ಮನೆಗೆ ''ಗೋಸ್ಟ್'' ತರಲು ತೆರಿಗೆ ರದ್ದು ಕೋರಿದ ವಿಜಯ್ಗೆ ಭಾರಿ ದಂಡ
ಚೆನ್ನೈ, ಜುಲೈ 14: ''ಸಿನಿಮಾ ತಾರೆಯರು ತಮ್ಮನ್ನು ತಾವು ಸಾಮಾಜಿಕ ನ್ಯಾಯ ಒದಗಿಸಬಲ್ಲ ಚಾಂಪಿಯನ್ಸ್ ಎಂದು ಬಿಂಬಿಸಿಕೊಂಡಿರುತ್ತಾರೆ ಅದರೆ , ನೈಜ ಸಂಗತಿ ಹಾಗೆ ಇಲ್ಲ,'' ಹೀಗೆಂದು ತಮಿಳು ಚಿತ್ರರಂಗ ಸೂಪರ್ ಸ್ಟಾರ್ ಎನಿಸಿಕೊಂಡಿರುವ ವಿಜಯ್ ಪರ ವಕೀಲರಿಗೆ ಮದ್ರಾಸ್ ಹೈಕೋರ್ಟ್ ಹೇಳಿದೆ. ಈ ಹಿಂದೆ ಎಫ್ 1 ದಿಗ್ಗಜ ಮೈಕಲ್ ಶ್ಯೂಮಾಕರ್ ಕೊಟ್ಟ ಫೆರಾರಿ ಕಾರು ತರೆಸಿಕೊಳ್ಳುವಾಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಾಡಿದ ತಪ್ಪನ್ನೇ ಈಗ ವಿಜಯ್ ಮಾಡಲು ಹೊರಟ್ಟಿದ್ದರು. ಐಷಾರಾಮಿ ಕಾರು ಆಮದು ಮಾಡಿಕೊಳ್ಳುವಾಗ ಸರ್ಕಾರ ವಿಧಿಸುವ ಪ್ರವೇಶ ಶುಲ್ಕ ತೆರಿಗೆ ಮನ್ನಾ ಮಾಡುವಂತೆ ಅಥವಾ ವಿನಾಯಿತಿ ನೀಡುವಂತೆ ಕೋರಿದ್ದರು. ಆದರೆ, 2012ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಈ ಮೂಲಕ ಸೆಲೆಬ್ರಿಟಿಗಳ ತೆರಿಗೆ ಉಳಿತಾಯ ಮಾರ್ಗಕ್ಕೆ ಮತ್ತೊಮ್ಮೆ ಬ್ರೇಕ್ ಹಾಕಿದೆ.
'ರೋಲ್ಸ್ ರಾಯ್ಸ್ ಗೋಸ್ಟ್' ಕಾರನ್ನು ವಿಜಯ್ ಇಂಗ್ಲೆಂಡ್ನಿಂದ ಆಮದು ಮಾಡಿಕೊಂಡಿದ್ದು, ಕಾರಿನ ಪ್ರವೇಶ ವಿಧಿಸದಂತೆ ತೆರಿಗೆ ಅಧಿಕಾರಿಗಳಿಗೆ ತಡೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. 2012ರಿಂದ ಈ ರಿಟ್ ಅರ್ಜಿ ವಿಚಾರಣೆ ನಡೆದು, ಇತ್ತೀಚೆಗೆ ತೀರ್ಪು ಹೊರಬಂದಿದೆ. ನ್ಯಾ. ಎಸ್ ಎಂ ಸುಬ್ರಮಣ್ಯಂ ಅವರು ವಿಜಯ್ ಅವರಿಗೆ 1 ಲಕ್ಷ ರು ದಂಡ ವಿಧಿಸಿದ್ದು, ಸದರಿ ಮೊತ್ತವನ್ನು ಇನ್ನೆರಡು ವಾರಗಳಲ್ಲಿ ತಮಿಳುನಾಡು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಪಾವತಿಸಬೇಕು ಎಂದು ಸೂಚಿಸಿದ್ದಾರೆ.
ಕೇರಳ ಸರ್ಕಾರ ಮತ್ತು ಫಾದರ್ ವಿಲಿಯಂ ಫರ್ನಾಂಡಿಸ್ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಪ್ರಕರಣದ ಅನುಪಾಲನಾ ವರದಿಯ ವಿಚಾರಣೆ ಜುಲೈ 28ಕ್ಕೆ ನಿಗದಿಯಾಗಿದೆ. ವಿಜಯ್ ಅವರ ಪರವಾಗಿ ವಕೀಲ ಎಸ್ ಕುಮಾರೇಶನ್ ಹಾಜರಿದ್ದರು. ಪ್ರತಿವಾದಿ ಅಧಿಕಾರಿಗಳ ಪರವಾಗಿ ಸರ್ಕಾರದ ವಕೀಲ ವಿ ಇ ವೇಲುಚಾಮಿ ಉಪಸ್ಥಿತರಿದ್ದರು.
