ಆದಾಯ ತೆರಿಗೆ ವಂಚನೆ ಕೇಸ್: ಕಾರ್ತಿ ಚಿದಂಬರಂಗೆ ಸಿಹಿ ಸುದ್ದಿ
ಚೆನ್ನೈ, ಡಿ. 14: ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಹಾಗೂ ಅವರ ಪತ್ನಿಗೆ ಸೋಮವಾರ ಶುಭ ಸುದ್ದಿ ಸಿಕ್ಕಿದೆ. ಆದಾಯ ತೆರಿಗೆ ವಂಚನೆ ಪ್ರಕರಣದಿಂದ ಇಬ್ಬರನ್ನು ಖುಲಾಸೆಗೊಳಿಸಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ತಮಿಳುನಾಡಿನ ಮುತ್ತುಕಾಡು ಎಂಬಲ್ಲಿ ಜಮೀನು ಮಾರಾಟದ ಬಗ್ಗೆ ಕಾರ್ತಿ ಚಿದಂಬರಂ ಹಾಗೂ ಅವರ ಪತ್ನಿ ಐಟಿ ರಿಟರ್ನ್ಸ್ ವೇಳೆ ನಮೂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ 1.35 ಕೋಟಿ ರೂ. ನಗದು ಪಡೆದಿರುವ ಕಾರ್ತಿ ಚಿದಂಬರಂ ಅವರು ವಂಚನೆ ಮಾಡಿದ್ದಾರೆ ಹಾಗೂ ಅವರ ಪತ್ನಿ ಶ್ರೀನಿಧಿ 6.38 ಕೋಟಿ ರು ನಗದು ಹಣ ಪಡೆದಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿತ್ತು. ಒಟ್ಟಾರೆ, 7.73 ಕೋಟಿ ರುಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ವಾದಿಸಿತ್ತು.
ಮೊದಲಿಗೆ ಈ ಪ್ರಕರಣವನ್ನು ಚೆನ್ನೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕೈಗೆತ್ತಿಕೊಂಡಿತ್ತು ನಂತರ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಈ ವಿಶೇಷ ನ್ಯಾಯಾಲಯದಲ್ಲಿ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ತಡೆ ಕೋರಿ ಕಾರ್ತಿ ಚಿದಂಬರಂ ಅವರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿವಾದಿತ 2015-16ರ ಐಟಿ ರಿಟರ್ನ್ಸ್ ದಾಖಲೆ ಪರಿಶೀಲನೆ ನಡೆಸಿತ್ತು. ಆದರೆ, ಪ್ರಕರಣ ದಾಖಲು ಹಾಗೂ ದಾಖಲೆ ಒದಗಿಸುವಲ್ಲಿ ತನಿಖಾ ಸಂಸ್ಥೆ ವಿಫಲವಾಗಿದ್ದರಿಂದ ಕಾರ್ತಿ ಪರವಾಗಿ ಆದೇಶ ನೀಡಲಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 153ರಂತೆ ದೂರು ದಾಖಲಿಸುವುದು, ಪ್ರಕರಣ ದಾಖಲಿಸುವ ಅಧಿಕಾರಿ ಬದಲಿಗೆ ತನಿಖಾ ಸಂಸ್ಥೆಯ ಉಪ ನಿರ್ದೇಶಕರು ಪ್ರಕರಣದಲ್ಲಿ ಮುಂದಾಳತ್ವ ವಹಿಸಿಕೊಂಡಿದ್ದರು. ಸರಿಯಾದ ಕ್ರಮ ಅನುಸರಿಸದ ಕಾರಣ, ಕಾರ್ತಿ ಅವರ ವಿರುದ್ಧದ ತನಿಖೆ ರದ್ದುಗೊಳಿಸುವಂತೆ ಜಸ್ಟೀಸ್ ಎನ್ ಸತೀಶ್ ಕುಮಾರ್ ಆದೇಶದಲ್ಲಿ ಹೇಳಿದರು.