ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!
ಚೆನ್ನೈ, ಆಗಸ್ಟ್ 09 : ಸೇಲಂನಿಂದ ಚೆನ್ನೈಗೆ ಹೋಗುತ್ತಿದ್ದ ಸೇಲಂ-ಚೆನ್ನೈ ಎಕ್ಸ್ ಪ್ರೆಸ್ ರೈಲಿನಿಂದ ಸಿನಿಮೀಯ ರೀತಿಯಲ್ಲಿ ಕೋಟಿಕೋಟಿ ಹಣವನ್ನು ಲೂಟಿ ಹೊಡೆದಿರುವ ಪ್ರಕರಣವನ್ನು ಭೇದಿಸುವುದು ಚೆನ್ನೈ ಪೊಲೀಸರಿಗೆ ಚಿದಂಬರ ರಹಸ್ಯವಾಗಿ ಪರಿಣಮಿಸಿದೆ.
ಪಾರ್ಸೆಲ್ ವ್ಯಾನ್ ಬೋಗಿಯ ಮೇಲ್ಭಾಗದಲ್ಲಿ ಎರಡು ಅಡಿಗಳಷ್ಟು ದೊಡ್ಡದಾಗಿ ರಂಧ್ರ ಕೊರೆದಿರುವ ಚಾಲಾಕಿ ಲೂಟಿಕೋರರು, 16 ಕಟ್ಟಿಗೆಯ ಪೆಟ್ಟಿಗೆಗಳಿಂದ ಸುಮಾರು 5.75 ಕೋಟಿ ರು.ನಷ್ಟು ನೋಟುಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ತಮಾಷೆ ಅಂದ್ರೆ, ಈ ಬೋಗಿಗಳಲ್ಲಿ ಭದ್ರತಾ ಸಿಬ್ಬಂದಿಗಳೇ ಇರಲಿಲ್ಲ!
ಸೇಲಂ-ಚೆನ್ನೈ ಎಕ್ಸ್ ಪ್ರೆಸ್ ರೈಲಿನಲ್ಲಿ 325 ಕೋಟಿ ರು.ನಷ್ಟು ಸವಕಳಿಯಾದ, ಚಲಾವಣೆಗೆ ಬಾರದ ಹಳೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚೆನ್ನೈಗೆ ತರುತ್ತಿತ್ತು. ಮೂರು ಪಾರ್ಸೆಲ್ ಬೋಗಿಗಳು ಸೇರಿದಂತೆ ರೈಲಿನಲ್ಲಿ ಒಟ್ಟು 19 ಬೋಗಿಗಳಿವೆ.
ಎರಡು ಪಾರ್ಸೆಲ್ ಬೋಗಿಗಳಲ್ಲಿ, 225 ಕಟ್ಟಿಗೆಯ ಪೆಟ್ಟಿಗೆಗಳಲ್ಲಿ 325 ಕೋಟಿ ರು. ಮೌಲ್ಯದ ಹಳೆಯದಾದ, ಹರಿದುಹೋದ ನೋಟುಗಳನ್ನು ನಾಶ ಮಾಡಲೆಂದು ಚೆನ್ನೈಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತರುತ್ತಿತ್ತು. ಈ ಸಂದರ್ಭದಲ್ಲಿ ಗ್ರೇಟ್ ರಾಬರಿ ಜರುಗಿಹೋಗಿದೆ. [ರೈಲಿನಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ರು. ಹಣ ದರೋಡೆ!]
ಭದ್ರತಾ ಸಿಬ್ಬಂದಿಯೂ ಇರಲಿಲ್ಲವಂತೆ
ಅಚ್ಚರಿಯ ಸಂಗತಿಯೆಂದರೆ, ಇಷ್ಟೊಂದು ಮೊತ್ತದ ಹಣ ತರುತ್ತಿದ್ದರೂ ಪಾರ್ಸೆಲ್ ಬೋಗಿಯಲ್ಲಿ ಯಾವ ಭದ್ರತಾ ಸಿಬ್ಬಂದಿಯೂ ಇರಲಿಲ್ಲವಂತೆ.
ಓರ್ವ ವ್ಯಕ್ತಿ ಅತ್ಯಂತ ಸರಾಗವಾಗಿ ಇಳಿಯಬಹುದಿತ್ತು
ರಂಧ್ರವನ್ನು ಎಷ್ಟು ದೊಡ್ಡದಾಗಿ ಕೊರೆಯಲಾಗಿತ್ತೆಂದರೆ, ಓರ್ವ ವ್ಯಕ್ತಿ ಅತ್ಯಂತ ಸರಾಗವಾಗಿ ಇಳಿಯಬಹುದಿತ್ತು ಮತ್ತು ಹತ್ತಿ ಹೋಗಬಹುದಿತ್ತು. ಅಷ್ಟು ದೊಡ್ಡ ರಂಧ್ರ ಕೊರೆಯುತ್ತಿದ್ದಾಗ ಯಾರಿಗೂ ಗೊತ್ತಾಗಲಿಲ್ಲವೆ?
ದರೋಡೆ ನಡೆದಿರುವುದು ಎಲ್ಲಿ?
ಗ್ರಾಂಡ್ ರಾಬರಿಯನ್ನು ರೈಲು ಚಲಿಸುತ್ತಿರುವಾಗ ಮಾಡಲಾಗಿದೆಯೋ ಅಥವಾ ಯಾವುದಾದರೂ ಸ್ಟೇಷನ್ನಿನಲ್ಲಿ ನಿಲ್ಲಿಸಿದಾಗ ಮಾಡಲಾಗಿದೆಯೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದರಲ್ಲಿ ಯಾರ ಕೈವಾಡ ಇರಬಹುದು ಎಂಬ ಬಗ್ಗೆ ತನಿಖೆ ನಡೆದ ನಂತರವೇ ತಿಳಿದುಬರಲಿದೆ.
ಬೆರಳಚ್ಚು ತಜ್ಞರು ಬರಲು ತಡವಾಗಿದ್ದೇಕೆ?
ದರೋಡೆ ನಡೆದಿದ್ದು ಅಂದಾಜು ಬೆಳಿಗ್ಗೆ 4 ಗಂಟೆಗೆ, ಗಮನಕ್ಕೆ ಬಂದಿದ್ದು ಬೆಳಿಗ್ಗೆ 11 ಗಂಟೆಗೆ. ಆದರೆ, ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಸಿದ್ದು ಸಂಜೆ 4 ಗಂಟೆಗೆ!ಬೆರಳಚ್ಚು ತಜ್ಞರು ಬರಲು ತಡವಾಗಿದ್ದೇಕೆ?
ಈ ನೋಟುಗಳು ಚಲಾವಣೆಗೆ ಬರಬಹುದು, ಎಚ್ಚರ
ನೋಟುಗಳು ಹಳೆಯದಾಗಿದ್ದರೂ ಚಲಾವಣೆಗೆ ಬರಬಹುದೆಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸತ್ಯಮೂರ್ತಿ ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.