ವಿಡಿಯೋ: ತಮಿಳುನಾಡು ಮೀನುಗಾರಿಕೆ ಸಚಿವರ ಎಡವಟ್ಟು
ಚೆನ್ನೈ, ಜುಲೈ 9: ತಮಿಳುನಾಡು ಮೀನುಗಾರಿಕೆ ಖಾತೆ ಸಚಿವ ಅನಿತಾ ರಾಧಾಕೃಷ್ಣನ್ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಕಡಲ ತೀರದ ಮಣ್ಣಿನ ಸವೆತ ತಡೆಗಟ್ಟಲು ಕೈಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಲು ಇಂದು ಸಚಿವ ರಾಧಾಕೃಷ್ಣನ್ ತೆರಳಿದ್ದರು. ಒಟ್ಟು 30 ಮಂದಿ ಅಧಿಕಾರಿಗಳು, ತಜ್ಞರಿದ್ದ ತಂಡ ಅಧ್ಯಯನ ನಡೆಸಲು ತೆರಳಿತ್ತು.
ತಿರುವಳ್ಳುರ್ ಜಿಲ್ಲೆಯ ಪಾಲವರ್ಕಡು ಎಂಬಲ್ಲಿಗೆ ಭೇಟಿ ನೀಡಿದ್ದರು. ತಮ್ಮ ಸಂಗಡಿಗರೊಂದಿಗೆ ಸಚಿವರು ಬೋಟ್ನಲ್ಲಿ ತೆರಳಿದ್ದರು. ತೀರ ಪ್ರದೇಶಕ್ಕೆ ಬೋಟ್ ಬಂದ ಬಳಿಕ ನೀರಿನಲ್ಲಿ ಇಳಿದು ದಡ ಸೇರದ ಹಾಗೆ ಕುಳಿತ್ತಿದ್ದರು. ಶೂ ಧರಿಸಿದ್ದ ಸಚಿವರ ಪಾದ ನೆಲಕ್ಕೆ ಸೋಕದಂತೆ ಮೀನುಗಾರರು ಅವರನ್ನು ಎತ್ತಿಕೊಂಡು ದಡಕ್ಕೆ ಮುಟ್ಟಿಸಿದ್ದಾರೆ.
ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದ್ದು, ಸಚಿವರನ್ನು ಮೀನುಗಾರರು ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ, ಇದೇನಾ ಪ್ರಜಾಪ್ರಭುತ್ವ ಎಂದು ಪ್ರಶ್ನಿಸುತ್ತಿದ್ದಾರೆ.
ಆದರೆ, ತಮ್ಮ ನಡೆಯಲ್ಲಿ ಯಾವುದೇ ತಪ್ಪಿಲ್ಲ. ಅಲ್ಲಿದ್ದ ಮೀನುಗಾರರು ಪ್ರೀತಿಯಿಂದ ನನ್ನನ್ನು ದಡಕ್ಕೆ ಎತ್ತಿಕೊಂಡು ಬಂದರು. ಇದರಲ್ಲಿ ಯಾರ ಮೇಲೂ ಒತ್ತಡ ಹೇರುವುದಾಗಲಿ, ಅಧಿಕಾರ ಚಲಾಯಿಸುವುದಾಗಿ ಮಾಡಿಲ್ಲ ಎಂದು ರಾಧಾಕೃಷ್ಣನ್ ಸ್ಪಷ್ಟಪಡಿಸಿದ್ದಾರೆ.