ರಾಷ್ಟ್ರೀಯ ಶಿಕ್ಷಣ ನೀತಿ: ಮೂರು ಭಾಷೆಯ ಸೂತ್ರ ತಿರಸ್ಕರಿಸಿದ ತಮಿಳುನಾಡು
ಚೆನ್ನೈ, ಆಗಸ್ಟ್ 03: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯಲ್ಲಿ ಪ್ರಸ್ತಾಪಿಸಲಾದ ಕೇಂದ್ರದ ಮೂರು ಭಾಷೆಯ ಸೂತ್ರವನ್ನು ತಮಿಳುನಾಡು ಸರ್ಕಾರ ತಿರಸ್ಕರಿಸಿದೆ.
ಸೋಮವಾರ ಈ ಕುರಿತು ನಿರ್ಧಾರ ಪ್ರಕಟಿಸಿರುವ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ 'ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅನುಸರಿಸುತ್ತಿರುವ ಎರಡು ಭಾಷೆಯ ನೀತಿಯನ್ನು ಬದಲಾಯಿಸುವುದಿಲ್ಲ' ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ-2020: ಉನ್ನತ ಶಿಕ್ಷಣ ಅಭಿವೃದ್ಧಿಗೆ ಆನೆಬಲ
ಈ ಸಂಬಂಧ ರಾಜ್ಯದಲ್ಲಿ ಕ್ಯಾಬಿನೆಟ್ ಸಭೆ ನಡೆಸಿದ ಸಿಎಂ ಪಳನಿಸ್ವಾಮಿ ಚರ್ಚೆಯ ಬಳಿಕ 'ರಾಜ್ಯದಲ್ಲಿ ಹಲವು ದಶಕಗಳಿಂದ ಎರಡು ಭಾಷೆಯ ನೀತಿಯನ್ನು ಅನುಸರಿಸುತ್ತಿದೆ. ಅದರಲ್ಲಿ ಯಾವುದೇ ಬದಲಾವಣೆ ತರುವುದು ಬೇಡ. ಮೂರು ಭಾಷೆ ಸೂತ್ರದಲ್ಲಿ ನಮಗೆ ವಿನಾಯಿತಿ ನೀಡಿ' ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
'ತಮಿಳುನಾಡು ಕೇಂದ್ರದ ಮೂರು ಭಾಷಾ ನೀತಿಯನ್ನು ಎಂದಿಗೂ ಅನುಮತಿಸುವುದಿಲ್ಲ. ರಾಜ್ಯದಲ್ಲಿ ದ್ವಿಭಾಷಾ ನೀತಿಯೊಂದಿಗೆ (ತಮಿಳು ಮತ್ತು ಇಂಗ್ಲಿಷ್) ಶಿಕ್ಷಣ ಮುಂದುವರಿಯುತ್ತದೆ' ಎಂದು ಮುಖ್ಯಮಂತ್ರಿ ಕೇಂದ್ರಕ್ಕೆ ಸಂದೇಶ ರವಾನಿಸಿದ್ದಾರೆ.
'ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಮೂರು ಭಾಷೆಯ ಸೂತ್ರವು ನೋವಿನಿಂದ ಕೂಡಿದೆ ಮತ್ತು ದುಃಖಕರವಾಗಿದೆ. ಪ್ರಧಾನಿ (ನರೇಂದ್ರ ಮೋದಿ) ಮೂರು ಭಾಷೆಯ ನೀತಿಯನ್ನು ಮರುಪರಿಶೀಲಿಸಬೇಕು' ಎಂದು ಸಿಎಂ ಮನವಿ ಮಾಡಿದರು. ಈ ವಿಷಯದಲ್ಲಿ ರಾಜ್ಯಗಳು ತಮ್ಮದೇ ಆದ ನೀತಿಯನ್ನು ಜಾರಿಗೆ ತರಲು ಕೇಂದ್ರವು ಅವಕಾಶ ನೀಡಬೇಕು ಎಂದು ವಿನಂತಿಸಿದ್ದಾರೆ.