ರಜನೀಕಾಂತ್ ಪತ್ನಿ ವಿರುದ್ಧ ವಂಚನೆ ಪ್ರಕರಣ ವಿಚಾರಣೆಗೆ ಸುಪ್ರೀಂ ಸೂಚನೆ
ಚೆನ್ನೈ, ಜುಲೈ 10: ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಪತ್ನಿ ಲತಾ ಅವರು ವಂಚನೆ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸಬೇಕಾಗಿದೆ. ಜಾಹೀರಾತು ಸಂಸ್ಥೆಯೊಂದಕ್ಕೆ 6.20 ಕೋಟಿ ರುಪಾಯಿ ಪಾವತಿಸಲು ಆಕೆ ವಿಫಲರಾಗಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿ, ಚಾರ್ಜ್ ಶೀಟ್ ದಾಖಲಿಸಿದ ಮೇಲೆ ವಿಚಾರಣೆ ನಡೆಸುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ಹೇಳಿದೆ.
ಲತಾ ರಜನೀಕಾಂತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ಕರ್ನಾಟಕ ಹೈ ಕೋರ್ಟ್ ರದ್ದು ಮಾಡಿತ್ತು. ಇದೀಗ ಕರ್ನಾಟಕ ಹೈ ಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಅಮಾನ್ಯ ಮಾಡಿದೆ. "ಅದು ಒಪ್ಪಂದದ ಉಲ್ಲಂಘನೆಯೇ ವಿನಾ ವಂಚನೆ ಪ್ರಕರಣವಲ್ಲ" ಎಂದು ಹೈ ಕೋರ್ಟ್ ಹೇಳಿತ್ತು.
ವಂಚನೆ ಪ್ರಕರಣ: ಲತಾ ರಜನಿಕಾಂತ್ ವಿರುದ್ಧ ಎಫ್ ಐಆರ್
ಆರಂಭದ ಹಂತದಲ್ಲೇ ದೂರನ್ನು ಹೈ ಕೋರ್ಟ್ ರದ್ದು ಮಾಡಬಾರದಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣವು 2014ರಲ್ಲಿ ರಜನೀಕಾಂತ್ ಸಿನಿಮಾವೊಂದಕ್ಕೆ ಸಂಬಂಧಪಟ್ಟಿದ್ದು. ಸಂಸ್ಥೆಯು ತಮಿಳುನಾಡಿನ ಸಿನಿಮಾ ವಿತರಣೆ ಹಕ್ಕನ್ನು ಎಕ್ಸ್ ಕ್ಲೂಸಿವ್ ಆಗಿ ನೀಡಿತ್ತು. ಆ ನಂತರ ಪೂರ್ತಿಯಾಗಿ ಹಣ ಪಾವತಿ ಮಾಡಿಲ್ಲ ಎಂದು ಆರೋಪಿಸಿ, ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟ್ ಫೆಬ್ರವರಿಯಲ್ಲಿ ಬಾಕಿ ಹಣವನ್ನು ಪಾವತಿಸುವಂತೆ ಆದೇಶ ನೀಡಿತ್ತು. ಬಾಕಿ ಮೊತ್ತ ಪಾವತಿಸುವುದಾಗಿ ಲತಾ ರಜನೀಕಾಂತ್ ಕೂಡ ಮಾತು ಕೊಟ್ಟಿದ್ದರು.