ಭಾರಿ ಮಳೆಯಿಂದ ಚೆನ್ನೈನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ
ಚೆನ್ನೈ, ನವೆಂಬರ್ 11: ಚೆನ್ನೈ ಹಾಗೂ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸರಕು ಸಾಗಣೆ, ಪೂರೈಕೆ ವ್ಯತ್ಯಯದಿಂದಾಗಿ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ತಮಿಳುನಾಡಿನ ಬಹುತೇಕ ಎಲ್ಲೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಣ್ಣು, ತರಕಾರಿಗಾಗಿ ಬೇಡಿಕೆ ಹೆಚ್ಚಿದ್ದು, ಅಗತ್ಯ ಪ್ರಮಾಣದಲ್ಲಿ ಪೂರೈಕೆ ಇಲ್ಲದ ಕಾರಣ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ವ್ಯಾಪಾರಿಗಳೂ ಹೇಳಿದ್ದಾರೆ. ಇನ್ನೊಂದೆಡೆ, ಭಾರಿ ಮಳೆಯಿಂದ ಬೆಳೆ ಹಾನಿಯಾಗಿದ್ದು, ಕೃಷಿಕರು, ಕೃಷಿ ಉತ್ಪನ್ನ ಮಾರಾಟಗಾರರು ಕಂಗಲಾಗಿದ್ದಾರೆ.
ತಮಿಳುನಾಡಿನಲ್ಲಿ ಭಾರಿ ಮಳೆ: 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ದೈನಂದಿನ ಅಡುಗೆಗೆ ಬಳಸುವ ತರಕಾರಿಗಳ ಬೆಲೆ ದಿಢೀರ್ ಏರಿಕೆ ಕಂಡಿವೆ. ಟೊಮ್ಯಾಟೋ ಬೆಲೆ ಒಂದು ಕೆ.ಜಿಗೆ 125 ರು ನಂತೆ ಮಾರಾಟ ಮಾಡಲಾಗಿದೆ. ಮಂಗಳವಾರದಂದು 100 ರು ಪ್ರತಿ ಕೆ.ಜಿ ಇದ್ದ ಬೆಲೆ ದಿಢೀರ್ ಏರಿಕೆ ಕಂಡಿದೆ. ಸಗಟು ಮಾರುಕಟ್ಟೆಯಲ್ಲಿ 35 ರಿಂದ 40 ರು ಕೆ. ಜಿ ಇದ್ದ ಬೆಲೆ ಈಗ 60 ರಿಂದ 80 ರು ಪ್ರತಿ ಕೆ.ಜಿಗೆ ಏರಿಕೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಹವಾಮಾನ ಮುನ್ಸೂಚನೆ
ಚೆನ್ನೈ ಸೇರಿದಂತೆ ತಮಿಳುನಾಡಿನೆಲ್ಲೆಡೆ ಗುಡುಗು ಸಹಿತ ಭಾರಿ ಮಳೆ ಸುರಿಯಲಿದ್ದು, ಇನ್ನೆರಡು ದಿನ ತಂಪು ವಾತಾವರಣ ಮುಂದುವರೆಯಲಿದೆ. ಚೆನ್ನೈ ಮತ್ತು ಹತ್ತಿರದ ಚೆಂಗೆಲ್ಪೇಟ್, ತಿರುವಳ್ಳೂರು, ಕಾಂಚೀಪುರಂ ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿ ಗುರುವಾರದಂದು ಭಾರಿ ಮಳೆ ನಿರೀಕ್ಷಿಸಲಾಗಿದೆ. ಜೊತೆಗೆ ಕಡಲೂರು, ಕಲ್ಲಕುರುಚ್ಚಿ, ರಾಣಿಪೇಟ್,ವೆಲ್ಲೂರು, ತಿರುವಣ್ಣಾಮಲೈ, ಕನ್ಯಾಕುಮಾರಿ, ತಿರುನಲ್ವೇಲಿ, ತೆಂಕಾಸಿ ಜಿಲ್ಲೆಗಳಲ್ಲೂ ಮಳೆ ಆರ್ಭಟಿಸಲಿದೆ. ಪುದುಚೇರಿಯಲ್ಲೂ ಮಳೆ ಸಮಸ್ಯೆ ತಂದೊಡ್ಡಿದೆ. ಇನ್ನೆರಡು ದಿನಗಳ ಕಾಲ ತಮಿಳುನಾಡಿನಲ್ಲಿ ವರ್ಷಾಘಾತ ತಪ್ಪಿದ್ದಲ್ಲ.
