಕನಿಮೋಳಿ ಬರೆದುಕೊಂಡಿದ್ದಾರೆ.