ಗಾಬರಿಬಿದ್ದ ಜನ ಒಂದೇ ದಿನದಲ್ಲಿ ಕೋಟಿ ರೂಪಾಯಿ ಡ್ರಾ ಮಾಡಿದರು
ಚೆನ್ನೈ, ಜನವರಿ 23: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇತ್ತೀಚೆಗೆ ಹೊರಡಿಸಿದ್ದ ಪ್ರಕಟಣೆಯೊಂದನ್ನು ತಪ್ಪಾಗಿ ಅರ್ಥಮಾಡಿಕೊಂಡು ಕಂಗಾಲಾದ ಹಳ್ಳಿಯೊಂದರ ಜನರು ಎದ್ದುಬಿದ್ದು ಓಡಿ ಬ್ಯಾಂಕ್ ಖಾತೆಗಳಲ್ಲಿನ ತಮ್ಮ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ.
ತಮಿಳುನಾಡಿನ ತೂತುಕುಡಿ ಸಮೀಪದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಮತ್ತೆ ಅಪನಗದೀಕರಣ ಬಂದು ತಮ್ಮ ದುಡ್ಡೆಲ್ಲವೂ ಹೋಗಲಿದೆ ಎಂದು ಭಯಗೊಂಡ ಜನರು, ಬ್ಯಾಂಕುಗಳಿಗೆ ಮುಗಿಬೀಳುತ್ತಿದ್ದಾರೆ. ಅವರಿಗೆ ವಾಸ್ತವ ವಿವರಿಸಿ ಮನದಟ್ಟು ಮಾಡಿಸುವಲ್ಲಿ ಬ್ಯಾಂಕ್ ಸಿಬ್ಬಂದಿ ಹೈರಾಣಾಗಿದ್ದಾರೆ.
ಎರಡು ದಿನಗಳ ರಾಷ್ಟ್ರ ವ್ಯಾಪ್ತಿ ಬ್ಯಾಂಕ್ ಮುಷ್ಕರಕ್ಕೆ ಕರೆ
ಬ್ಯಾಂಕ್ ಖಾತೆಗಳನ್ನು ತೆರೆಯುವ ವೇಳೆ 'ನಿಮ್ಮ ಗ್ರಾಹಕರನ್ನು ತಿಳಿಯಿರಿ' (ಕೆವೈಸಿ) ಯೋಜನೆಯಡಿ ದಾಖಲೆಗಳ ದೃಢೀಕರಣಕ್ಕೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪತ್ರವನ್ನೂ ಅಧಿಕೃತ ದಾಖಲೆಯಾಗಿ ಬಳಸಿಕೊಳ್ಳಬಹುದು ಎಂದು ಆರ್ಬಿಐ ನಿರ್ಧಾರ ತೆಗೆದುಕೊಂಡಿತ್ತು.
ಜಾಹೀರಾತು ಅರ್ಥಮಾಡಿಕೊಳ್ಳದೆ ಯಡವಟ್ಟು
ಈ ನಿರ್ಧಾರದ ಹಿನ್ನೆಲೆಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಳೀಯ ಶಾಖೆಯು ಕೆವೈಸಿ ದೃಢೀಕರಣಕ್ಕೆ ಎನ್ಪಿಆರ್ ಪತ್ರವನ್ನೂ ಅಧಿಕೃತ ದಾಖಲೆಯನ್ನಾಗಿ ಸ್ವೀಕರಿಸಲಾಗುತ್ತದೆ ಎಂದು ಜಾಹೀರಾತು ನೀಡಿತ್ತು. ಈ ಜಾಹೀರಾತನ್ನು ಕಂಡು ಕಂಗೆಟ್ಟ ಕಯಾಲಪಟ್ಟಿಣಂ ಗ್ರಾಮದ ನೂರಾರು ಜನರು, ಅದರಲ್ಲಿಯೂ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಬ್ಯಾಂಕ್ ಶಾಖೆಗೆ ತೆರಳಿ ತಮ್ಮ ಹಣ ವಿತ್ ಡ್ರಾ ಮಾಡಲು ಮುಗಿಬಿದ್ದರು.
