ಮದುವೆಗೆ ನಿರಾಕರಿಸಿದ್ದಕ್ಕೆ ಶಾಲೆಯಲ್ಲೇ ಟೀಚರ್ ಕತ್ತುಕೊಯ್ದ ದುಷ್ಕರ್ಮಿ
ಚೆನ್ನೈ, ಫೆಬ್ರವರಿ 22: ಮದುವೆಗೆ ನಿರಾಕರಿಸಿದ್ದಕ್ಕೆ ಖಾಸಗಿ ಶಾಲೆಯ ಶಿಕ್ಷಕಿಯನ್ನು ದುಷ್ಕರ್ಮಿಯೊಬ್ಬ ಶಾಲಾ ಕೊಠಡಿಯಲ್ಲಿಯೇ ಕತ್ತು ಕತ್ತರಿಸಿ ಕೊಂದ ಆಘಾತಕಾರಿ ಘಟನೆ ತಮಿಳುನಾಡಿನ ಕಡ್ಡಲೋರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ವಿರುಧಾಗಿರಿಕುಪ್ಪಂ ಪ್ರದೇಶದವನಾದ ರಾಜಶೇಖರ್ (24) ಎಂಬಾತ ಗಾಯತ್ರಿ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಎಸ್. ರಮ್ಯಾ ಎಂಬುವವರನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಕಾಲೇಜು ದಿನಗಳಿಂದ ಬಲ್ಲ ಆತ, ಮದುವೆ ಮಾಡಿಕೊಡುವಂತೆ ರಮ್ಯಾ ಪೋಷಕರಿಗೆ ದುಂಬಾಲು ಬಿದ್ದಿದ್ದ. ಆದರೆ, ಆಕೆಯ ಪೋಷಕರು ನಿರಾಕರಿಸಿದ್ದರು. ಇದರಿಂದ ರಾಜಶೇಖರ್ ಕುಪಿತನಾಗಿದ್ದ ಎನ್ನಲಾಗಿದೆ.
ಪತ್ನಿ ಕೊಂದು ಜೈಲಿಗೆ ಹೋಗಿದ್ದವ ಪರಾರಿಯಾಗಿ ಗೆಳತಿ ಕೊಂದ
ರಮ್ಯಾ ಶಾಲೆಗೆ ಬೇರೆ ಸಿಬ್ಬಂದಿಗಿಂತಲೂ ಬೇಗನೆ ಬರುತ್ತಿದ್ದರು. ಇದನ್ನು ಅರಿತಿದ್ದ ರಾಜಶೇಖರ್ ಶಾಲೆ ಪ್ರವೇಶಿಸಿದ್ದಾನೆ. ಕೊಠಡಿಯೊಂದರಲ್ಲಿ ಒಂಟಿಯಾಗಿ ಕುಳಿತಿದ್ದ ರಮ್ಯಾ ಜೊತೆ ವಾಗ್ವಾದ ನಡೆಸಿದ್ದಾನೆ. ಬಳಿಕ ಹರಿತವಾದ ಆಯುಧ ತೆಗೆದುಕೊಂಡು ಅವರ ಕತ್ತು ಮತ್ತು ಮುಖ ಕತ್ತರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 8.30ರ ವೇಳೆಗೆ ಈ ಘಟನೆ ನಡೆದಿದೆ. ಶಾಲೆ ಆರಂಭವಾಗಲು ಸಮಯವಿದ್ದಿದ್ದರಿಂದ ಅಲ್ಲಿ ಸಿಬ್ಬಂದಿ ಕೂಡ ಯಾರೂ ಇರಲಿಲ್ಲ ಎನ್ನಲಾಗಿದೆ.
ಸುಳ್ಯ ಬಳಿ ಕುಡಿದ ಮತ್ತಿನಲ್ಲಿ ತಾಯಿಯ ಹತ್ಯೆಗೈದ ಪುತ್ರನ ಬಂಧನ
ಕೊಠಡಿ ಸ್ವಚ್ಛಗೊಳಿಸಲು ಬಂದ ಕೆಲಸದವರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮ್ಯಾ ಅವರ ದೇಹ ಕಂಡುಬಂದಿದೆ. ಕೂಡಲೇ ಅವರು ಶಾಲೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಆರೋಪಿಯ ಪತ್ತೆಗೆ ಹುಡುಕಾಟ ನಡೆಸಲಾಗಿದೆ.