ಅರ್ಜಿ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ
"ಪ್ರವೇಶ ತೆರಿಗೆ ಪಾವತಿ ತಪ್ಪಿಸುವ ಸಲುವಾಗಿ" ಅರ್ಜಿ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಗಳು ಕೋರಿದ ಪ್ರವೇಶ ತೆರಿಗೆಯನ್ನು ಅವರು ಪ್ರಾಮಾಣಿಕವಾಗಿ ಪಾವತಿಸಬೇಕಿತ್ತು ಎಂದು ನ್ಯಾ ಸುಬ್ರಮಣ್ಯಂ ಅಭಿಪ್ರಾಯಪಟ್ಟಿದ್ದಾರೆ.
''ಅವರು ರೀಲ್ ನಾಯಕರಂತೆ ವರ್ತಿಸುವ ಅಗತ್ಯವಿಲ್ಲ. ತೆರಿಗೆ ವಂಚನೆ ರಾಷ್ಟ್ರ ವಿರೋಧಿ ಅಭ್ಯಾಸ ಮತ್ತು ಮನಸ್ಥಿತಿಯಾಗಿದ್ದು ಅದು ಅಸಾಂವಿಧಾನಿಕ. ಈ ನಟರು ತಮ್ಮನ್ನು ತಾವು ಸಮಾಜದಲ್ಲಿ ಸಾಮಾಜಿಕ ನ್ಯಾಯವನ್ನು ಜಾರಿಗೆ ತರುವ ಹರಿಕಾರರು ಎಂದು ಬಿಂಬಿಸಿಕೊಳ್ಳುತ್ತಾರೆ. ಅವರ ಸಿನಿಮಾಗಳು ಸಮಾಜದಲ್ಲಿನ ಭ್ರಷ್ಟಾಚಾರದ ವಿರುದ್ಧ ಇರುತ್ತವೆ. ಆದರೆ ಅವರು ತೆರಿಗೆ ತಪ್ಪಿಸುತ್ತಿದ್ದು ಕಾನೂನಿಗೆ ಹೊರತಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆ," ಎಂದು ನ್ಯಾ ಸುಬ್ರಮಣ್ಯಂ ಅಸಮಾಧಾನ ವ್ಯಕ್ತಪಡಿಸಿದರು.
ತೆರಿಗೆ ಪಾವತಿಸಲು ಸಾಮಾನ್ಯ ಜನರನ್ನು ಪ್ರೇರೇಪಿಸಬೇಕು
ಪ್ರತಿಷ್ಠಿತ ವ್ಯಕ್ತಿಗಳು ಕಾನೂನುಬದ್ಧ ನಾಗರಿಕರಂತೆ ವರ್ತಿಸಲು ಮತ್ತು ತೆರಿಗೆ ಪಾವತಿಸಲು ಸಾಮಾನ್ಯ ಜನರನ್ನು ಪ್ರೇರೇಪಿಸಬೇಕು. ಹಾಗಿದ್ದರೂ ಶ್ರೀಮಂತರು ಮತ್ತು ಪ್ರತಿಷ್ಠಿತ ವ್ಯಕ್ತಿಗಳು ತೆರಿಗೆ ಪಾವತಿಸಲು ವಿಫಲವಾದರೆ ಆಗ ನ್ಯಾಯಾಲಯ ಸಾಂವಿಧಾನಿಕ ಗುರಿಗಳನ್ನು ಸಾಧಿಸಲು ಇನ್ನೂ ಬಹಳ ದೂರ ಸಾಗಬೇಕಾಗುತ್ತದೆ ಎಂದು ನೋವಿನಿಂದ ಈ ನ್ಯಾಯಾಲಯ ದಾಖಲಿಸುತ್ತದೆ. ಈ ಹಿನ್ನೆಲೆಯಲ್ಲಿ ವಿಜಯ್ ಅವರು ಪ್ರವೇಶ ತೆರಿಗೆ ಪಾವತಿಸದಿರುವುದು ಅಭಿಮಾನಿಗಳಿಗೆ ಅಗೌರವ ಉಂಟು ಮಾಡಿದಂತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಾತ್ವಿಕವಾಗಿ, ಸಂಪತ್ತಿನ ಕ್ರೋಢೀಕರಣ ಅಥವಾ ರೋಲ್ಸ್ ರಾಯ್ಸ್ನಂತಹ ವಿಶ್ವದ ಪ್ರತಿಷ್ಠಿತ ಕಾರನ್ನು ಹೊಂದಿದ್ದರೂ, ಅದು ಉತ್ತಮ ಜೀವನಕ್ಕೆ ಯಾವುದೇ ನೆರವು ನೀಡದು, ಏಕೆಂದರೆ ನಮ್ಮ ದೇಶವು ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳಿಂದ ಸಮೃದ್ಧವಾಗಿದೆ. ಅರ್ಜಿದಾರರು ಪ್ರವೇಶ ತೆರಿಗೆ ಪಾವತಿಸದೆ ಇರುವುದನ್ನು ಮೆಚ್ಚಲಾಗದು.
