ಎಂ ಕರುಣಾನಿಧಿ ಆಪ್ತ, ಡಿಎಂಕೆ ಮುಖಂಡ ಅನ್ಬಳಗನ್ ನಿಧನ
ಚೆನ್ನೈ, ಮಾರ್ಚ್ 8: ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಹಿರಿಯ ನಾಯಕ ಕೆ ಅನ್ಬಳಗನ್ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶನಿವಾರದಂದು ತಮ್ಮ ಸ್ವಗೃಹದಲ್ಲಿ ನಿಧನರಾದರು ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.
ಡಿಎಂಕೆ ಸ್ಥಾಪಕ ಎಂ ಕರುಣಾನಿಧಿ ಅವರ ಪರಮಾಪ್ತರಲ್ಲಿ ಒಬ್ಬರೆನಿಸಿದ್ದ ಅನ್ಬಳಗನ್ ಅವರಿಗೆ 97 ವರ್ಷ ವಯಸ್ಸಾಗಿತ್ತು. ವಯೋಸಹಜ ಬಳಲಿಕೆಯಿಂದ ಅಸ್ವಸ್ಥರಾಗಿದ್ದ ಅನ್ಬಳಗನ್ ಅವರನ್ನು ಅಪೊಲೋ ಆಸ್ಪತ್ರೆಗೆ ಫೆಬ್ರವರಿ 24ರಂದು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
9 ಬಾರಿ ಶಾಸಕರಾಗಿದ್ದ ಅನ್ಬಳಗನ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 43ವರ್ಷಗಳ ಕಾಲ ದುಡಿದಿದ್ದರು. ನಂತರ ಸಕ್ರಿಯ ರಾಜಕೀಯದಿಂದ ದೂರಾಗಿದ್ದರು. ಅನ್ಬಳಗನ್ ಅವರ ನಿಧನದ ನಂತರ ಪಕ್ಷದ ಕಚೇರಿಯಲ್ಲಿ ಶೋಕಾಚರಣೆಗೆ ಕರೆ ನೀಡಲಾಗಿದೆ.
ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಮುಖ್ಯಮಂತ್ರಿ ಕೆ ಪಳನಸ್ವಾಮಿ, ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ, ನಟ ರಜನೀಕಾಂತ್, ನಟ-ರಾಜಕಾರಣಿ ಕಮಲ್ ಹಾಸನ್, ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ, ಕೆಎಸ್ ಅಳಗಿರಿ, ವಿಸಿಕೆ ನಾಯಕ ತಿರುಮಾವಳನ್ ಹಾಗೂ ಡಿಎಂಡಿಕೆ ಮುಖ್ಯಸ್ಥ ವಿಜಯ್ ಕಾಂತ್ ಮುಂತಾದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.