ತಮಿಳುನಾಡಿನಲ್ಲಿ ಮದ್ಯ ಸಿಗದೆ ವಾರ್ನಿಶ್ ಕುಡಿದು ಮೂವರು ಸಾವು
ಚೆನ್ನೈ, ಏಪ್ರಿಲ್ 6: ಕೊರೊನಾವೈರಸ್ ವಿರುದ್ಧ ಹೋರಾಟ ನಡೆಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಠಿಣ ಕ್ರಮಗಳನ್ನು ಅನುಸರಿಸಿವೆ. ಈ ನಡುವೆ ಮದ್ಯದಂಗಡಿ ಆರಂಭಿಸುವಂತೆ ಅನೇಕ ರಾಜ್ಯಗಳಲ್ಲಿ ಆಗ್ರಹ ಕೇಳಿ ಬಂದಿವೆ. ಕರ್ನಾಟಕದಲ್ಲಿ ಮದ್ಯವ್ಯಸನಿಗಳು ಕುಡಿತದ ಚಟದ ಒತ್ತಡಕ್ಕೆ ಒಳಗಾಗಿ ಮದ್ಯ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮಿಳುನಾಡಿನಲ್ಲೂ ಪರಿಸ್ಥಿತಿ ಇದೇ ರೀತಿ ಇದ್ದು, ಕುಡಿಯಲು ಮದ್ಯ ಸಿಗದೇ ಪೇಯಿಂಟ್ ಮತ್ತು ವಾರ್ನಿಶ್ ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ಚೆಂಗಲ್ ಪಟ್ಟುವಿನಲ್ಲಿ ನಡೆದಿದೆ.
ಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲು
ಮೃತರನ್ನು ಶಿವಶಂಕರ್, ಪ್ರದೀಪ್ ಹಾಗೂ ಶಿವರಾಮನ್ ಎಂದು ಗುರುತಿಸಲಾಗಿದೆ. ದೇಶದೆಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ, ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಮದ್ಯದ ಚಟದಿಂದಾಗಿ ಬಳಲುತ್ತಿದ್ದ ಮೂವರು, ಕುಡಿಯಲು ಮದ್ಯ ಸಿಗದ ಕಾರಣ ಪೇಯಿಂಟ್, ವಾರ್ನಿಶ್ ಕುಡಿದಿದ್ದಾರೆ. ತಕ್ಷಣವೇ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಮೂವರನ್ನು ಚೆಂಗಲ್ ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಲಾಕ್ ಡೌನ್ ನಿಂದಾಗಿ ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೃತ ಮೂವರು ಮದ್ಯವ್ಯಸನಿಗಳಾಗಿದ್ದು, ಮದ್ಯ ಸಿಗದ ಹಿನ್ನೆಲೆಯಲ್ಲಿ ವಾರ್ನಿಶ್ ಮಿಶ್ರಣದ ಪೇಯಿಂಟ್ ಕುಡಿದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.