ಅಮಿತ್ ಶಾ ಚೆನ್ನೈ ಭೇಟಿ: ರಜನೀಕಾಂತ್ ಭೇಟಿಯಾಗುತ್ತಾರೋ, ತಪ್ಪಿಸಿಕೊಳ್ಳುತ್ತಾರೋ?
ನವದೆಹಲಿ/ಚೆನ್ನೈ, ನ 20: ಕೇಂದ್ರ ಗೃಹಸಚಿವ ಅಮಿತ್ ಶಾ, ಶನಿವಾರ (ನ 21) ಚೆನ್ನೈಗೆ ಭೇಟಿ ನೀಡಲಿದ್ದು, ವಿವಿಧ ಸರಕಾರೀ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ, ಪಕ್ಷದ ಮುಖಂಡರ ಜೊತೆಯೂ ಚರ್ಚೆ ನಡೆಸಲಿದ್ದಾರೆ.
ಮುಂದಿನ ವರ್ಷ ತಮಿಳುನಾಡಿನಲ್ಲಿ ಅಸೆಂಬ್ಲಿ ಚುನಾವಣೆ ನಡೆಯುತ್ತಿರುವುದರಿಂದ, ಅಮಿತ್ ಶಾ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಭೇಟಿಯ ವೇಳೆ, ಸೂಪರ್ ಸ್ಟಾರ್ ರಜನೀಕಾಂತ್ ಅವರನ್ನು ಶಾ ಭೇಟಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಡಿಎಂಕೆಯ ಅಳಗಿರಿಯವರನ್ನೂ ಭೇಟಿಯಾಗಬಹುದು.
ಆದರೆ, ರಜನೀಕಾಂತ್ ಅವರು ಅಮಿತ್ ಶಾ ಅವರ ಜೊತೆಗಿನ ಭೇಟಿಯಿಂದ ತಪ್ಪಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಬಿಜೆಪಿ ಸೇರುವಂತೆ ತೀವ್ರ ಒತ್ತಡ ರಜನೀಕಾಂತ್ ಗೆ ಬಂದಿದ್ದ ವೇಳೆ, ರಜನೀಕಾಂತ್ ಸದಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿ, ಬಿಜೆಪಿ ಮುಖಂಡರಿಂದ ದೂರವಿದ್ದರು.
"ಆರೋಗ್ಯ ಸರಿಯಿಲ್ಲದೇ ಇರುವುದರಿಂದ, ಹೊಸ ಪಕ್ಷ ಹುಟ್ಟುಹಾಕುವ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ"ರಜನೀಕಾಂತ್ ಟ್ವೀಟ್ ಮಾಡಿದ ಬೆನ್ನಲ್ಲೇ, ಅಮಿತ್ ಶಾ ಜೊತೆಗೆ ಅವರ ಭೇಟಿಯ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
ಜಯಲಲಿತಾ ಮತ್ತು ಕರುಣಾನಿಧಿ ನಿಧನ
2017ರಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ನಿಧನದ ನಂತರ ರಜನೀಕಾಂತ್ ತಮ್ಮ ಹೊಸ ಪಕ್ಷದ ಘೋಷಣೆಯನ್ನು ಮಾಡಿದ್ದರು. ಆದರೆ, ಯಾವುದೇ ಚುನಾವಣೆಗೆ ರಜನೀಕಾಂತ್ ಆಗಲಿ, ಅವರ ಪಕ್ಷದವರಾಗಲಿ ಸ್ಪರ್ಧಿಸಿರಲಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಗೆ ಬಲವಾದ ಅಸ್ತಿತ್ವವಿದ್ದರೂ, ತಮಿಳುನಾಡಿನ ರಾಜಕೀಯ ಚಿತ್ರಣವೇ ಬೇರೆ. ಹಾಗಾಗಿ, ಸ್ಥಳೀಯ ವರ್ಚಸ್ವೀ ಮುಖದ ತಲಾಶ್ ನಲ್ಲಿರುವ ಬಿಜೆಪಿ, ರಜನೀಕಾಂತ್ ಅವರನ್ನು ಓಲೈಸುವ ಸಾಧ್ಯತೆಯಿದೆ.
ರಜನೀಕಾಂತ್, ಶೂಟಿಂಗ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು
ಈ ಹಿಂದೆ, ರಜನೀಕಾಂತ್ ಅವರು ಬಿಜೆಪಿ ಸೇರುವುದಕ್ಕೆ ಹಲವರ ವಿರೋಧ ಎದ್ದಿದ್ದು ಒಂದು ಕಡೆ, ಇನ್ನೊಂದೆಡೆ, ಬಿಜೆಪಿಯಿಂದಲೂ ಪಕ್ಷ ಸೇರಲು ತೀವ್ರ ಒತ್ತಡ ಬಂದಿದ್ದು ಇನ್ನೊಂದೆಡೆ. ಈ ಸಂದರ್ಭದಲ್ಲಿ, ಬಹುತೇಕ ಸಕ್ರಿಯ ರಾಜಕಾರಣದಿಂದ ದೂರವಿದ್ದ ರಜನೀಕಾಂತ್, ಶೂಟಿಂಗ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅಮಿತ್ ಶಾ - ಅಳಗಿರಿ ಭೇಟಿ ಸಾಧ್ಯತೆ
ಅಳಗಿರಿ ಭೇಟಿ ಸಾಧ್ಯತೆ: ತಮ್ಮ ತಂದೆ ಕರುಣಾನಿಧಿ ಜೀವಿತಾವಧಿಯಲ್ಲೇ ಡಿಎಂಕೆಯಲ್ಲಿ ಇದ್ದೂ ಇಲ್ಲದಂತಿದ್ದ ಅಳಗಿರಿ ಹೊಸ ಪಕ್ಷ ಹುಟ್ಟುಹಾಕುವ ಸಾಧ್ಯತೆ ದಟ್ಟವಾಗಿದೆ. ಇವರು ಬಿಜೆಪಿ ಜೊತೆ ಕೈಜೋಡಿಸುವ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ. ಅಮಿತ್ ಶಾ ಅವರ ಚೆನ್ನೈ ಪ್ರವಾಸದ ವೇಳೆ, ಅಳಗಿರಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಹೆಚ್ಚಾಗಿ ಮೋದಿ ಸರಕಾರವನ್ನು ಸಮರ್ಥಿಸಿಕೊಳ್ಳುವ ರಜನೀಕಾಂತ್
ಹೆಚ್ಚಾಗಿ ನರೇಂದ್ರ ಮೋದಿ ಸರಕಾರವನ್ನು ಸಮರ್ಥಿಸಿಕೊಂಡು ಬರುವ, ತಲೈವಾ ರಜನೀಕಾಂತ್, ದೆಹಲಿ ಹಿಂಸಾಚಾರದ ವಿಚಾರದಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ದ ಕಿಡಿಕಾರಿದ್ದರು. "ಕೇಂದ್ರ ಗೃಹ ಇಲಾಖೆಯ ಈ ವೈಫಲ್ಯತೆಯನ್ನು ನಾನು ಖಂಡಿಸುತ್ತೇನೆ. ಹಿಂಸಾಚಾರವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ರಾಜೀನಾಮೆ ಬಿಸಾಕಿ ಹೋಗಬೇಕು" ಎಂದು ರಜನೀಕಾಂತ್, ಪರೋಕ್ಷವಾಗಿ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.