ತಮಿಳುನಾಡಿನ ಚಿದಂಬರಂ ದೇವಾಲಯದ 20 ಅರ್ಚಕರ ವಿರುದ್ದ ಪ್ರಕರಣ ದಾಖಲು
ಚೆನ್ನೈ, ಫೆ 19: ಕಡಲೂರು ಜಿಲ್ಲೆಯಲ್ಲಿರುವ ಚಿದಂಬರಂ ನಟರಾಜ ದೇವಸ್ಥಾನದ ಆವರಣದಲ್ಲಿ ಎಸ್ಸಿ ಮಹಿಳೆಯೊಬ್ಬರು ಪ್ರಾರ್ಥನೆ ಮಾಡುವುದನ್ನು ತಡೆದ ಆರೋಪದಡಿ 20 ಅರ್ಚಕರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆ ಮಂಗಳವಾರ (ಫೆ 15) ನಡೆದಿದ್ದು, ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅದೇ ದಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಡಲೂರು ಪೊಲೀಸ್ ವರಿಷ್ಠಾಧಿಕಾರಿ ತಿರು ಸಿ.ಶಕ್ತಿ ಗಣೇಶನ್ ಹೇಳಿದ್ದಾರೆ.
ವಿವಾದಕ್ಕೆ ತೆರೆ: "ತಮಿಳ್ ತಾಯ್ ವಾಳ್ತು": ತಮಿಳುನಾಡಿನ ನಾಡಗೀತೆ ಎಂದು ಘೋಷಣೆ
"ನಾವು ಅರ್ಚಕರ ವಿರುದ್ದ ಎಸ್ಸಿ/ಎಸ್ಸಿ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದೇವೆ. ಇದು ಖಾಸಗಿ ದೇವಸ್ಥಾನ, ಈ ವೇಳೆ ಭಕ್ತರು ಮತ್ತು ಅರ್ಚಕರ ನಡುವೆ ಕೆಲಕಾಲ ಘರ್ಷಣೆ ನಡೆಯಿತು. ಕೋವಿಡ್ -19 ಕಾರಣ ದೇವಾಲಯದ ಕಮಿಟಿಯು ದೇವಾಲಯದ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ ಎಂದು ಅರ್ಚಕರು ಹೇಳಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿಗೂ ತಿಳಿಸಿದ್ದೇವೆ' ಎಂದು ಎಸ್ಪಿ ಗಣೇಶನ್ ಹೇಳಿದ್ದಾರೆ.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅವುಗಳಲ್ಲಿ ಒಂದರಲ್ಲಿ, ಒಬ್ಬ ಮಹಿಳೆ ಅಳುತ್ತಿರುವುದನ್ನು ಕಾಣಬಹುದು, ಅವರನ್ನು ದೀಕ್ಷಿತರು ಎಂದು ಕರೆಯಲ್ಪಡುವ ಪುರೋಹಿತರು, ಮತ್ತು ಸ್ಥಳೀಯರ ಗುಂಪು ಸುತ್ತುವರಿದಿರುವುದನ್ನು ಕಾಣಬಹುದಾಗಿತ್ತು. ದೇವಾಲಯಕ್ಕೆ ಪ್ರವೇಶಿಸುವ ವಿಚಾರದಲ್ಲಿ ದೀಕ್ಷಿತರ ಮತ್ತು ಮಹಿಳೆಯರ ನಡುವೆ ತೀವ್ರ ವಾಗ್ವಾದವೂ ನಡೆದಿದೆ.
"ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದ ಕೋವಿಡ್ ಮಾರ್ಗಸೂಚಿಯಂತೆ, ಅರ್ಚಕರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶವಿರುವ ಪ್ರವೇಶವಿರುವ ಪ್ರದೇಶಕ್ಕೆ ತನಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ" ಎಂದು ಮಹಿಳೆ ಜಯಶೀಲಾ ಆರೋಪಿಸಿದ್ದಾರೆ.
ಇನ್ನೊಂದು ವಿಡೀಯೊದಲ್ಲಿ, ಮಹಿಳೆ ನಿರ್ಬಂಧಿತ ಪ್ರದೇಶಕ್ಕೆ ಹೋಗಲು ಮೆಟ್ಟಿಲುಗಳನ್ನು ಹತ್ತಲು ಪ್ರಯತ್ನಿಸುತ್ತಿರುವಾಗ ಪುರೋಹಿತರ ಗುಂಪು ಅವಳನ್ನು ಕೂಗುತ್ತಿರುವುದನ್ನೂ ಕಾಣಬಹುದಾಗಿದೆ. ಅರ್ಚಕರು ತನ್ನನ್ನು ಬೆದರಿಸಿ ದೇವಸ್ಥಾನದ ಆವರಣದಿಂದ ವಸ್ತುವನ್ನು ಕದ್ದಿದ್ದಾರೆ ಎಂದು ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.