ಅಭಿಮಾನಿಗಳ ಡಿಕ್ಕಿಲೋನಕ್ಕೆ ದಿನಕರನ್ ಕಕ್ಕಾಬಿಕ್ಕಿ!
Recommended Video
ಚೆನ್ನೈ, ಡಿಸೆಂಬರ್ 06 : ಅಗ್ರಪಂಕ್ತಿಯ ನಾಯಕರಿಂದ ಹಿಡಿದುಕೊಂಡು ಕಡುಬಡವ ಶ್ರೀಸಾಮಾನ್ಯರವರೆಗೆ ಸಹಸ್ರಾರು ಜನರು, ಡಿಸೆಂಬರ್ 5ರಂದು ಜಯಲಲಿತಾ ಸಮಾಧಿಗೆ ಭಕ್ತಿಭಾವದಿಂದ ನಮಸ್ಕರಿಸಿದ್ದಾರೆ. ಭಾವುಕತೆಯನ್ನು ಹಿಡಿದಿಡಲಾರದೆ ಕೆಲವರು ಕಂಬನಿಯನ್ನೂ ಮಿಡಿದಿದ್ದಾರೆ.
ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರದ ಭಾಗವೇ ಐಟಿ ದಾಳಿ: ದಿನಕರನ್
ಅಂಥ ಸಹಸ್ರಾರು ಜನರಲ್ಲಿ ಎಐಎಡಿಎಂಕೆಯಲ್ಲಿ ಮೂಲೆಗುಂಪಾಗಿರುವ, ಶಶಿಕಲಾ ನಟರಾಜನ್ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಕೂಡ ಒಬ್ಬರು. ಅವರು ಹಾಗೆ ಬಂದು, ಪುಷ್ಪ ನಮನವನ್ನು ಸಲ್ಲಿಸಿ, ಹಾಗೆ ಹೋಗಿದ್ದರೆ ಅಂಥ ಸುದ್ದಿ ಆಗುತ್ತಲೇ ಇರಲಿಲ್ಲ.
'ಅಮ್ಮಾ' ನಿಗೂಢ ಸಾವು ಮತ್ತು ಆ 7 ಸಂಭಾವ್ಯ ಪಿತೂರಿಗಳು!
ಟಿಟಿವಿ ದಿನಕರನ್ ಅಲ್ಲಿ ಬಂದಾಗ ಜಯಲಲಿತಾ ಸಮಾಧಿ ಬಳಿ ಡಿಸೆಂಬರ್ 5ರಂದು ನಡೆದಿರುವುದು ಭಾರೀ ಚರ್ಚೆಗೆ, ಅಪಹಾಸ್ಯಕ್ಕೆ, ವಿಡಂಬನೆಗೆ ಗ್ರಾಸವಾಗಿದೆ. ಅದನ್ನು ಜನಪ್ರಿಯ ತಮಿಳು ಸಿನೆಮಾದಲ್ಲಿ ಬರುವ ಹಾಸ್ಯಮಯ ಸನ್ನಿವೇಶದೊಡನೆ ಸಮೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯ ಮಾಡಲಾಗುತ್ತಿದೆ.
ಎಐಎಡಿಎಂಕೆಯಲ್ಲಿ ದಿನಕರನ್ ಆರ್ಭಟ; ಹಲವರ ಸ್ಥಾನಗಳಿಗೆ ಕುತ್ತು
ಟಿಟಿವಿ ದಿನಕರನ್ ಅಂದ್ರೆ ಸುಮ್ನೇನಾ? ಜತೆಗೊಂದಿಷ್ಟು ಭಾರೀ ಸಂಖ್ಯೆಯನ್ನು ಅಭಿಮಾನಿಗಳನ್ನೂ ದಂಡುಕಟ್ಟಿಕೊಂಡು ಬಂದಿದ್ದರು. ಕೆಲವರು ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಹಲವರಿಗೆ ತಾವೇ ಮೊದಲು ಸಮನ ಸಲ್ಲಿಸಬೇಕೆಂಬ ಹಪಾಹಪಿ. ಗೌಜುಗದ್ದಲ, ನೂಕುನುಗ್ಗಲು, ತಳ್ಳಾಟದಲ್ಲಿ ಆಗಿದ್ದೇನೆಂದರೆ...
