ತೂತುಕುಡಿ ಲಾಕಪ್ ಡೆತ್ ಕೇಸ್ ಅಧಿಕೃತವಾಗಿ ಸಿಬಿಐಗೆ ಹಸ್ತಾಂತರ
ತೂತುಕುಡಿ, ಜೂನ್ 29: ಪೊಲೀಸ್ ದೌರ್ಜನ್ಯಕ್ಕೆ ಸಿಲುಕಿ ಕಸ್ಟಡಿಯಲ್ಲಿರುವಾಗ ತಂದೆ-ಮಗ ಮೃತಪಟ್ಟ ಪ್ರಕರಣದ ತನಿಖೆಯನ್ನು ಇಂದು ಅಧಿಕೃತವಾಗಿ ಸಿಬಿಐಗೆ ವಹಿಸಲಾಗಿದೆ ಎಂದು ಸಿಎಂ ಪಳನಿಸ್ವಾಮಿ ಸರ್ಕಾರ ಪ್ರಕಟಿಸಿದೆ.
ಈ ಪ್ರಕರಣವನ್ನು ಕೋವಿಲ್ ಪಟ್ಟಿ ಪೂರ್ವ ಪೊಲೀಸ್ ಠಾಣೆಯಿಂದ ಕೇಂದ್ರ ತನಿಖಾ ಸಂಸ್ಥೆ ಸಿಬಿಐಗೆ ವಹಿಸಲಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಗೆ ತಿಳಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ತೂತುಕುಡಿ ಲಾಕಪ್ ಡೆತ್ ಕೇಸ್ ಹಿಸ್ಟರಿ
ಕೊರೊನಾವೈರಸ್ ಸೋಂಕು ಹರಡದಂತೆ ಮತ್ತೊಮ್ಮೆ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು. ಜಯರಾಜ್ ಹಾಗೂ ಬೆನಿಕ್ಸ್ ಎಂಬುವರು ಸಾತ್ತಾನ್ ಕುಳಂನಲ್ಲಿ ಟಿಂಬರ್ ಶಾಪ್ ಹಾಗೂ ಮೊಬೈಲ್ ಶಾಪ್ ಹೊಂದಿದ್ದರು. ಜೂನ್ 18ರಂದು ಕರ್ಫ್ಯೂ ಉಲ್ಲಂಘಿಸಿ ಅಂಗಡಿ ತೆರೆದಿದ್ದರು.
Tuticorin custodial death case: Tamil Nadu Govt has issued an order to transfer the case registered at Kovilpatti East Police Station for investigation by Central Bureau of Investigation (CBI) pic.twitter.com/5g7v1eHna8
— ANI (@ANI) June 29, 2020
ಲಾಕ್ಡೌನ್ ನಿಯಮ ಉಲ್ಲಂಘಿಸಿ 15 ನಿಮಿಷಗಳ ಕಾಲ ತಮ್ಮ ಅಂಗಡಿ ತೆರೆದಿದ್ದರು ಎಂದು ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಜೂನ್ 20ರಂದು ಇಬ್ಬರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಇಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಜೂನ್ 22ರಂದು ಕೋವಿಲ್ ಪಟ್ಟಿ ಸಬ್ ಜೈಲಿನಲ್ಲಿದ್ದ ಇಬ್ಬರು ಅಸ್ವಸ್ಥರಾಗಿರುವುದು ತಿಳಿದು ಬಂದಿತು. ಅಪ್ಪ ಮಗ ಇಬ್ಬರು ಎರಡು ದಿನಗಳಲ್ಲಿ ಇನ್ನಿಲ್ಲವಾದರು. ಇದು ಪೊಲೀಸರಿಂದ ನಡೆದ ಹತ್ಯೆ ಎಂದು ಬೆನ್ಸಿಕ್ ಪರ ವಕೀಲ ಮಣಿಮಾರನ್ ವಾದಿಸಿದ್ದಾರೆ.
ಕೋರ್ಟ್ ಸೂಚನೆಯಂತೆ ಜೂನ್ 25ರಂದು ಜಯರಾಜ್ ಹಾಗೂ ಬೆನ್ಸಿಕ್ ಮರಣೋತ್ತರ ಪರೀಕ್ಷೆ ನಡೆಸಿ, ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ಸದ್ಯ ಮದುರೈ ಪೀಠವು ನ್ಯಾಯಾಂಗ ತನಿಖೆಗೆ ಸೂಚನೆ ನೀಡಿ, ಜೂನ್ 30ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ. ಈ ನಡುವೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಕೇಂದ್ರ ತನಿಖಾ ತಂಡ ಸಿಬಿಐಗೆ ಪ್ರಕರಣದ ತನಿಖೆ ವಹಿಸಲಾಗಿದೆ.