ಜಯಲಲಿತಾರ 'ವೇದ ನಿಲಯಂ' ಬಂಗಲೆ ಸ್ಮಾರಕ ಮಾಡುವ ಆದೇಶ ವಜಾ
ಚೆನ್ನೈ, ನವೆಂಬರ್ 24; ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾರ ಚೆನ್ನೈನ ಪೋಯಸ್ ಗಾರ್ಡನ್ನ 'ವೇದ ನಿಲಯಂ' ಬಂಗಲೆಯನ್ನು ಸ್ಮಾರಕ ಮಾಡುವ ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರ್ಕಾರ ವೇದ ನಿಲಯಂ ಬಂಗಲೆಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡು ಸ್ಮಾರಕವಾಗಿ ಪರಿವರ್ತಿಸುವುದಾಗಿ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಸದ್ಯ ಡಿಎಂಕೆ ಸರ್ಕಾರ ಆಡಳಿತ ನಡೆಸುತ್ತಿದೆ.
ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾದ ಜಯಲಲಿತಾ ವೇದ ನಿಲಯಂ ಸ್ಮಾರಕ
ಬಂಗಲೆಯನ್ನು ವಶಕ್ಕೆ ಪಡೆದುಕೊಂಡಿದ್ದನ್ನು ಜಯಲಲಿತಾ ಸಹೋದರ ಜಯಕುಮಾರ್ ಮಕ್ಕಳಾದ ದೀಪಾ ಮತ್ತು ದೀಪಕ್ ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಈ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಬಂಗೆಲೆಯನ್ನು ದೀಪಾ ಮತ್ತು ದೀಪಕ್ಗೆ ಹಸ್ತಾಂತರ ಮಾಡುವಂತೆ ಆದೇಶ ನೀಡಿದೆ.
ಜೆ ಜಯಲಲಿತಾಗೆ ಸೇರಿದ 900 ಕೋಟಿ ಆಸ್ತಿ ದೀಪಾ, ದೀಪಕ್ ಪಾಲು
ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಸುಮಾರು 50 ವರ್ಷಗಳ ಕಾಲ ವೇದ ನಿಲಯಂ ಬಂಗಲೆಯಲ್ಲಿ ವಾಸವಾಗಿದ್ದರು. ಆದರೆ ಅವರ ಮರಣಾನಂತರ ಯಾವುದೇ ವಿಲ್ ಬರೆದಿಡದ ಕಾರಣ 2020ರಲ್ಲಿ ದೀಪಾ ಮತ್ತು ದೀಪಕ್ರನ್ನು ಜಯಲಲಿತಾ ಅವರ ಅಧಿಕೃತ ಉತ್ತರಾಧಿಕಾರಿಗಳು ಎಂದು ಮದ್ರಾಸ್ ಹೈಕೋರ್ಟ್ ಘೋಷಣೆ ಮಾಡಿತ್ತು.
ಮರೀನಾ ಕಡಲ ತೀರದಲ್ಲಿ ಜಯಲಲಿತಾ ಸ್ಮಾರಕ ಲೋಕಾರ್ಪಣೆ
ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಐಎಡಿಎಂಕೆ ಪಕ್ಷ ದೀಪಾ ಮತ್ತು ದೀಪಕ್ ಇಚ್ಛೆಗೆ ವಿರುದ್ಧವಾಗಿ ಬಂಗಲೆಯನ್ನು ಸರ್ಕಾರದ ವಶಕ್ಕೆ ಪಡೆದಿತ್ತು. ಮುಖ್ಯಮಂತ್ರಿಯಾಗಿದ್ದ ಎಡಪ್ಪಾಡಿ ಕೆ. ಪಳನಿಸ್ವಾಮಿ ಬಂಗಲೆಯನ್ನು ಸ್ಮಾರಕವನ್ನಾಗಿ ಮಾಡುವುದಾಗಿ ಆದೇಶ ಹೊರಡಿಸಿದ್ದರು. ಮದ್ರಾಸ್ ಹೈಕೋರ್ಟ್ ಈ ಆದೇಶವನ್ನು ವಜಾಗೊಳಿಸಿದೆ.
ಬಂಗಲೆ ಕುರಿತು; ದಿ. ಜೆ. ಜಯಲಲಿತಾ ಸುಮಾರು 50 ವರ್ಷಗಳ ಕಾಲ ಚೆನ್ನೈನ ಪೋಯಸ್ ಗಾರ್ಡನ್ನ 'ವೇದ ನಿಲಯಂ' ಬಂಗಲೆಯಲ್ಲಿ ವಾಸವಾಗಿದ್ದರು. ಪ್ರಸ್ತುತ ಈ ಬಂಗಲೆ ಮೌಲ್ಯ ಸುಮಾರು ನೂರು ಕೋಟಿಯಾಗಿದೆ.
