ಉಕ್ಕಿ ಹರಿದ ನದಿಯಲ್ಲಿ ಮೃತದೇಹ ಹೊತ್ತೊಯ್ದ ಗ್ರಾಮಸ್ಥರು
ಚೆನ್ನೈ ಡಿಸೆಂಬರ್ 2: ತಮಿಳುನಾಡಿನಲ್ಲಿ ಮಳೆಯ ಅರ್ಭಟ ಜೋರಾಗಿದೆ. ಇದರಿಂದಾಗಿ ರಾಜ್ಯದ ಮೂಲಕ ಹರಿಯುವ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕಳೆದ ತಿಂಗಳಿನಿಂದ ತಮಿಳುನಾಡಿನಲ್ಲಿ ಮಳೆ ಬಿಟ್ಟು ಬಿಡದಂತೆ ಸುರಿಯುತ್ತಿದೆ. ಕೆಲ ದಿನಗಳಿಂದ ಕೊಂಚ ವಿರಾಮ ಪಡೆದುಕೊಂಡಿದ್ದ ಮಳೆ ಸದ್ಯ ಮತ್ತೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಮನೆಗಳಿಗೆ, ಹೊಲ, ಗದ್ದೆಗಳಿಗೆ ನೀರು ಹರಿದು ಅಪಾರ ಆಸ್ತಿ ಹಾನಿಗೊಳಗಾಗಿದೆ. ಜೊತೆಗೆ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ನದಿ ಹರಿಯುವ ಸುತ್ತ-ಮುತ್ತಲಿನ ಅಪಾಯದ ಪ್ರದೇಶದಲ್ಲಿ ವಾಸಿಸುವ ಜನರನ್ನು ರಕ್ಷಿಸಲಾಗುತ್ತಿದೆ. ಈ ಮಧ್ಯೆ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ಮನಕರುಗುವ ಘಟನೆಯೊಂದು ನಡೆದಿದೆ.
ವಿರುದುನಗರ ಜಿಲ್ಲೆಯಲ್ಲಿ ನದಿಗೆ ಅಡ್ಡಲಾಗಿ ಸೇತುವೆಯಿಲ್ಲದ ಕಾರಣ ಗ್ರಾಮಸ್ಥರು ನದಿಯಲ್ಲೇ ಸಾಗಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಪ್ರದೇಶದಲ್ಲಿ ಉಕ್ಕಿ ಹರಿಯುತ್ತಿರುವ ಕಿರುತುಮಾಲ್ ನದಿಯ ಮೂಲಕ ಮೃತದೇಹವನ್ನು ಸಾಗಿಸುವ ದೃಶ್ಯ ನೋಡುಗರ ಕಣ್ತುಂಬಿ ಬಂದಿದೆ. ಜೊತೆಗೆ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರುದುನಗರ ಜಿಲ್ಲೆಯಲ್ಲಿ ವೈಗೈ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿರುವ ಕಾರಣ ಕಿರುತುಮಲ್ ನದಿ ಸೇರಿದಂತೆ ಹಲವು ನದಿಗಳು ಪ್ರವಾಹವನ್ನುಂಟು ಮಾಡಿವೆ.
ಕಿರುತುಮಾಲ್ ನದಿಯನ್ನು ದಾಟಲು ಸೇತುವೆಯಿಲ್ಲದ ಕಾರಣ, ಸಮೀಪದ ಹಳ್ಳಿಯ ಜನರು ಪ್ರವಾಹದ ನದಿಗೆ ವ್ಯಕ್ತಿಯ ಮೃತದೇಹವನ್ನು ದಡದಲ್ಲಿ ಹಗ್ಗಗಳನ್ನು ಕಟ್ಟಿಕೊಂಡು ಸಾಗಿಸಬೇಕಾಯಿತು. ಗ್ರಾಮಸ್ಥರು ಹಗ್ಗದ ಸಹಾಯದಿಂದ ಸಮತೋಲನ ಕಾಯ್ದುಕೊಂಡು ನದಿ ದಾಟಿದರು. ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದೆ. ಆದರೆ ಇದರ ಬಗ್ಗೆ ಸ್ಥಳೀಯ ಜನನಾಯಕರು ತಲೆ ಕೆಡಿಸಿಕೊಳ್ಳುತ್ತಿಲ್ಲ.
