ಕೆರೆಯಲ್ಲ ಈ ಬಾರಿ ಸಮುದ್ರದಲ್ಲೇ ಉಕ್ಕುತಿದೆ ವಿಷಕಾರಿ ನೊರೆ!
ಚೆನ್ನೈ, ಡಿಸೆಂಬರ್.02: ಸಿಲಿಕಾನ್ ಸಿಟಿಗೂ ಕಸದ ಸಮಸ್ಯೆಗೂ ಬಿಡಲಾರದ ನಂಟು. ಇಲ್ಲಿ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಕಸದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆಳ್ಳಂದೂರು, ವರ್ತೂರು ಕೆರೆಗಳಲ್ಲಿ ನೊರೆ ಉಕ್ಕಿ ಬರುತ್ತದೆ. ಇದು ಬೆಂಗಳೂರಿನ ಮಂದಿಗೆ ಕಾಮನ್ ಆಗಿ ಬಿಟ್ಟಿದೆ.
ಕಸದ ಸಮಸ್ಯೆಯಿಂದ ಕೆರೆಗಳಲ್ಲಿ ನೊರೆ ಕಾಣಿಸಿಕೊಳ್ಳುವುದನ್ನೆಲ್ಲ ಕೇಳಿದ್ದೀರಾ, ನೋಡಿದ್ದೀರ. ಆದರೆ, ಇದೇ ಕಸದ ಸಮಸ್ಯೆಯಿಂದ ಸಮುದ್ರದಲ್ಲೇ ನೊರೆ ಉಕ್ಕಿ ಬಂದಿರುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.
ತಮಿಳುನಾಡಿನಲ್ಲಿ ಮಳೆಗೆ ಕುಸಿದ ಮೂರು ಮನೆಗಳು: 17 ಮಂದಿ ಸಾವು
ಹೌದು, ತಮಿಳುನಾಡು ರಾಜಧಾನಿ ಚೆನ್ನೈನ ಮರೀನಾ ಬೀಚ್ ಕಲುಷಿತಗೊಂಡಿದೆ. ಪ್ರವಾಸಿಗರ ಪಾಲಿನ ಸ್ವರ್ಗ, ದೇಶದ ಅತಿದೊಡ್ಡ ಸಮುದ್ರ ಎನಿಸಿಕೊಂಡಿದ್ದ ಮರೀನಾ ಬೀಚ್ ನ ಶ್ರೀನಿವಾಸಪುರಂನ ಬಳಿ ಈಗ ನೊರೆ ಉಕ್ಕಿ ಬರುತ್ತಿದೆ.
ಚೆನ್ನೈನಲ್ಲಿ ಮರೀನಾ ಬೀಚ್ ಸುತ್ತಮುತ್ತಲಿನಲ್ಲಿರುವ ಆಸ್ಪತ್ರೆ ಹಾಗೂ ಕಾರ್ಖಾನೆಗಳ ಕಲುಷಿತ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ಇದರಿಂದ ಸಮುದ್ರದಲ್ಲಿ ನೊರೆ ಉಕ್ಕುತ್ತಿದ್ದು, ಕೆಟ್ಟ ವಾಸನೆಯಿಂದ ಜನರು ನಿತ್ಯ ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ಕಳೆದ ಕೆಲ ದಿನಗಳಿಂದ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಇದೂ ಕೂಡಾ ಸಮುದ್ರದಲ್ಲಿ ನೊರೆ ಕಾಣಿಸಿಕೊಳ್ಳಲು ಕಾರಣ ಎಂದು ಕೆಲವು ಪರಿಸರವಾದಿಗಳು ಹೇಳುತ್ತಿದ್ದಾರೆ. ಮರೀನಾ ಬೀಚ್ ನಲ್ಲಿ ನೊರೆ ಉಕ್ಕುತ್ತಿದ್ದು ಈಗಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಈ ಚಿತ್ರಗಳೇ ಹೇಳುತ್ತಿವೆ ನೋಡಿ.