ಜಯಲಲಿತಾ ತಾಯಿ ಸಂಧ್ಯಾ 1967ರಲ್ಲಿ 1.32 ಲಕ್ಷ ರೂ.ಗಳಿಗೆ ಬಂಗಲೆಯನ್ನು ಖರೀದಿ ಮಾಡಿದ್ದರು. ಮೊದಲು ಚಿಕ್ಕ ಜಾಗದಲ್ಲಿ ಬಂಗಲೆ ಇತ್ತು. ಜಯಲಲಿತಾ ಅಕ್ಕ-ಪಕ್ಕದ ಜಾಗಗಳನ್ನು ಖರೀದಿ ಮಾಡಿ ಬಂಗಲೆಯನ್ನು ವಿಸ್ತರಣೆ ಮಾಡಿದ್ದರು.
ಎಐಎಡಿಎಂಕೆ ಪಕ್ಷದ ಕಾರ್ಯಕರ್ತರ ಪಾಲಿಗೆ ಈ ಬಂಗಲೆ ದೇವಾಲಯದಂತೆ. ಅದೇ ಕಾರಣಕ್ಕೆ 2016ರಲ್ಲಿ ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಸರ್ಕಾರ ಬಂಗಲೆಯನ್ನು ವಶಕ್ಕೆ ಪಡೆದುಕೊಂಡು ಸ್ಮಾರಕ ಮಾಡುವುದಾಗಿ ಘೋಷಣೆ ಮಾಡಿತು. ಇದು ಪಕ್ಷದ ಕಾರ್ಯಕರ್ತರ ಇಚ್ಛೆ ಎಂದು ಸಹ ಹೇಳಿತ್ತು.
ಜಯಲಲಿತಾ ಸಹ ಬಂಗಲೆ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಮನೆಯಲ್ಲಿ ಸುಮಾರು 8 ಸಾವಿರ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವನ್ನು ಸಹ ನಿರ್ಮಿಸಿದ್ದರು. ಈಗ ಮದ್ರಾಸ್ ಹೈಕೋರ್ಟ್ ಆದೇಶದಂತೆ ಬಂಗಲೆ ದೀಪಾ ಮತ್ತು ದೀಪಕ್ಗೆ ಹಸ್ತಾಂತರವಾಗಲಿದೆ.
1968 ಮೇ 15ರಂದು ವೇದ ನಿಲಯಂ ಗೃಹ ಪ್ರವೇಶ ನಡೆದಿತ್ತು. ಜಯಲಲಿತಾ ತಮ್ಮ ಆಪ್ತೆಯಾದ ಶಶಿಕಲಾ ಜೊತೆ ಇದೇ ಬಂಗಲೆಯಲ್ಲಿ ವಾಸವಾಗಿದ್ದರು. ಮುಖ್ಯಮಂತ್ರಿಯಾದ ಬಳಿಕವೂ ಇದೇ ಬಂಗಲೆಯಲ್ಲಿ ವಾಸವಾಗಿದ್ದರು.
ಒಟ್ಟು ಮೂರು ಅಂತಸ್ತುಗಳನ್ನು ಹೊಂದಿರುವ ವೇದ ನಿಲಯಂ ಅನ್ನು ಸ್ಮಾರಕ ಮಾಡಲು ಉದ್ದೇಶಿಸಿದ್ದ ತಮಿಳುನಾಡು ಸರ್ಕಾರ ಬಂಗಲೆಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು. ಈ ನಿವಾಸದ ಉತ್ತರಾಧಿಕಾರಿ ಯಾರು ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಿತ್ತು.
ಜೆ. ಜಯಲಲಿತಾ ಸಮಾಧಿ ಸ್ಥಳ ಇರುವ ಮರಿನಾ ಬೀಚ್ನಲ್ಲಿ 50 ಕೋಟಿ ವೆಚ್ಚದಲ್ಲಿ ಸರ್ಕಾರ ಸ್ಮಾರಕ ನಿರ್ಮಾಣ ಮಾಡಿತ್ತು. ವೇದ ನಿಲಯಂ ಬಂಗಲೆಯನ್ನು ವಶಕ್ಕೆ ಪಡೆದುಕೊಂಡು ಅದನ್ನು ಸಹ ಸ್ಮಾರಕಗೊಳಿಸಲು ಎಐಎಡಿಎಂಕೆ ಸರ್ಕಾರ ತೀರ್ಮಾನಿಸಿತ್ತು.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಸೋಲು ಕಂಡಿತು. ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದು ಎಂ. ಕೆ. ಸ್ಟಾಲಿನ್ ಮುಖ್ಯಮಂತ್ರಿಯಾದರು. ಈಗ ಬಂಗಲೆಯನ್ನು ಸ್ಮಾರಕಗೊಳಿಸುವ ರಾಜ್ಯದ ಹಿಂದಿನ ಸರ್ಕಾರದ ಆದೇಶವನ್ನು ಸಹ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.