ರಾಮನಾಥಪುರಂ ಜಿಲ್ಲೆಯಲ್ಲಿಯೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಏಕೆಂದರೆ ಇಲ್ಲಿಯೂ ಸೆಯ್ಯಮಂಗಲಂನಲ್ಲಿ ಜನರು ಪ್ರವಾಹದಿಂದಾಗಿ ಹಗ್ಗಗಳ ಸಹಾಯದಿಂದ ಕಾಸ್ವೇ ಸೇತುವೆಯನ್ನು ದಾಟಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ವೈಗೈ ಅಣೆಕಟ್ಟಿನಿಂದ 5,000 ಕ್ಯೂಸೆಕ್ಗೂ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಾಮನಾಥಪುರಂ ಜಿಲ್ಲೆಯ ಹಲವಾರು ಕಾಸ್ವೇ ಸೇತುವೆಗಳು ಜಲಾವೃತವಾಗಿವೆ. ಹೀಗಾಗಿ ಕಮುತಿ ಪಟ್ಟಣದ ಕಾಸ್ವೇ ಸೇತುವೆ ಮುಳುಗಡೆಯಾಗಿ ಐದು ಗ್ರಾಮಗಳ ಜನರು ಎರಡು ದಂಡೆಗಳ ನಡುವೆ ಹಗ್ಗವನ್ನು ಕಟ್ಟಿಕೊಂಡು ಕಾಸ್ವೇ ಸೇತುವೆಯನ್ನು ದಾಟುತ್ತಿರುವುದನ್ನು ಸೆಯ್ಯಮಂಗಲದಿಂದ ಬಂದ ವೀಡಿಯೊ ತೋರಿಸುತ್ತದೆ. ಮತ್ತೊಂದು ವಿಚಾರವೆಂದರೆ ಈ ಅಪಾಯಕಾರಿ ಸೇತುವೆ ದಾಟುತ್ತಿದ್ದವರಲ್ಲಿ ನೂರಾರು ಶಾಲಾ ಮಕ್ಕಳು ಕೂಡ ಇರುವುದು ಆತಂಕ ಹೆಚ್ಚಿಸಿದೆ.
ಐದು ವರ್ಷಗಳ ಸರಾಸರಿ ಮಳೆ ಲೆಕ್ಕಾಚಾರ:
ಇನ್ನೂ ಈ ವರ್ಷ ಅಕ್ಟೋಬರ್ 1 ರಿಂದ ನವೆಂಬರ್ 30 ರವರೆಗೆ ತಮಿಳುನಾಡಿನಲ್ಲಿ 651.1 ಮಿಮೀ ಮಳೆ ದಾಖಲಾಗಿದೆ. ಅಕ್ಟೋಬರ್-ಡಿಸೆಂಬರ್ನಲ್ಲಿ ಸರಾಸರಿ 356.0 ಮಿ.ಮೀ ಮಳೆ ದಾಖಲಾಗಿದ್ದು, ಪ್ರಸ್ತುತ ಮಳೆ ವಾಡಿಕೆಗಿಂತ ಶೇ.83ರಷ್ಟು ಅಧಿಕವಾಗಿದೆ. ನವೆಂಬರ್ 29 ರಂದು ರಾಜ್ಯ ಸರ್ಕಾರವು ಕಳೆದ ಐದು ವರ್ಷಗಳ ಸರಾಸರಿ ಮಳೆಯ ಡೇಟಾವನ್ನು ಬಿಡುಗಡೆ ಮಾಡಿದೆ. ಇದು ಈ ವರ್ಷ ತಮಿಳುನಾಡಿನಲ್ಲಿ 1,300 ಮಿಮೀ ಮತ್ತು ಚೆನ್ನೈನಲ್ಲಿ 1,866 ಮಿಮೀ ಮಳೆ ದಾಖಲಾಗಿದೆ ಎಂದು ತೋರಿಸಿದೆ.
