ವೈರಲ್ ವಿಡಿಯೋ; ಆದೇಶ ಪಾಲಿಸದ ಆನೆಗೆ ಮನಬಂದಂತೆ ಥಳಿಸಿದ ಮಾವುತರು
ಚೆನ್ನೈ, ಫೆಬ್ರವರಿ 22: ಪುನಶ್ಚೇತನ ಶಿಬಿರದಲ್ಲಿದ್ದ ಆನೆಯನ್ನು ಇಬ್ಬರು ಮಾವುತರು ಅಮಾನುಷವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಮೂಕ ಪ್ರಾಣಿಯನ್ನು ನಡೆಸಿಕೊಂಡಿರುವ ರೀತಿಗೆ ಆಕ್ರೋಶ ವ್ಯಕ್ತವಾಗಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಮರಕ್ಕೆ ಆನೆ ಕಟ್ಟಿಹಾಕಿದ ಮಾವುತರು ಅದಕ್ಕೆ ಮನಬಂದಂತೆ ಕೋಲಿನಿಂದ ಥಳಿಸಿದ್ದಾರೆ. ನೋವಿನಿಂದ ಒದ್ದಾಡುತ್ತಾ ಆನೆ ಕೂಗುತ್ತಿದ್ದರೂ ಬಿಡದೇ ನಿರಂತರವಾಗಿ ಥಳಿಸಿದ್ದಾರೆ. 20 ಸೆಕೆಂಡುಗಳ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾವುತರ ಈ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.
Video surfaces of two mahouts attacking an #elephant at the #Thekkampatti rejuvenation camp for temple and mutt elephants in #Coimbatore. HR&CE Department to conduct an inquiry into the incident. @THChennai @OfficeofminSSR pic.twitter.com/sajTFOEmR6
— R. Akileish (@Akileish) February 21, 2021
ಹತ್ತೊಂಬತ್ತು ವರ್ಷದ ಹೆಣ್ಣಾನೆ ಜಯಮಾಲ್ಯತಾ ಶ್ರೀವಿಲಿಪುತ್ತೂರಿನ ಅಂಡಾಳ್ ದೇವಸ್ಥಾನದ್ದಾಗಿದ್ದು, ಫೆಬ್ರವರಿ 8ರಿಂದ ಆರಂಭವಾಗಿರುವ 13ನೇ ವಾರ್ಷಿಕ ಪುನಶ್ಚೇತನ ಶಿಬಿರಕ್ಕೆ ಕಳುಹಿಸಲಾಗಿತ್ತು. ಆದರೆ ಶಿಬಿರದಲ್ಲಿ ಆನೆಯನ್ನು ಈ ರೀತಿ ನಡೆಸಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮೆಟ್ಟುಪಾಳ್ಯಂನ ತೆಕ್ಕಂಪಟ್ಟಿಯಲ್ಲಿ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಭಾನುವಾರ ಮಾವುತ ವಿನಿಲ್ ಕುಮಾರ್ (45) ಹಾಗೂ ಆತನ ಸಹಾಯಕ ಶಿವಪ್ರಸಾದ್ ನನ್ನು ಬಂಧಿಸಿದೆ.
2011ರಲ್ಲಿ ಜಯಮಾಲ್ಯತಾ ಆನೆಗೆ ಮಾವುತನಾಗಿ ವಿನಿಲ್ ನನ್ನು ನಿಯೋಜಿಸಲಾಗಿತ್ತು. ಶಿವಪ್ರಸಾದ್ ನನ್ನು ದೇವಸ್ಥಾನ ಆಡಳಿತ ಮಂಡಳಿ ನೇಮಿಸಿರಲಿಲ್ಲ.
ಭಯಾನಕ ವಿಡಿಯೋ: ಸುಡುವ ಟೈರ್ ಎಸೆದ ತಮಿಳುನಾಡು ರೆಸಾರ್ಟ್ ಕಾರ್ಮಿಕರು: ಆನೆ ಸಾವು
ವನಂ ಟ್ರಸ್ಟ್ ಆಫ್ ಇಂಡಿಯಾದ ಸಂಸ್ಥಾಪಕ ಎಸ್, ಚಂದ್ರಶೇಖರ್ ಶೀಘ್ರವೇ ಪುನಶ್ಚೇತನ ಶಿಬಿರದಿಂದ ಆನೆ ಶಿಬಿರಕ್ಕೆ ಆನೆಯನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಘಟನೆ ಖಂಡಿಸಿ ಸೋಮವಾರ ತಾಂತೈ ಪೆರಿಯಾರ್ ದ್ರಾವಿಡ ಕಳಗಂ ಕಾರ್ಯದರ್ಶಿ ಕೆ ರಾಮಕೃಷ್ಣನ್ ಮೆಟ್ಟುಪಾಳ್ಯಂ ಪ್ರತಿಭಟನೆ ನಡೆಸಿ, ಗಾಯಗೊಂಡ ಆನೆಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.