ವೈಯಕ್ತಿಕ ಬಳಕೆಗೆ ವಿಶ್ವದ ಪ್ರತಿಷ್ಠಿತ ಕಾರು ಖರೀದಿ
ಅವರ ಸಿನಿಮಾಗಳನ್ನು ದುಡ್ಡು ತೆತ್ತು ನೋಡುವ ಲಕ್ಷಾಂತರ ಅಭಿಮಾನಿಗಳನ್ನು ಅರ್ಜಿದಾರರು ಗೌರವಿಸಿಲ್ಲ ಅಥವಾ ಅವರಿಗೆ ಸ್ಪಂದಿಸಿಲ್ಲ. ಏಕೆಂದರೆ ಅಂಥ ಹಣದಿಂದ ಅರ್ಜಿದಾರ/ ನಟ ತನ್ನ ವೈಯಕ್ತಿಕ ಬಳಕೆಗೆ ವಿಶ್ವದ ಪ್ರತಿಷ್ಠಿತ ಕಾರು ಖರೀದಿಸಿದ್ದಾನೆ. ದೇಶದ ಅತ್ಯಂತ ಹೆಸರಾಂತ ವ್ಯಕ್ತಿಗಳು ತಮಗೆ ತಲುಪುವ ಹಣ ಬಂದದ್ದು ಬಡವರ ರಕ್ತದಿಂದ ಮತ್ತು ಅವರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ, ಆಕಾಶದಿಂದಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ತೆರಿಗೆ ಪಾವತಿಸುವ ಹಿಂದಿನ ಮಹತ್ವ, ಅದರಿಂದ ಉಂಟಾಗುವ ಸಮಾಜ ಕಲ್ಯಾಣ ಕೆಲಸಗಳ ಬಗ್ಗೆ ವಿವರಿಸಿದ ನ್ಯಾಯಾಲಯ ತೆರಿಗೆ ಪಾವತಿಸುವುದನ್ನು ತಪ್ಪಿಸುವ ಉದ್ದೇಶದಿಂದ ಒಂಬತ್ತು ವರ್ಷಗಳ ಕಾಲ ರಿಟ್ ಅರ್ಜಿ ಬಾಕಿ ಉಳಿದಿರುವುದು ಅಕ್ಷಮ್ಯ ಎಂದಿತು.
ಅಫಿಡವಿಟ್ ಕೂಡಾ ಸರಿಯಾಗಿ ಸಲ್ಲಿಸಿಲ್ಲ
ರಿಟ್ ಅರ್ಜಿ ಸಲ್ಲಿಸಿರುವ ವಿಜಯ್ ತಮ್ಮ ಅಫಿಡವಿಟ್ ನಲ್ಲಿ ತಮ್ಮ ಉದ್ಯೋಗ, ಆದಾಯದ ಮೂಲ ಯಾವುದೇ ವಿವರ ನೀಡಿಲ್ಲ. ಈ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದಾಗ ನಟ ವಿಜಯ್ ಅವರೇ ಅರ್ಜಿದಾರ ಎಂದು ನ್ಯಾಯಾಲಯಕ್ಕೆ ತಿಳಿದು ಬಂದಿದೆ. ಈ ಬಗ್ಗೆ ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿ, ವಿಷಯ ಮುಚ್ಚಿಡಿದ್ದು ಏಕೆ ಎಂದು ಪ್ರಶ್ನಿಸಿದೆ. ತೆರಿಗೆ ವಂಚನೆ ದೇಶಕ್ಕೆ ಮಾಡುವ ದ್ರೋಹ, ಸಾಮಾಜಿಕ ನ್ಯಾಯದ ಹರಿಕಾರ ಎಂದೆನಿಸಿಕೊಳ್ಳಬೇಕಾದರೆ, ಹಾಗೆ ನಡೆದುಕೊಳ್ಳಬೇಕು, ನಿಮ್ಮ ತೆರಿಗೆ ಹಣದಿಂದಲೇ ದೇಶದ ಅಭಿವೃದ್ಧಿ ಕಾರ್ಯ ಸಾಧ್ಯ ಎಂದು ನ್ಯಾಯಾಲಯ ಹೇಳಿದೆ. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)