ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಸ್ಟಾಲಿನ್
ಚೆನ್ನೈ, ಡಿಸೆಂಬರ್ 16: ಫ್ಯಾಸಿಸ್ಟ್ ಮೋದಿ ಸರಕಾರವನ್ನು ಸೋಲಿಸುವ ಸಾಮರ್ಥ್ಯ ರಾಹುಲ್ ಗಾಂಧಿ ಅವರಿಗೆ ಇದೆ. ರಾಹುಲ್ ಗಾಂಧಿ ಅವರ ಕೈ ಬಲಪಡಿಸೋಣ, ದೇಶವನ್ನು ರಕ್ಷಣೆ ಮಾಡೋಣ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಚೆನ್ನೈನಲ್ಲಿ ಹೇಳಿದರು. ಆ ಮೂಲಕ ರಾಹುಲ್ ಗಾಂಧಿ ಹೆಸರನ್ನು ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದರು.
ಇದಕ್ಕೂ ಮುನ್ನ ಯುಪಿಎ ಮೈತ್ರಿಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾನುವಾರ ಚೆನ್ನೈನಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕೇಂದ್ರ ಕಚೇರಿಯಲ್ಲಿ ಪಕ್ಷದ ಮಹಾನ್ ನಾಯಕ, ದಿವಂಗತ ಎಂ.ಕರುಣಾನಿಧಿ ಅವರ ಪುತ್ಥಳಿ ಅನಾವರಣ ಮಾಡಿದರು. ಅಣ್ಣಾ ಅರಿವಾಲಯಂನಲ್ಲಿ ಈ ಕಾರ್ಯಕ್ರಮ ನಡೆಯಿತು.
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳು ಚಿತ್ರ ನಟ ರಜನೀಕಾಂತ್, ಕೇಂದ್ರದ ಮಾಜಿ ಸಚಿವ ಶತ್ರುಘ್ನ ಸಿನ್ಹಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ.ಕರುಣಾನಿಧಿ ಹಾಗೂ ಸಿ.ಎನ್.ಅಣ್ಣಾದೊರೈ ಅವರ ಪುತ್ಥಳಿ ಅನಾವರಣಕ್ಕಾಗಿ ಸ್ಟಾಲಿನ್ ಅವರು ಈಚೆಗೆ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರಿಗೆ ಪುತ್ಥಳಿ ಅನಾವರಣಗೊಳಿಸಲು ಆಹ್ವಾನ ನೀಡಿದ್ದರು. ಇದೇ ವೇಳೆ ಡಿಸೆಂಬರ್ ಹತ್ತನೇ ತಾರೀಕಿನಂದು ವಿರೋಧ ಪಕ್ಷಗಳ ಒಕ್ಕೂಟದ ಸಭೆಯಲ್ಲಿ ಸ್ಟಾಲಿನ್ ಭಾಗವಹಿಸಿದ್ದರು.