ಬಿಜೆಪಿ ಮೈತ್ರಿಕೂಟಕ್ಕೆ ಸವಾಲು ಎಸೆದ ಒವೈಸಿ- ದಿನಕರನ್ ಮೈತ್ರಿ
ಚೆನ್ನೈ, ಮಾರ್ಚ್ 9: ತಮಿಳುನಾಡು ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಕೆ ಜೊತೆ ಮೈತ್ರಿ ಸಾಧಿಸಲು ಸಾಧ್ಯವಾಗದ ಟಿಟಿವಿ ದಿನಕರನ್ ಅವರಿಗೆ ಅಸಾಸುದ್ದೀನ್ ಒವೈಸಿ ಬೆಂಬಲ ಸಿಕ್ಕಿದೆ. ಬಿಹಾರದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಬೆಂಗಾಳ ಹಾಗೂ ತಮಿಳುನಾಡಿನತ್ತ ಒವೈಸಿ ಮುಖ ಮಾಡಿದ್ದಾರೆ.
ಎಐಎಡಿಎಂಕೆಯಿಂದ ಉಚ್ಚಾಟಿತರಾಗಿರುವ ಟಿಟಿವಿ ದಿನಕರನ್ ಈಗ ಶಶಿಕಲಾ ಬಲವನ್ನು ಕಳೆದುಕೊಂಡಿದ್ದಾರೆ. 2017ರಲ್ಲಿ ಆರ್ ಕೆ ನಗರ ವಿಧಾನಸಭಾ ಉಪ ಚುನಾವಣೆ ಗೆದ್ದಿರುವ ದಿನಕರನ್ ಜೊತೆ ಕೈ ಜೋಡಿಸಿರುವ ಒವೈಸಿ ತಮ್ಮ ಎಐಎಂಐಎಂ ಪಕ್ಷದಿಂದ ಮೂರು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ.
ವನಿಯಾಂಬಾಡಿ, ಕೃಷ್ಣಗಿರಿ ಹಾಗೂ ಶಂಕರಪುರಂ ಕ್ಷೇತ್ರದಲ್ಲಿ ಒವೈಸಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆದರೆ ಎಎಂಎಂಕೆ ಪರ ಒವೈಸಿ ಪ್ರಚಾರ ಕಾರ್ಯದಲ್ಲಿ ತೊಡಗುವುದರಿಂದ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.
ಎಐಎಡಿಎಂಕೆ ತನ್ನ ಮಿತ್ರ ಪಕ್ಷಗಳಾದ ಬಿಜೆಪಿಗೆ 20 ಹಾಗೂ ಪಿಎಂಕೆಗೆ 23 ಕ್ಷೇತ್ರಗಳನ್ನು ಹಂಚಿಕೆ ಮಾಡಿದೆ. ಇನ್ನೊಂದೆಡೆ ಡಿಎಂಕೆ-ಕಾಂಗ್ರೆಸ್ ಜೊತೆ ಎಡಪಕ್ಷಗಳು ಕಣದಲ್ಲಿವೆ. 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.