ಬಿಜೆಪಿ ಸೇರ್ಪಡೆಗೊಂಡ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ
ಕೃಷ್ಣಗಿರಿ(ತಮಿಳುನಾಡು), ಫೆಬ್ರವರಿ 23: ದಂತಚೋರ, ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ಭಾರತ ಜನತಾ ಪಕ್ಷ ಸೇರ್ಪಡೆಗೊಂಡಿರುವ ಸುದ್ದಿ ಬಂದಿದೆ. ಕೃಷ್ಣಗಿರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಉಪಸ್ಥಿತರಿದ್ದರು.
ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ವೃತ್ತಿಯಿಂದ ವಕೀಲೆಯಾಗಿರುವ ವಿದ್ಯಾರಾಣಿ, ನನ್ನ ತಂದೆ ವೀರಪ್ಪನ್ ಕೂಡಾ ಸಮಾಜ ಸೇವೆ ಮಾಡಲು ಬಯಸಿದ್ದರು. ಆದರೆ ಅವರು ಆಯ್ಕೆ ಮಾಡಿಕೊಂಡ ಮಾರ್ಗ ತಪ್ಪಾಗಿತ್ತು. ಅವರಿಗೆ ತಪ್ಪಿನ ಅರಿವಾಗುವ ವೇಳೆ ಸಮಯ ಮೀರಿತ್ತು. ನಾನು ಈಗ ಸಮಾಜ ಸೇವೆ ಮಾಡುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ.
ವೀರಪ್ಪನ್ ಇಬ್ಬರು ಪುತ್ರಿಯರ ಪೈಕಿ ವಿದ್ಯಾರಾಣಿ ಹಿರಿಯವರಾಗಿದ್ದಾರೆ. ಈ ಹಿಂದೆ ಕೂಡಾ ವಿದ್ಯಾರಾಣಿ ಸುದ್ದಿಯಲ್ಲಿದ್ದರು. ವಿದ್ಯಾರಾಣಿ ಪ್ರೀತಿಸಿ ಮದುವೆಯಾಗಲು ಹೊರಟಾಗ ಅವರ ತಾಯಿ ಮುತ್ತುಲಕ್ಷ್ಮಿ ವಿರೋಧ ವ್ಯಕ್ತಪಡಿಸಿದ್ದರು. ಪ್ರಕರಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.