ಪೊಲೀಸ್ ಠಾಣೆಯಲ್ಲಿ ಅಪ್ಪ-ಮಗ ಸಾವು; 3 ಪೊಲೀಸರ ಬಂಧನ
ಚೆನ್ನೈ, ಜುಲೈ 02 : ಪೊಲೀಸರ ವಶದಲ್ಲಿದ್ದ ತಂದೆ, ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ತಮಿಳುನಾಡಿನಲ್ಲಿ ನಡೆದ ಈ ಪ್ರಕರಣದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿ-ಸಿಐಡಿ ಪೊಲೀಸರು ಸಬ್ ಇನ್ಸ್ಪೆಕ್ಟರ್ ಬಾಲಕೃಷ್ಣನ್, ಕಾನ್ಸ್ಟೇಬಲ್ಗಳಾದ ಮುತ್ತುರಾಜ್ ಮತ್ತು ಮುರುಗನ್ ಬಂಧಿಸಿದ್ದಾರೆ. ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರನ್ನು ಬಂಧಿಸಲಾಗಿದೆ.
ಲಾಕ್ಡೌನ್ ಉಲ್ಲಂಘನೆ: ಪೊಲೀಸ್ ಕಸ್ಟಡಿಯಲ್ಲೇ ಪ್ರಾಣಬಿಟ್ಟ ತಂದೆ, ಮಗ
ಲಾಕ್ ಅಪ್ ಡೆತ್ ಪ್ರಕರಣ ಬೆಳಕಿಗೆ ಬಂದ ಬಳಿಕ ಸಬ್ ಇನ್ಸ್ಪೆಕ್ಟರ್ ರಘು ಗಣೇಶ್ ಅಮಾನತು ಮಾಡಲಾಗಿತ್ತು. ಮಂಗಳವಾರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ತೂತುಕುಡಿ ಲಾಕಪ್ ಡೆತ್ ಕೇಸ್ ಅಧಿಕೃತವಾಗಿ ಸಿಬಿಐಗೆ ಹಸ್ತಾಂತರ
ಪೊಲೀಸ್ ಠಾಣೆಯಲ್ಲಿ ಹಿಂಸೆ : ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಜಯರಾಜ್ (59) ಮತ್ತು ಅವರ ಪುತ್ರ ಜೆ. ಬೆನಿಕ್ಸ್ (31) ಅವರನ್ನು ಸಾಥಕುಲಂ ಪೊಲೀಸರು ಬಂಧಿಸಿದ್ದರು.
ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಪೊಲೀಸರ ಹಿಂಸೆಯಿಂದಾಗಿ ಇಬ್ಬರೂ ಸಹ ಠಾಣೆಯಲ್ಲಿಯೇ ಕುಸಿದು ಬಿದ್ದಿದ್ದರು. ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಪೊಲೀಸರನ್ನು ಅಮಾನತು ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿ ನಡೆಸುತ್ತಿದೆ.