ನ್ಯಾಯಾಲಯವನ್ನೂ ಭಾವುಕವಾಗಿಸಿದ ಟೆಕ್ಕಿ ಶುಭಶ್ರೀ ದಾರುಣ ಸಾವು
Recommended Video
ಚೆನ್ನೈ, ಸೆಪ್ಟೆಂಬರ್ 16: ಎಂಥ ದಾರುಣ ಘಟನೆಯ ವಿಚಾರಣೆ ಮಾಡುವಾಗಲೇ ಆದರೂ ಕೋರ್ಟುಗಳು ಕಣ್ಣೀರು ಹಾಕುವುದಿಲ್ಲ. ಆದರೆ ಶುಭಶ್ರಿಯ ಸಾವು ಕೋರ್ಟಿನ ನಿರ್ಲಪ್ತತೆಯನ್ನೇ ಸೋಲಿಸಿದೆ. ಬಟ್ಟೆ ಕಟ್ಟಿದ್ದ ನ್ಯಾಯದೇವತೆಯ ಕಣ್ಣಲ್ಲೂ ನೀರು ಒಸರಿಸಿದೆ!
"ಈ ದೇಶದಲ್ಲಿ ಜೀವಕ್ಕೆ ಬೆಲೆ ಇಲ್ಲವೇ?" ಎಂದು ಕೇಳಿ, ಶುಭಶ್ರೀ ಸಾವಿಗೆ ಮದ್ರಾಸ್ ಹೈಕೋರ್ಟ್ ಮರುಗಿದೆ. "ಸರ್ಕಾರಕ್ಕೆ ಇನ್ನೆಷ್ಟು ಸಾವುಗಳನ್ನು ನೋಡುವ ಆಸೆಯಿದೆ?" ಎಂದೂ ಪ್ರಶ್ನಿಸುವ ಮೂಲಕ ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್ ಗಳ ಬಗ್ಗೆ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ
ಅಕ್ರಮ ಫ್ಲೆಕ್ಸ್ ಗಳಿಂದ ಆಗುತ್ತಿರುವ ಹಾನಿಯನ್ನು ಮನಗಂಡು ಹಲವು ರಾಜ್ಯಗಳು ಅವನ್ನು ನಿಷೇಧಿಸಿವೆ. ಆದರೆ ಕಾನೂನು ಸೃಷ್ಟಿಸುವವರೇ, ಕಾನೂನನ್ನು ಮುರಿದರೆ ಹೇಗೆ ಎಂದು ಪ್ರಶ್ನಿಸಿರುವ ನ್ಯಾಯಾಲಯ ಈ ಕೂಡಲೇ ಅಕ್ರಮ ಬ್ಯಾನರ್, ಹೋರ್ಡಿಂಗ್ಸ್ ಗಳನ್ನು ನಿಷೇಧಿಸಿ, ಸಂತ್ರಸ್ಥೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದಿದೆ.
ಅಸಹ್ಯ ವ್ಯಕ್ತಪಡಿಸಿದ ಕೋರ್ಟ್!
"ನಿಮ್ಮ ಸರ್ಕಾರದ ಮೇಲೆ ನಾವು ಯಾವ ನಂಬಿಕೆಯನ್ನೂ ಉಳಿಸಿಕೊಂಡಿಲ್ಲ, ಛೆ...! ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಗೊತ್ತಿಲ್ಲ. ಆದರೆ ಸಂತ್ರಸ್ಥೆಯ ಕುಟುಂಬಕ್ಕೆ ಪರಿಹಾರ ನೀಡಿ ಸುಮ್ಮನಾದರೆ ಸಾಲದು. ಈ ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಕೂಡಲೆ ನಿಷೇಧಿಸುವುದು ಸರ್ಕಾರದ ಕರ್ತವ್ಯ. ಈ ದೇಶದಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲತೆ ಸೃಷ್ಟಿಸುವಂಥ, ಪ್ರಾಣಹಾನಿಯಾಗುವಂಥ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂಬ ಸಂಕಲ್ಪವನ್ನು ಸರ್ಕಾರ ಮಾಡಲಿ" ಎಂದು ಕೋರ್ಟು ಖಡಕ್ಕಾಗಿ ಹೇಳಿದೆ. ನ್ಯಾಯಾಲಯದ ಮಾತಿನ ಹಿಂದೆ ಆದೇಶಕ್ಕಿಂತ ಹೆಚ್ಚಾಗಿ ಸರ್ಕಾರದ ಬಗೆಗಿನ ಅಸಹ್ಯ ಭಾವವೇ ಢಾಳಾಗಿ ಕಾಣಿಸುತ್ತಿದೆ!
