ತಮಿಳುನಾಡಿನಲ್ಲಿ ಪೊಂಗಲ್: ಕೊವಿಡ್-19 ಭೀತಿ ನಡುವೆ ಜಲ್ಲಿಕಟ್ಟು ಸ್ಪರ್ಧೆ
ಚೆನ್ನೈ, ಜನವರಿ.14: ತಮಿಳುನಾಡಿನಲ್ಲಿ ಸಾಂಪ್ರಾದಾಯಕ ಹಬ್ಬವನ್ನು ಭರ್ಜರಿಯಾಗಿ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನೇ ನೆರೆ ರಾಜ್ಯದಲ್ಲಿ ಪೊಂಗಲ್ ಹಬ್ಬವಾಗಿ ಆಚರಿಸಲಾಗುತ್ತದೆ. ಕೊರೊನಾವೈರಸ್ ನಿಬಂಧನೆಗಳ ನಡುವೆ ಮಧುರೈನ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗಿದೆ.
ಕೊವಿಡ್-19 ಸೋಂಕು ಹರಡುವಿಕೆ ಆತಂಕದ ನಡುವೆ ಅವನಿಯಪುರಂನಲ್ಲಿ ಮಾಸ್ಕ್ ತೊಟ್ಟು ಜಲ್ಲಿಕಟ್ಟು ಸ್ಪರ್ಧೆ ವೀಕ್ಷಿಸುವುದಕ್ಕೆ ನೂರಾರು ಜನರು ಸೇರಿದ್ದಾರೆ. ಕಳೆದ ವರ್ಷ ತಮಿಳುನಾಡು ಸರ್ಕಾರವು ಕೆಲವು ಷರತ್ತುಗಳೊಂದಿಗೆ ಜಲ್ಲಿಕಟ್ಟು ಸ್ಪರ್ಧೆ ನಡೆಸಲು ಅನುಮತಿ ಪಡೆದುಕೊಂಡಿತ್ತು.
ಜಲ್ಲಿಕಟ್ಟು ವೀಕ್ಷಿಸಲು ತಮಿಳುನಾಡಿಗೆ ಬರಲಿರುವ ರಾಹುಲ್ ಗಾಂಧಿ
ತಮಿಳುನಾಡಿನ ಅವನಿಯಪುರಂನಲ್ಲಿ ಈ ಬಾರಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಇನ್ನು, ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಇದರ ಶೇ.50ರಷ್ಟು ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ. ಇದರ ಜೊತೆಗೆ ಜಲ್ಲಿಕಟ್ಟು ಸ್ಪರ್ಧೆಗೆ ತೆರಳುವ ಪ್ರತಿಯೊಬ್ಬರು ಕೊವಿಡ್-19 ನೆಗೆಟಿವ್ ವರದಿಯನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.
ಜಲ್ಲಿಕಟ್ಟು ನಿರ್ಬಂಧಿಸಿದ್ದ ಸುಪ್ರೀಂಕೋರ್ಟ್:
ಕಳೆದ 2014ರಲ್ಲಿ ಜಲ್ಲಿಕಟ್ಟು ಸ್ಪರ್ಧೆ ವಿರುದ್ಧ ಭಾರತೀಯ ಪಶು ಸಂರಕ್ಷಣಾ ಮಂಡಳಿ ಮತ್ತು ಪೇಟಾ ಸಂಸ್ಥೆಗಳು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
2017ರ ಜನವರಿಯಲ್ಲಿ ಚೆನ್ನೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಪರವಾಗಿ ಹೋರಾಟ ತೀವ್ರಗೊಂಡಿತು. ತಮಿಳುನಾಡಿನ ಪೊಂಗಲ್ ಹಬ್ಬದಲ್ಲಿ ಜಲ್ಲಿಕಟ್ಟು ಒಂದು ಸಾಂಪ್ರಾದಾಯಕ ಕ್ರೀಡೆ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿತ್ತು. ತದನಂತರ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸುವುದಕ್ಕೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿತು.