ಎಂ ಕರುಣಾನಿಧಿ ಮೊಮ್ಮಗ ಉದಯನಿಧಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜು
ಚೆನ್ನೈ, ಫೆಬ್ರವರಿ 26: ತಮಿಳುನಾಡು ವಿಧಾನಸಭೆ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಡಿಎಂಕೆ ಯಾವ ರೀತಿ ರಾಜಕೀಯ ತಂತ್ರ ಅನುಸರಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ, ದಿವಂಗತ ಎಂ ಕರುಣಾನಿಧಿ ಕ್ಷೇತ್ರದಿಂದ ಸ್ಪರ್ಧಿಸಲು ಅವರ ಮೊಮ್ಮಗ ಉದಯನಿಧಿ ಸ್ಟಾಲಿನ್ ಸಜ್ಜಾಗಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಚೇಪಾಕ್-ತಿರುವಲ್ಲಿಕೇನಿ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿರುವುದಾಗಿ ಘೋಷಿಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿ ಅಣ್ಣಾ ಅರಿವಾಲಯಂಗೆ ತೆರಳಿ ತಮ್ಮ ಸ್ಪರ್ಧೆ ಕುರಿತಂತೆ ಅಧಿಕೃತವಾಗಿ ಅರ್ಜಿ ಹಾಕಿದ್ದಾರೆ. 2011 ಹಾಗೂ 2016 ಚುನಾವಣೆಯಲ್ಲಿ ಡಿಎಂಕೆಯ ಜೆ ಅನ್ಬಳಗನ್ ಅವರು ಸ್ಪರ್ಧಿಸಿದ್ದರು.
ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಪುತ್ರ ನಟ-ನಿರ್ಮಾಪಕ ಉದಯನಿಧಿ ಅವರು ಸಿನಿಮಾ ಜೊತೆಗೆ ಸಕ್ರಿಯ ರಾಜಕೀಯದಲ್ಲೂ ತೊಡಗಿಕೊಂಡಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.
"ನಾನು ನನ್ನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಅರ್ಜಿ ಹಾಕಿದ್ದೇನೆ. ಪಕ್ಷದ ಪ್ರಧಾನ ಕಾರ್ಯದರ್ಶಿ ದೊರೈಮುರುಗನ್ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಂಡು, ಪ್ರಕಟಿಸಲಿದ್ದಾರೆ'' ಎಂದು 43 ವರ್ಷ ವಯಸ್ಸಿನ ಉದಯನಿಧಿ ಹೇಳಿದರು.
ಫೆಬ್ರವರಿ 17ರಿಂದ ಡಿಎಂಕೆಯಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಡಳಿತಾರೂಢ ಎಐಎಡಿಎಂಕೆ ಹಾಗೂ ಕಮಲ್ ಹಾಸನ್ ಅವರ ಮಕ್ಕಳ್ ನೀತಿ ಮೈಯಂ (ಎಂಎನ್ಎಂ) ಕೂಡಾ ಅರ್ಜಿ ಆಹ್ವಾನ ಮಾಡಿದ್ದು, ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ.
ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗೆ ಮುಂಬರುವ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದ್ದು, ಅಧಿಕೃತ ದಿನಾಂಕವನ್ನು ಚುನಾವಣಾ ಆಯೋಗ ಶೀಘ್ರದಲ್ಲೇ ಪ್ರಕಟಿಸಲಿದೆ.