ನೋಟ್ ಬ್ಯಾನ್ ಆದಾಗ ಅನುಭವಿಸಿದ್ದೇವೆ
ತಾವು ಈಗಾಗಲೇ ಖಾತೆಯಿಂದ 50,000 ರೂ. ವಿತ್ ಡ್ರಾ ಮಾಡಿಕೊಂಡಿದ್ದು, ಶಾಖೆಯ ಎಲ್ಲ ಗ್ರಾಹಕರೂ ಗಾಬರಿಗೊಂಡಿದ್ದಾರೆ ಎಂದು ಸರ್ಕಾರಿ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. 'ಅಪನಗದೀಕರಣ ಜಾರಿಯಾದಾಗ ನಾವು ಅನೇಕ ದಿನಗಳವರೆಗೆ ಬ್ಯಾಂಕ್ ಮುಂದೆ ಸರದಿಯಲ್ಲಿ ನಿಲ್ಲುವ ಸ್ಥಿತಿಯನ್ನು ಒಮ್ಮೆ ಅನುಭವಿಸಿದ್ದೇವೆ. ಆತಂಕಕ್ಕೆ ಒಳಗಾದ ಪ್ರತಿ ಗ್ರಾಹಕರೂ ಬ್ಯಾಂಕ್ಗೆ ಬಂದಿದ್ದಾರೆ. ಎನ್ಪಿಆರ್ ಇನ್ನೂ ಹೆಚ್ಚಿನ ರಾಜ್ಯಗಳಲ್ಲಿ ಉನ್ನತೀಕರಣ ಆಗದೆ ಇದ್ದರೂ ಅದಕ್ಕೆ ಮೊದಲೇ ಆರ್ಬಿಐ ಏಕೆ ಅದನ್ನು ತನ್ನ ಪಟ್ಟಿಯಲ್ಲಿ ಸೇರಿಸಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಸಾಧ್ಯವಾಗದೆ ಬ್ಯಾಂಕ್ ಸಿಬ್ಬಂದಿ ಅಸಹಾಯಕರಾಗುತ್ತಿದ್ದಾರೆ' ಎಂದು ಹೇಳಿದ್ದಾರೆ.
ಇ -ಕೆವೈಸಿ ಪ್ರಕ್ರಿಯೆಗೂ ಡಿಜಿ ಲಾಕರ್ ಬಳಸಲು ಆರ್ ಬಿಐ ಅನುಮತಿ
ಸಮುದಾಯದ ನಾಯಕರ ಮೂಲಕ ಮನವರಿಕೆ
ಅನೇಕ ಸ್ಥಳಗಳಲ್ಲಿ ಬ್ಯಾಂಕ್ ಖಾತೆಗಳಲ್ಲಿ ಕೂಡ ಇದೇ ರೀತಿಯ ಘಟನೆಗಳು ವರದಿಯಾಗುತ್ತಿವೆ ಎಂದು ಬ್ಯಾಂಕ್ ಉದ್ಯೋಗಿಯೊಬ್ಬರು ತಿಳಿಸಿದರು. 'ಕಳೆದ ಮೂರು ದಿನಗಳಲ್ಲಿ ನಮ್ಮ ಗ್ರಾಹಕರು ಭಾರಿ ಪ್ರಮಾಣದ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಹೀಗಾಗಿ ಕಯಾಲಪಟ್ಟಿಣಂ ಗ್ರಾಮದಲ್ಲಿನ ಸಮುದಾಯದ ನಾಯಕರು ಮತ್ತು ಜಮಾತ್ ಸಮಿತಿಯನ್ನು ಸಂಪರ್ಕಿಸಿ ಅವರಿಗೆ ವಾಸ್ತವವನ್ನು ವಿವರಿಸುವ ಪ್ರಯತ್ನ ಮಾಡಿದ್ದೇವೆ. ನಾವು ಎಲ್ಲ ಗ್ರಾಹಕರನ್ನೂ ಮನವೊಲಿಸಿ ಅವರನ್ನು ಮರಳಿ ನಮ್ಮ ಶಾಖೆಗೆ ಬರುವಂತೆ ಮಾಡಲು ಸಾಧ್ಯವೇ ಎನ್ನುವುದು ಕೂಡ ಗೊತ್ತಾಗುತ್ತಿಲ್ಲ' ಎಂದು ಹೇಳಿದರು.