ಶುಭಶ್ರೀ ದಾರುಣ ಸಾವು
ಸೆಪ್ಟೆಂಬರ್ 12 ರಂದು ಸಂಜೆ ಶುಭಶ್ರೀ ಎಂಬ 23 ವರ್ಷ ವಯಸ್ಸಿನ ಸಾಫ್ಟ್ ವೇರ್ ಇಂಜಿನಿಯರ್ ಆಫೀಸಿನಿಂದ ಮನೆಗೆ ಮರಳುತ್ತಿದ್ದ ವೇಳೆಯಲ್ಲಿ ರಸ್ತೆ ಬದಿಯಲ್ಲಿ ಹಾಕಿದ್ದ ಅಕ್ರಮ ಬ್ಯಾನರ್ ಆಕೆಯ ಮೇಲೆ ಬಿದ್ದು, ಅದೇ ಹೊತ್ತಿಗೆ ಟ್ರಕ್ ವೊಂದು ಆಕೆಯ ಮೇಲೆ ಹರಿದ ಪರಿಣಾಮ ದಾರುಣ ಸಾವು ಕಂಡಿದ್ದರು.
ಫ್ಲೆಕ್ಸ್ ಬಿದ್ದು, ಟ್ಯಾಂಕರ್ ಗುದ್ದಿ ಚೆನ್ನೈಯಲ್ಲಿ ಟೆಕ್ಕಿ ದುರಂತ ಸಾವು
2017 ರಲ್ಲೂ ಇಂಥದೇ ಘಟನೆ
2017 ರ ನವೆಂಬರ್ ನಲ್ಲಿ ಮೂವತ್ತು ವರ್ಷ ವಯಸ್ಸಿನ ಇಂಜಿನಿಯರ್ ಒಬ್ಬರು ಫ್ಲೆಕ್ಸ್ ಬಿದ್ದು ಇದೇ ರೀತಿ ಜೀವ ಕಳೆದುಕೊಂಡಾಗ ಅಕ್ರಮ ಫ್ಲೆಕ್ಸ್, ಹೋರ್ಡಿಂಗ್ಸ್ ಗಳನ್ನು ಸರ್ಕಾರ ನಿಷೇಧಿಸಿತ್ತು. ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿದ್ದ ಫ್ಲೆಕ್ಸ್ ಬಿದ್ದ ಪರಿಣಾಮ ಟೆಕ್ಕಿ ರಸ್ತೆಗೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಟ್ರಕ್ ವೊಂದು ವೇಗವಾಗಿ ಬಂದು ಅವರ ಮೇಲೆ ಹರಿದ ಪರಿಣಾಮ ಸಾವನ್ನಪ್ಪಿದ್ದರು. ಆದರೆ 2017 ರ ಈ ಘಟನೆಯ ನಂತರ ಅಕ್ರಮ ಫ್ಲೆಕ್ಸ್ ಗಳನ್ನು ಬ್ಯಾನ್ ಮಾಡಿದ್ದರೂ, ರಾಜಕಾರಣಿಳು ಮತ್ತು ಅವರ ಬೆಂಬಲಿಗರೇ ಈ ಬ್ಯಾನರ್ ಸಂಸ್ಕೃತಿಯನ್ನು ಬಿಟ್ಟಿಲ್ಲ!
ಬೇಲಿಯೇ ಎದ್ದು ಹೊಲ ಮೇಯ್ದು...
2018 ರ ಡಿಸೆಂಬರ್ ನಲ್ಲಿಯೂ 'ಯಾವುದೇ ರಾಜಕೀಯ ಪಕ್ಷವಾಗಲೀ, ಅಥವಾ ಯಾರೇ ಆಗಲೀ ಈ ರೀತಿ ಅಕ್ರಮ ಫ್ಲೆಕ್ಸ್ ಗಳನ್ನು ಹಾಕುವಂತಿಲ್ಲ' ಎಂದು ಕೋರ್ಟು ಆದೇಶ ನೀಡಿತ್ತು. ಆದರೆ ಎಐಎಡಿಎಂಕೆ ಮುಖಂಡನೇ ತನ್ನ ಪುತ್ರನ ಮದುವೆಯ ಶುಭಾಶಯ ಕೋರುವ ಸಲುವಾಗಿ ಹಾಕಿದ್ದ ಈ ಅಕ್ರಮ ಬ್ಯಾನರ್ ತಂದೆ-ತಾಯಿಗೆ ಒಬ್ಬಳೇ ಮಗಳಾಗಿದ್ದ ಶುಭಶ್ರೀಯ ಪ್ರಾಣ ಕಿತ್ತುಕೊಂಡಿದೆ. ಹೀಗೆ ಕಾನೂನು ನಿರ್ಮಿಸುವವರೇ, ಉಲ್ಲಂಘಿಸಿದರೆ ಅಂಥವರಿಗೆ ಶಿಕ್ಷೆಯಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶುಭಶ್ರೀ ದುರಂತದ ಬಳಿಕ ಚೆನ್ನೈನಲ್ಲಿ ಒಂದೇ ದಿನದಲ್ಲಿ ಹೋರ್ಡಿಂಗ್ಸ್ ಮಾಯ!