2015-2021ರವರೆಗೆ ತಮಿಳುನಾಡು ಮತ್ತು ಚೆನ್ನೈನಲ್ಲಿ ಈಶಾನ್ಯ ಮಾನ್ಸೂನ್ ಮಳೆಯ ಮಾಹಿತಿ:
* 2015 - ತಮಿಳುನಾಡಿನಲ್ಲಿ 518 ಮಿ.ಮೀ ಮತ್ತು ಚೆನ್ನೈನಲ್ಲಿ 1167 ಮಿ.ಮೀ ಮಳೆಯಾಗಿದೆ.
* 2016 - ತಮಿಳುನಾಡಿನಲ್ಲಿ 100.6 ಮಿ.ಮೀ ಮತ್ತು ಚೆನ್ನೈನಲ್ಲಿ 95 ಮಿ.ಮೀ
* 2017 - ತಮಿಳುನಾಡಿನಲ್ಲಿ 300.6 ಮಿ.ಮೀ ಮತ್ತು ಚೆನ್ನೈನಲ್ಲಿ 854 ಮಿ.ಮೀ
* 2018 - ತಮಿಳುನಾಡಿನಲ್ಲಿ 314.8 ಮಿ.ಮೀ ಮತ್ತು ಚೆನ್ನೈನಲ್ಲಿ 321 ಮಿ.ಮೀ
* 2019 - ತಮಿಳುನಾಡಿನಲ್ಲಿ 348 ಮಿ.ಮೀ ಮತ್ತು ಚೆನ್ನೈನಲ್ಲಿ 417 ಮಿ.ಮೀ
* 2020 - ತಮಿಳುನಾಡಿನಲ್ಲಿ 303.8 ಮಿ.ಮೀ ಮತ್ತು ಚೆನ್ನೈನಲ್ಲಿ 811.5 ಮಿ.ಮೀ
* 2021 - ತಮಿಳುನಾಡಿನಲ್ಲಿ 613 ಮಿ.ಮೀ ಮತ್ತು ಚೆನ್ನೈನಲ್ಲಿ 1,121 ಮಿ.ಮೀ
ಅಂಕಿಅಂಶಗಳ ಪ್ರಕಾರ, 1918 ಮತ್ತು 1985 ರಲ್ಲಿ ಈಶಾನ್ಯ ಮಾನ್ಸೂನ್ ಮಳೆಯ ಸಮಯದಲ್ಲಿ ಚೆನ್ನೈ 970 ಮಿಮೀ ಮಳೆಯಾಗಿದೆ. 2005 ರಲ್ಲಿ ನಗರದಲ್ಲಿ 1,010 ಮಿಮೀ ಮತ್ತು 2015 ರಲ್ಲಿ 1,050 ಮಿಮೀ ಮಳೆಯಾಗಿತ್ತು. ಈ ವರ್ಷ ನವೆಂಬರ್ 29 ರವರೆಗೆ ನಗರದಲ್ಲಿ 1,121.43 ಮಿಮೀ. ಮಳೆಯಾಗಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮುಂದಿನ ಐದು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಮಾಪನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಬುಲೆಟಿನ್ ಪ್ರಕಾರ, ಡಿಸೆಂಬರ್ 4 ರಂದು ತಮಿಳುನಾಡು, ಪುದುಚೇರಿ ಮತ್ತು ಕರಿಕಲ್ ಪ್ರದೇಶಗಳಲ್ಲಿ ಮತ್ತು ಡಿಸೆಂಬರ್ 5 ರಂದು ದಕ್ಷಿಣ ತಮಿಳುನಾಡಿನಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.