ಕೊರೊನಾ ವೈದ್ಯಕೀಯ ಅವಶ್ಯಕತೆ ಪೂರೈಸಲು ತಮಿಳುನಾಡು ಸರ್ಕಾರದಿಂದ ಮಹತ್ವದ ಹೆಜ್ಜೆ
ಚೆನ್ನೈ, ಮೇ 18: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಲಸಿಕೆ, ಅಮ್ಲಜನಕ ಸೇರಿದಂತೆ ಅವಶ್ಯಕ ವಸ್ತುಗಳ ಕೊರತೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದೆ. ಹೀಗಾಗಿ ಇವುಗಳನ್ನು ರಾಜ್ಯದಲ್ಲಿಯೇ ಉತ್ಪಾದಿಸುವ ಬಗ್ಗೆ ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.
ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರ್ಸ್, ಕೋವಿಡ್ ಲಸಿಕೆ, ಆಧುನಿಕ ಸಲಕರಣೆಗಳು ಹಾಗೂ ಕೊರೊನಾ ವೈರಸ್ಗೆ ಸಂಬಂಧಿಸಿದ ಇತರೆ ಔಷಧಿಗಳನ್ನು ತಮಿಳುನಾಡಿಲ್ಲಿಯೇ ಉತ್ಪಾದನೆ ಮಾಡಿ ಇವುಗಳ ಕೊರತೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಂಗಳವಾರ ನಿರ್ದೇಶನ ನೀಡಿದ್ದಾರೆ. ದೇಶ ಹಾಗೂ ವಿದೇಶಿ ಕಂಪನಿಗಳಿಂದ ತಮಗಿರುವ ಆಸಕ್ತಿಯನ್ನು ಮೇ 31ರ ಒಳಗೆ ವ್ಯಕ್ತಪಡಿಸಲು ಆಹ್ವಾನಿಸಿದೆ.
ಈ ಬಗ್ಗೆ ಸರ್ಕಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು ದೇಶ ವಿದೇಶಗಳಿಂದ ಬರುವ ಕಂಪನಿಗಳ ಆಸಕ್ತಿಯ ಅಭಿಪ್ರಾಯವನ್ನು ಪರಿಶೀಲನೆ ನಡೆಸಲಾಗುತ್ತದೆ ಮತ್ತು ಜೀವರಕ್ಷಕ ಔಷಧಿಗಳು, ಆಮ್ಲಜನಕ ಸ್ಥಾವರ ಸ್ಥಾಪನೆ ಹಾಗೂ ವ್ಯಾಕ್ಸಿನ್ ಉತ್ಪಾದನೆಗೆ ಮೂಲಸೌಕರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.
ಕೈಗಾರಿಕಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಈ ಜೀವ ರಕ್ಷಕ ಔಷಧ ಮತ್ತು ಇತರ ಉಪಕರಣಗಳನ್ನು ಉತ್ಪಾದಿಸಲು ಮುಂದೆ ಬರುವ ಕಂಪನಿಗಳಿಗೆ ಎಲ್ಲಾ ಸಹಾಯವನ್ನು ನೀಡಲಿದೆ. ಕನಿಷ್ಠ 50 ಕೋಟಿ ರೂ. ಹೂಡಿಕೆ ಮಾಡಲು ಸಿದ್ಧವಾಗಿರುವ ಕಂಪನಿಗಳೊಂದಿಗೆ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಜಂಟಿ ಉದ್ಯಮ ಆಧಾರದ ಮೇಲೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ.