ಸ್ವೀಪರ್ ಕೆಲಸಕ್ಕೂ ಎಂಜಿನಿಯರ್, ಎಂಬಿಎ ಪದವೀಧರರಿಂದ ಅರ್ಜಿ!
ಚೆನ್ನೈ, ಫೆಬ್ರವರಿ 6: ಉದ್ಯೋಗಕ್ಕಾಗಿ ಪರದಾಡುತ್ತಿರುವ ಯುವ ಜನತೆ ಈಗ ಯಾವ ಕೆಲಸಕ್ಕೂ ಸಿದ್ಧ ಎನ್ನುವ ಪರಿಸ್ಥಿತಿ ಎದುರಾಗಿದೆ. ದುಬಾರಿ ಹಣ ತೆತ್ತು ಉನ್ನತ ಪದವಿ ಪಡೆದವರೂ ಕೆಲಸ ಸಿಗದೆ, ಸಣ್ಣಪುಟ್ಟ ಉದ್ಯೋಗಗಳಿಗೂ ಅರ್ಜಿ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಸಚಿವಾಲಯದಲ್ಲಿನ ಕ್ಯಾಂಟೀನ್ ಸಪ್ಲೈಯರ್ ಕೆಲಸ ಗಿಟ್ಟಿಸಿಕೊಳ್ಳು ಪದವೀಧರರು ಮುಗಿಬಿದ್ದಿದ್ದು ಸುದ್ದಿಯಾಗಿತ್ತು. ಅದಕ್ಕಿಂತಲೂ ಹೀನಾಯ ಪರಿಸ್ಥಿತಿ ತಮಿಳುನಾಡಿನ ಯುವಜನತೆಯದ್ದು.
13 ವೇಯ್ಟರ್ ಕೆಲಸಕ್ಕೆ 7,000 ಅರ್ಜಿ! ಇದು ವಿದ್ಯಾವಂತರ ಪಾಡು
ಚೆನ್ನೈನಲ್ಲಿರುವ ರಾಜ್ಯ ವಿಧಾನಸಭೆ ಕಾರ್ಯಾಲಯದಲ್ಲಿ ಇರುವ 14 ಪೌರಕಾರ್ಮಿಕರ ಹುದ್ದೆಗಳಿಗೆ ಸುಮಾರು 4,000 ಮಂದಿ ಅರ್ಜಿ ಗುಜರಾಯಿಸಿದ್ದಾರೆ. ಅದರಲ್ಲಿ ವಾಣಿಜ್ಯ, ಕಲೆ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪದವಿ ಪಡೆದವರಲ್ಲದೆ, ಎಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರರೂ ಇದ್ದಾರೆ ಎನ್ನುವುದು ಅಘಾತಕಾರಿ ಸಂಗತಿ.
3930 ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗಲು ಪತ್ರ ಕಳುಹಿಸಲಾಗಿದೆ. 14 ಹುದ್ದೆಗಳ ಪೈಕಿ ಹತ್ತು ಹುದ್ದೆಗಳು ಸಫಾಯಿ ಕರ್ಮಚಾರಿಗಳಿಗೆ ಹಾಗೂ ನಾಲ್ಕು ಪೌರಕಾರ್ಮಿಕರ ಹುದ್ದೆಗಳಾಗಿವೆ. ಈ ಎರಡಕ್ಕೂ 15,700-50,000 ರೂ. ವೇತನ ಮಟ್ಟ ನಿಗದಿಪಡಿಸಲಾಗಿದೆ.
45 ವರ್ಷಗಳಲ್ಲೇ ಭಾರೀ ನಿರುದ್ಯೋಗ ಸಮಸ್ಯೆ, ಕೇಂದ್ರ ಸರ್ಕಾರಕ್ಕೆ ಸಂಕಷ್ಟ?
ಈ ಹುದ್ದೆಗಳಿಗೆ ರಾಜ್ಯದ ಎಲ್ಲ ಮೂಲೆಗಳು ಹಾಗೂ ಸಮುದಾಯಗಳಿಂದ ಅರ್ಜಿ ಬಂದಿವೆ. ಈ ಹುದ್ದೆಗಳಿಗೆ ಶಿಕ್ಷಣ ಅಗತ್ಯವೇ ಇಲ್ಲ. ದೈಹಿಕ ಸ್ಥಿಮಿತತೆ ಕಡ್ಡಾಯ. ನಾಲ್ಕು ಹುದ್ದೆಗಳು ಸಾಮಾನ್ಯ ವರ್ಗ, ನಾಲ್ಕು ಓಬಿಸಿ ಮತ್ತು ಅಲ್ಪಸಂಖ್ಯಾತ, ಮೂರು ಅತಿ ಹಿಂದುಳಿದ ವರ್ಗಗಳು, ಎರಡು ಪರಿಶಿಷ್ಟ ಜಾತಿ ಮತ್ತು ಒಂದು ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.
ಎಂಟೆಕ್, ಬಿಇ, ಎಂಕಾಂ, ಎಂಬಿಎ ಮತ್ತು ಇತರೆ ಪದವಿಗಳನ್ನು ಪಡೆದವರು ಉದ್ಯೋಗಾಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಶಿಕ್ಷಣ ಪಡೆಯದೆಯೇ ಇರುವ ಅವಿದ್ಯಾವಂತರು ಪದವೀಧರೊಂದಿಗೆ ಕೆಲಸಕ್ಕಾಗಿ ಪೈಪೋಟಿ ನಡೆಸಬೇಕಾಗಿದೆ.
ನಿರುದ್ಯೋಗ ಸಮಸ್ಯೆ ಕುರಿತ ವರದಿಯ ಬಗ್ಗೆ ನೀತಿ ಆಯೋಗ ಸ್ಪಷ್ಟನೆ
ಮುಂಬೈನ ಮಂತ್ರಾಲಯ ಕ್ಯಾಂಟೀನ್ನಲ್ಲಿ 13 ಸಪ್ಲೈಯರ್ ಹುದ್ದೆಗಳಿಗೆ 7,000 ಅರ್ಜಿಗಳು ಬಂದಿದ್ದವು. ಉತ್ತರ ಪ್ರದೇಶದಲ್ಲಿ 62 ಗುಮಾಸ್ತ ಹುದ್ದೆಗಳಿಗೆ ಪಿಚ್ಡಿ ಪದವಿ ಪಡೆದವರು ಸೇರಿದಂತೆ 93,000 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಹುದ್ದೆಗಳಿಗೆ ಗರಿಷ್ಠ 4-5ನೇ ತರಗತಿ ವಿದ್ಯಾರ್ಹತೆ ಕೇಳಲಾಗಿತ್ತು.