ತೂತುಕುಡಿ ಹಿಂಸಾಚಾರ: ಲಿಖಿತ ರೂಪದಲ್ಲಿ ಉತ್ತರಿಸಲು ನಟ ರಜನಿಕಾಂತ್ಗೆ ಆಯೋಗ ಸೂಚನೆ
ಚೆನ್ನೈ, ಫೆಬ್ರವರಿ 25: ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಸ್ಟೆರ್ಲೈಟ್ ಯೋಜನೆ ವಿರೋಧಿ ಹೋರಾಟದ ಮೇಲೆ ನಡೆದ ಪೊಲೀಸ್ ಗೋಲಿಬಾರ್ ಕುರಿತು ತನಿಖೆ ನಡೆಸುತ್ತಿರುವ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರುಣ ಜಗದೀಶನ್ ಎದುರು ನಟ, ರಾಜಕಾರಣಿ ರಜನಿಕಾಂತ್ ಪರ ವಕೀಲರು ಮಂಗಳವಾರ ಹಾಜರಾದರು.
ರಜನಿಕಾಂತ್ ಅವರ ಕಾನೂನು ಸಲಹೆಗಾರಾಗಿರುವ ವಕೀಲ ಇಲಂಪರುಡಿ ಏಕ ಸದಸ್ಯ ಆಯೋಗದ ಎದುರು ಹಾಜರಾದರು. ರಜನಿಕಾಂತ್ ಅವರಿಗೆ ಕೇಳಲಾಗಿರುವ ಕೆಲವು ಪ್ರಶ್ನೆಗಳನ್ನು ವಕೀಲರಿಗೆ ನೀಡಲಾಗಿದ್ದು, ಅವರು ಅದಕ್ಕೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.
ಸಿಎಎ ವಿಚಾರದಲ್ಲಿ ಡಬಲ್ ಗೇಮ್, ಮುಸ್ಲಿಂರಿಗೆ ನೋ ಪ್ರಾಬ್ಲಂ-ರಜನಿಕಾಂತ್
ಒಂದು ವೇಳೆ ಈ ಪ್ರಶ್ನೆಗಳಿಗೆ ಉತ್ತರಿಸಲು ರಜನಿಕಾಂತ್ ಅವರಿಗೆ ಸಾಧ್ಯವಾಗದೆ ಹೋದರೆ ಅವರು ವೈಯಕ್ತಿಕವಾಗಿ ಆಯೋಗದ ಮುಂದೆ ಹಾಜರಾಗಬೇಕಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಅರುಣ ಜಗದೀಶನ್ ಎಚ್ಚರಿಕೆ ನೀಡಿದರು.
ಈ ತಿಂಗಳ ಆರಂಭದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ವಿನಾಯಿತಿ ಕೋರಿದ್ದ ರಜನಿಕಾಂತ್, ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ತಮಿಳುನಾಡಿನಲ್ಲಿ ನಡೆಯುತ್ತಿರುವ ಸ್ಟೆರ್ಲೈಟ್ ವಿರೋಧಿ ಹೋರಾಟದಲ್ಲಿ ಸಮಾಜ ವಿದ್ರೋಹಿ ಅಂಶಗಳು ಸೇರಿಕೊಂಡಿರುವುದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ರಜನಿಕಾಂತ್ ಹೇಳಿದ್ದರು.
ಹಿಂದಿ ಹೇರಿಕೆ ಒಪ್ಪಲ್ಲ: ಸೂಪರ್ ಸ್ಟಾರ್ ರಜನಿಕಾಂತ್ ಖಡಕ್ ಮಾತು
ವೇದಾಂತ ಸ್ಟೆರ್ಲೈಟ್ ತಾಮ್ರ ಘಟಕದಿಂದ ಭಾರಿ ಪರಿಸರ ಮಾಲಿನ್ಯ ಆಗುತ್ತಿದೆ. ಹೀಗಾಗಿ ಈ ಘಟಕಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿ 2018ರ ಮೇ ತಿಂಗಳಲ್ಲಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ಗೆ 13 ಮಂದಿ ಮೃತಪಟ್ಟಿದ್ದರು.