ಕೈತುಂಬ ಹಿಡಿದಿದ್ದ ಸುವಾಸನೆ ಭರಿತ ಗುಲಾಬಿ ಹೂವುಗಳ ಪಕಳೆಗಳನ್ನು ಟಿಟಿವಿ ದಿನಕರನ್ ಅವರು, ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಯ ಮೇಲೆ ಇನ್ನೇನು ಚೆಲ್ಲಬೇಕು, ಆಗ ಇದ್ದಕ್ಕಿದ್ದಂತೆ ಅಭಿಮಾನಿಗಳ ನಡುವೆ 'ಡಿಕ್ಕಿಲೋನ' ಆಟ ಶುರುವಾಗಿದೆ. ಇಟ್ಟರು ನೋಡಿ ಒಂದು ಡಿಕ್ಕಿ, ಟಿಟಿವಿ ದಿನಕರನ್ ಆಯತಪ್ಪಿ ಸಮಾಧಿ ಮೇಲೆ ಹತ್ತಿಯೇಬಿಟ್ಟರು.
ಅಂದ ಹಾಗೆ, ಡಿಕ್ಕಿಲೋನ ಆಟವೇನೆಂದರೆ, ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ, ಕನ್ನಡದ ನಟ ಅರ್ಜುನ್ ಸರ್ಜಾ ಪ್ರಮುಖ ಭೂಮಿಕೆಯಲ್ಲಿದ್ದ 'ಜಂಟನ್ಮನ್' ಚಿತ್ರದಲ್ಲಿ ಬರುವ ಒಂದು ಹಾಸ್ಯಮಯ ಸನ್ನಿವೇಶ. ಅದರಲ್ಲಿ ಗೌಂಡಮಣಿ ಮತ್ತು ಸೆಂಥಿಲ್ ಪೃಷ್ಟವನ್ನು ಹಿಂಬದಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದು ಆಡುವ ತಮಾಷೆಯ ಸನ್ನಿವೇಶ.
ಕೋಟಿಗಟ್ಟಲೆ ಆಸ್ತಿಯನ್ನು ಬಿಟ್ಟು ಇಹಲೋಕ ತ್ಯಜಿಸಿದ ಜಯಲಲಿತಾ ಸಮಾಧಿಯ ಬಳಿಯೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು 'ಡಿಕ್ಕಿಲೋನ' ಆಟ ಶುರುಹಚ್ಚಿಕೊಂಡಿದ್ದಾರೆ. ನೂಕುನುಗ್ಗಲು ಜಾಸ್ತಿಯಾಗಿ ಒಬ್ಬರಿಗೊಬ್ಬರು ತಳ್ಳಾಡಿ, ಭಕ್ತಿಭಾವುಕತೆಯಿಂದ ಹೂಪಕಳೆಗಳನ್ನು ಅರ್ಚಿಸುತ್ತಿದ್ದ ದಿನಕರನ್ ಗೂ ಅಭಿಮಾನಿಗಳು ಡಿಕ್ಕಿ ಹೊಡೆದಿದ್ದಾರೆ.
ದಿನಕರನ್ ಅವರು ಆಯತಪ್ಪಿ ಒಂದು ಹೆಜ್ಜೆ ಜಯಲಲಿತಾ ಸಮಾಧಿಯ ಮೇಲೂ ಇಟ್ಟುಬಿಟ್ಟಿದ್ದಾರೆ. ಇನ್ನೇನು ಸಮಾಧಿಯ ಮೇಲೆ ಬಿದ್ದೇಬಿಡಬೇಕು, ಅಷ್ಟರಲ್ಲಿ ಅವರ ಹಿಂದೆ ನಿಂತಿದ್ದ ಕಳೈಮಾಮರನ್ ಅವರು ದಿನಕರನ್ ಅವರ ಹೊಟ್ಟೆಯನ್ನು ಹಿಡಿದುಕೊಂಡು, ಮುಂದೆ ಆಗಬಾರದ ಅನಾಹುತವನ್ನು ಮತ್ತು ಮುಜುಗರವನ್ನು ಸಕಾಲದಲ್ಲಿ ತಪ್ಪಿಸಿದ್ದಾರೆ.