ಸೋಮವಾರ ಸರಕಾರಿ ಕಾರ್ಯಕ್ರಮ, ಕಾಲೇಜು ಪರೀಕ್ಷೆಗಳು ರದ್ದು
ಚೆನ್ನೈ, ಡಿಸೆಂಬರ್ 4: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಡಿಸೆಂಬರ್ 5ರಿಂದ 9ರವರೆಗೆ ತಮಿಳುನಾಡು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುದ್ದಿ ಬರುತ್ತಿದೆ. ಸೋಮವಾರ ಇದ್ದ ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಪೆಟ್ರೋಲ್ ಬಂಕ್ ಗಳನ್ನು ಸಹ ಸೋಮವಾರ ಬಂದ್ ಮಾಡಲು ಸೂಚಿಸಲಾಗಿದೆ. ಎಲ್ಲ ಸರಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಎಲ್ಲ ಪಕ್ಷಗಳ ಮುಖಂಡರನ್ನು ಚೆನ್ನೈಗೆ ಬರುವಂತೆ ಸೂಚಿಸಲಾಗಿದೆ.
ಒ.ಪನ್ನೀರ್ ಸೆಲ್ವಂ ಅಧ್ಯಕ್ಷತೆಯಲ್ಲಿ ತುರ್ತು ಸಂಪುಟ ಸಭೆ ನಡೆದಿದ್ದು, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆದ ಮಾಹಿತಿ ಸಿಕ್ಕಿದೆ. ಇದೇ ವೇಳೆ ಅಪೋಲೋ ಆಸ್ಪತ್ರೆ ಹೊರಭಾಗದಲ್ಲಿ ಜನರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ.
ತಮಿಳುನಾಡಿನ ಒಳಗೆ ಕರ್ನಾಟಕದ ವಾಹನಗಳನ್ನು ಬಿಡದೆ ವಾಪಸ್ ಕಳಿಸಲಾಗುತ್ತದೆ. ಯಾವುದೇ ವೇಳೆ ಅಪೋಲೋ ಆಸ್ಪತ್ರೆಯಿಂದ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಗಳಿದ್ದು ಜಯಲಲಿತಾ ಅವರ ಆರೋಗ್ಯದ ಮಾಹಿತಿ ನೀಡಬಹುದು ಎಂಬ ನಿರೀಕ್ಷೆಯಿದೆ.
ಅಪೋಲೋ ಆಸ್ಪತ್ರೆ ಟ್ವಿಟ್ಟರ್ ನಲ್ಲಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ. ಗುಣಮುಖರಾಗುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಲಾಗಿದೆ. ದೇಶದಾದ್ಯಂತ ರಾಜಕೀಯ ಮುಖಂಡರು ಅಮ್ಮ ಆರೋಗ್ಯ ಚೇತರಿಕೆಗೆ ಹಾರೈಸುತ್ತಿದ್ದಾರೆ.