ಮಳೆಯಿಂದ ಪೂರೈಕೆ ವ್ಯತ್ಯಯ
ಕೊಯಂಬೆಡು ತರಕಾರಿ ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ಎಸ್ ಚಂದ್ರನ್, ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಕೊಯಂಬೆಡು ಮಾರುಕಟ್ಟೆಗೆ ಶೇ 50 ರಷ್ಟು ತರಕಾರಿ ಕರ್ನಾಟಕದಿಂದ, ಶೇ 25 ರಷ್ಟು ತಮಿಳುನಾಡು ಹಾಗೂ ಶೇ 25ರಷ್ಟು ಆಂಧ್ರಪ್ರದೇಶದಿಂದ ಬರುತ್ತದೆ. ತಮಿಳುನಾಡು ಹಾಗೂ ಕರ್ನಾಟಕದ ಕೆಲ ಭಾಗಗಳಲ್ಲಿ ಇತ್ತೀಚೆಗೆ ಮಳೆಯಾಗಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದಿದ್ದಾರೆ.
ಎಲ್ಲಾ ತರಕಾರಿ ಬೆಲೆ ಏರಿಕೆ
ಪ್ರತಿದಿನ ಸರಾಸರಿ 400-450 ಟ್ರಕ್ ಗಳಲ್ಲಿ ತರಕಾರಿ ಲೋಡ್ ಬರುತ್ತಿತ್ತು. ಆದರೆ, ಮಳೆಯಿಂದ 300 ಟ್ರಕ್ ಮಾತ್ರ ಮಾರುಕಟ್ಟೆ ತಲುಪುತ್ತಿವೆ. ಟೊಮ್ಯಾಟೋ 125 ಪ್ರತಿ ಕೆ.ಜಿ ಇದ್ದರೆ, ನುಗ್ಗೇಕಾಯಿ 100 ರು ಪ್ರತಿ ಕೆ.ಜಿ, ಬೆಂಡೇಕಾಯಿ 150 ರು ಪ್ರತಿ ಕೆ.ಜಿ, ಕ್ಯಾರೇಟ್ ಮತ್ತು ಹುರುಳಿಕಾಯಿ 120 ರು ಪ್ರತಿ 1 ಕೆ.ಜಿ ಯಂತೆ ನಗರ ಪ್ರದೇಶಗಳಲ್ಲಿ ಮಾರಾಟವಾಗುತ್ತಿರುವ ವರದಿ ಬಂದಿದೆ. ಮಳೆ ಪ್ರಮಾಣ ತಗ್ಗಿದ ಬಳಿಕ ಸರಕು ಸಾಗಣೆ ಎಂದಿನಂತಾದರೆ ಮಾತ್ರ ತರಕಾರಿ ಬೆಲೆ ತಗ್ಗಲು ಸಾಧ್ಯ ಎಂದು ಬೀದಿ ಬದಿ ತರಕಾರಿ ವ್ಯಾಪಾರಿಯೊಬ್ಬರು ಹೇಳಿದರು.
ಪ್ರವಾಹದ ಮುನ್ನೆಚ್ಚರಿಕೆ
ಭಾರಿ ಮಳೆ ಮುನ್ಸೂಚನೆಯಿಂದ 9 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಪರಿಗಣಿಸಿರುವ ಸ್ಟಾಲಿನ್ ಸರ್ಕಾರವು ನವೆಂಬರ್ 11 ರಂದು ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗೆಲ್ಪೇಟ್, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವರೂರು ಮತ್ತು ಮೈಲಾದುತುರೈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. 6 ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.