ಪನ್ನೀರ್ ಸೆಲ್ವಂ ಸೋದರನಿಗೆ ಕೊರೊನಾವೈರಸ್ ಸೋಂಕು
ಚೆನ್ನೈ, ಜೂನ್ 29: ತಮಿಳುನಾಡಿನ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರ ಸೋದರ ಓ ರಾಜ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಮದುರೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
Recommended Video
ತಮಿಳುನಾಡಿನಲ್ಲಿ ಶಾಸಕರು, ಪೊಲೀಸ್ ಪಡೆಗೆ ಕೊವಿಡ್ 19 ಸೋಂಕು ತಗುಲುತ್ತಿದ್ದು, ಈ ಬಗ್ಗೆ ತಜ್ಞರ ಸಮಿತಿಯಿಂದ ತಮಿಳುನಾಡಿನ ಸರ್ಕಾರ ವರದಿ ಕೇಳಿತ್ತು. ಕೊವಿಡ್ 19 ನಿಯಂತ್ರಣದ ಬಗ್ಗೆ ಶಿಫಾರಸ್ಸು ನೀಡಿರುವ ತಜ್ಞರ ಸಮಿತಿಯು, ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಅಗತ್ಯವಿಲ್ಲ ಎಂದಿದೆ.
ಥೇಣಿ ಜಿಲ್ಲೆಯ ಪೇರಿಯಕುಲಂ ಪಂಚಾಯಿತಿ ಅಧ್ಯಕ್ಷರಾಗಿದ್ದ ಓ ರಾಜ ನಂತರ ಸರ್ಕಾರಿ ಸ್ವಾಮ್ಯ ಆವಿನ್ ಸಹಕಾರಿ ಹಾಲು ಒಕ್ಕೂಟದ ಚುನಾವಣೆಯನ್ನು ಗೆದ್ದಿದ್ದರು. ಆದರೆ, ಪನ್ನೀರ್ ಸೆಲ್ವಂಗೆ ಇದು ಇಷ್ಟವಿಲ್ಲದ ಕಾರಣ ಎಐಎಡಿಎಂಕೆಯಿಂದ ಹೊರಹಾಕಲಾಗಿತ್ತು.
ತಮಿಳುನಾಡಿನಲ್ಲಿ ಡಿಎಂಕೆ ಶಾಸಕ ಕೆಎಸ್ ಮಸ್ತಾನ್ ಅವರಿಗೆ ಸೋಂಕು ತಗುಲಿದ್ದು ಡಾ ರೇಲಾ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಡಿಎಂಕೆಯ ಇನ್ನೂ ಮೂವರು ಶಾಸಕರಿಗೆ ಸೋಂಕು ತಗುಲಿದೆ.
ಚೆನ್ನೈನಲ್ಲಿ ಲಾಕ್ಡೌನ್ ನಿಂದಾಗಿ ವೈರಸ್ ಸೋಂಕು ಹರಡದಂತೆ ನಿಯಂತ್ರಣ ಹೊಂದಲಾಗಿದೆ. ಇದೇ ರೀತಿ ಹೆಚ್ಚಿನ ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್ ಜಾರಿಗೊಳಿಸಲು ವೈದ್ಯಾಧಿಕಾರಿಗಳು ಕೂಡಾ ಶಿಫಾರಸ್ಸು ಮಾಡಿದ್ದಾರೆ.
ಆನ್ ಲಾಕ್ 1.0 ಜಾರಿಗೆ ಬಂದ ಬಳಿಕ ಸಾರಿಗೆ ಸಂಪರ್ಕಕ್ಕೆ ಚಾಲನೆ ನೀಡಲಾಯಿತು. ಆದರೆ, ಸೋಂಕು ಹೆಚ್ಚಾದ ಕಾರಣ ಚೆನ್ನೈ, ಚೆಂಗಲ್ ಪೇಟ್, ತಿರುವಲ್ಲೂರ್, ಕಾಂಚೀಪುರಂನಲ್ಲಿ ಮತ್ತೆ ಲಾಕ್ಡೌನ್ ಜಾರಿಗೊಳಿಸಲಾಗಿದೆ.
ತಮಿಳುನಾಡಿನಲ್ಲಿ 86000 ಪ್ರಕರಣಗಳಿದ್ದು, ಚೆನ್ನೈನಲ್ಲಿ ಒಂದೇ ದಿನ ಅತ್ಯಧಿಕ 2167 ಕೇಸ್ ದಾಖಲಾಗಿವೆ. 24 ಗಂಟೆಗಳಲ್ಲಿ 62 ಸಾವು ಸಂಭವಿಸಿದ್ದು, ಒಟ್ಟಾರೆ 1141 ಮಂದಿ ಮೃತಪಟ್ಟಿದ್ದಾರೆ.