ಒಂದು ಕೋಟಿ ರೂ ವಿತ್ ಡ್ರಾ
ಸೋಮವಾರ ಸಂಜೆಯಿಂದ ಇದುವರೆಗೂ 1 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬ್ಯಾಂಕ್ ಶಾಖೆಯಿಂದ ವಿತ್ ಡ್ರಾ ಮಾಡಲಾಗಿದೆ. ಮಂಗಳವಾರದ ಬಳಿಕ ಸಮುದಾಯದ ಮುಖಂಡರು ಜಾಗೃತಿ ಮೂಡಿಸಿದ ಬಳಿಕವಷ್ಟೇ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿತು. 'ಗ್ರಾಹಕರು ನಮ್ಮ ಮಾತನ್ನು ಕೇಳಲೂ ಸಿದ್ಧರಿರಲಿಲ್ಲ. ಎಷ್ಟರಮಟ್ಟಿಗೆ ಜನರು ಉದ್ವೇಗಕ್ಕೆ ಒಳಗಾಗಿದ್ದರು ಎಂದರೆ, ಸಮುದಾಯಗಳ ಮುಖಂಡರೂ ಅವರ ಮನವೊಲಿಸಲು ಹೆಣಗಾಡಬೇಕಾಯಿತು. ನಮ್ಮ ಗ್ರಾಹಕರಲ್ಲಿ ಹೆಚ್ಚಿನವರು ಮುಸ್ಲಿಮರು. ಅವರಲ್ಲಿ ಬಹುತೇಕರು ಹೆಚ್ಚೂ ಕಡಿಮೆ ತಮ್ಮ ಖಾತೆಯಲ್ಲಿದ್ದ ಅಷ್ಟೂ ಹಣ ತೆಗೆದುಕೊಂಡಿದ್ದಾರೆ' ಎಂದು ತಿಳಿಸಿದರು.
ಅಸ್ತಿತ್ವದಲ್ಲಿಯೇ ಇಲ್ಲದ ದಾಖಲೆ!
ಆದರೆ, ಎನ್ಪಿಆರ್ ಪತ್ರವನ್ನು ಕೆವೈಸಿಯ ಅಧಿಕೃತ ದಾಖಲೆಯನ್ನಾಗಿ ಅನೇಕ ಬ್ಯಾಂಕ್ಗಳು ಇನ್ನೂ ಸೇರ್ಪಡೆ ಮಾಡಿಕೊಂಡಿಲ್ಲ. ಅಸ್ತಿತ್ವದಲ್ಲಿಯೇ ಇಲ್ಲದ ದಾಖಲೆಯೊಂದನ್ನು ಕೆವೈಸಿ ಪಟ್ಟಿಗೆ ಸೇರಿಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎಂದು ಬ್ಯಾಂಕ್ ಆಫ್ ಬರೋಡಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಕೆವೈಸಿಗೆ ಏನೇನು ದಾಖಲೆ ಬೇಕು?
'ಜನರು ಕೆವೈಸಿ ಕುರಿತು ತಪ್ಪು ತಿಳಿದುಕೊಂಡಿದ್ದಾರೆ. ಗ್ರಾಹಕರ ಬಳಿ ಆಧಾರ್ ಕಾರ್ಡ್ ಇದ್ದರೆ ಕೆವೈಸಿಗೆ ಅದು ಸಾಕು. ಅವರ ಬಳಿ ಪಾನ್ ಕಾರ್ಡ್ ಇದ್ದರೆ, ವಿಳಾಸ ಪುರಾವೆಗಾಗಿ ಮತ್ತೊಂದು ದಾಖಲೆಯನ್ನು ಕೇಳುತ್ತೇವೆ. ಹಾಗೆಯೇ ಆಧಾರ್ ಕಾರ್ಡ್ ಇಲ್ಲದವರಿಂದ ಸಾಮಾನ್ಯವಾಗಿ ಎರಡು ದಾಖಲೆಗಳನ್ನು ಕೇಳುತ್ತೇವೆ. ಪಾನ್ ಕಾರ್ಡ್, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಆಧಾರ್ ಕಾರ್ಡ್ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಚೀಟಿಗಳನ್ನು ದಾಖಲೆಯನ್ನಾಗಿ ಪರಿಗಣಿಸುತ್ತೇವೆ. ಇತ್ತೀಚೆಗೆ ಎನ್ಪಿಆರ್ಅನ್ನು ಆರ್ಬಿಐ ತನ್ನ ಪಟ್ಟಿಗೆ ಸೇರಿಸಿತ್ತು. ಹೀಗಾಗಿ ಯಾರಾದರೂ ಎನ್ಪಿಆರ್ ಪತ್ರವನ್ನು ದಾಖಲೆಯಾಗಿ ನೀಡಿದರೆ ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದರ ಕುರಿತು ಜಾಹೀರಾತು ನೀಡಿದ್ದೆವು' ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್ ಎಲ್ ನಾಯಕ್ ತಿಳಿಸಿದರು.